×
Ad

ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಜಾಫರ್ ಶರೀಫ್, ಅಂಬರೀಶ್‌ಗೆ ನುಡಿ ನಮನ

Update: 2018-11-28 19:15 IST

ಉಡುಪಿ, ನ. 28: ಕಾಂಗ್ರೆಸ್ ಪಕ್ಷದ ಉನ್ನತ ನಾಯಕರಾದ ಜಾಫರ್ ಶರೀಫ್ ಹಾಗೂ ಅಂಬರೀಶ್‌ರನ್ನು ಕಳಕೊಂಡು ಪಕ್ಷ ಅತೀ ದೊಡ್ಡ ನಷ್ಟವನ್ನು ಅನುಭವಿಸಿದೆ. ಈ ಇಬ್ಬರ ಸೇವೆಯನ್ನು ಕಾಂಗ್ರೆಸ್ ಪಕ್ಷದ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಭರತ್ ಮುಂಡೋಡಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಇತ್ತೀಚೆಗೆ ಅಗಲಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಜಾಪರ್ ಶರೀಫ್ ಮತ್ತು ಅಂಬರೀಶ್‌ಗೆ ಶೃದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಓರ್ವ ಜನಪ್ರಿಯ ನಟನಾಗಿರುವ ಹೊತ್ತಿನಲ್ಲೇ ರಾಜಕಾರಣಿಯಾಗಿಯೂ ಜನಮಾನಸದಲ್ಲಿ ನೆಲೆ ನಿಂತವರು ಅಂಬರೀಶ್. ತನ್ನ ಅಧಿಕಾರಾವಧಿಯಲ್ಲಿ ಜನಪರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ನೇರ ನಡತೆಯಿಂದ ಅಂಬರೀಶ್ ಜನಪ್ರಿಯರಾಗಿದ್ದರು ಎಂದರು.

ಜಾಫರ್ ಶರೀಫ್ ಜಾತ್ಯಾತೀತ ನೆಲೆಗೆ ಬದ್ದರಾಗಿ ಯಾವ ಸಂದರ್ಭದಲ್ಲೂ ಕೂಡಾ ತನ್ನ ನಿಲುವಿಂದ ವಿಚಲಿತರಾಗದೆ ರಾಜಕಾರಣ ಮಾಡಿಕೊಂಡು ಬಂದವರು. ರೈಲ್ವೆ ಗೇಜ್ ಪರಿವರ್ತನೆಗೆ ಗಣನೀಯ ಕೊಡುಗೆ ನೀಡಿದ ಷರೀಪ್ ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ರೈಲ್ವೆ ಅಭಿವೃದ್ಧಿಯನ್ನು ದಕ್ಷಿಣ ಭಾರತಕ್ಕೂ ವಿಸ್ತರಿಸಿ ಕ್ರಾಂತಿ ಮಾಡಿದವರು. ಅವರ ಕಾಲದಲ್ಲಿ 1000 ಕಿ.ಮೀ.ನಷ್ಟು ರೈಲ್ವೆ ಹಳಿಗಳನ್ನು ಕರ್ನಾಟಕ ರಾಜ್ಯ ಒಂದರಲ್ಲೇ ವಿಸ್ತರಿಸಲಾಗಿತ್ತು. ಬೆಂಗಳೂರಿನ ಯಲಹಂಕದಲ್ಲಿ ರೈಲು ಮತ್ತು ಗಾಲಿ ಕಾರ್ಖಾನೆ ಸ್ಥಾಪನೆ ಯಾಗಲು ಷರೀಫ್ ಶ್ರಮಿಸಿದ್ದರು. ಇಂತಹ ಧೀಮಂತ ನಾಯಕರು ನಡೆದ ದಾರಿಯಲ್ಲಿ ನಡೆಯುವುದು ನಾವು ಅವರಿಗೆ ಅರ್ಪಿಸಬಹುದಾದ ನಿಜವಾದ ಶ್ರದ್ಧಾಂಜಲಿ ಎಂದು ಮುಂಡೋಡಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಉಭಯ ನಾಯಕರು ಇಂದು ನಮ್ಮ ಮುಂದಿಲ್ಲ. ಅವರು ನಡೆದ ದಾರಿ ನಮ್ಮ ಮುಂದಿದೆ. ನಾವು ಆ ದಾರಿಯಲ್ಲಿ ಸಾಗಬೇಕಾಗಿದೆ. ಇವರಿಬ್ಬರ ನಿಧನದಿಂದ ಕರ್ನಾಟಕ ದೂರದೃಷ್ಟಿಯ ರಾಜಕಾರಣ ಹಾಗೂ ಮೌಲ್ಯಯುತ ರಾಜಕಾರಣಿಗಳನ್ನು ಕಳಕೊಂಡಿದೆ ಎಂದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸುಧಾಕರ ಕೋಟ್ಯಾನ್, ಪ್ರವೀಣ್ ಶೆಟ್ಟಿ, ಸರಳಾ ಕಾಂಚನ್, ಉಸ್ತುವಾರಿ ಗಳಾದ ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಹಬೀಬ್‌ಆಲಿ, ಮಲ್ಲಿಕಾ ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರೀಶ್ ಕಿಣಿ, ಡಾ. ಸುನಿತಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಆರ್‌ಜಿಪಿಆರ್‌ಎಸ್ ಅಧ್ಯಕ್ಷೆ ರೊಶನಿ ಒಲಿವರ್, ಐಟಿ ಸೆಲ್ ಅಧ್ಯಕ್ಷ ಸತೀಶ್ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಜಿಲ್ಲಾ ಕಾನೂನು ಘಟಕ ಆಧ್ಯಕ್ಷ ಹರೀಶ್ ಶೆಟ್ಟಿ ಪಾಂಗಾಳ, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಯತೀಶ್ ಕರ್ಕೇರಾ, ಪ್ರಧಾನ ಕಾರ್ಯದರ್ಶಿ ಬಿ. ರಸಿಂಹ ಮೂರ್ತಿ, ಉಪಸ್ಥಿತರಿದ್ದರು.

ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ, ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News