×
Ad

‘ಮಲಬಾರ್ ಗ್ರೂಪ್’ನ ಸಾಮಾಜಿಕ ಸೇವೆ ಮಾದರಿ: ಸಚಿವ ಯು.ಟಿ.ಖಾದರ್

Update: 2018-11-30 17:46 IST

ಮಂಗಳೂರು, ನ.30: ಸಾಮಾಜಿಕ ನೆಲೆಗಟ್ಟಿನಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ಸಾಮಾಜಿಕ ಕಾಳಜಿಯನ್ನು ಹೊಂದಿದೆ. ಸಾವಿರಾರು ಬಡವರಿಗೆ ಆಶ್ರಯದಾತರಾಗಿದ್ದು, ಇದೊಂದು ಮಾದರಿ ಕಾರ್ಯವಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಗರದ ಫಳ್ನೀರ್‌ನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂನ ಸಭಾಂಗಣದಲ್ಲಿ ಮಲಬಾರ್ ಸಿಎಸ್‌ಆರ್ ಹೌಸಿಂಗ್ ಚಾರಿಟಿ ವಿಭಾಗದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಸತಿ ನಿರಾಶ್ರಿತರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸಮಾಜ ಸೇವೆಯೇ ದೇಶಪ್ರೇಮವಾಗಿದೆ. ದೇಶ ಬಲಿಷ್ಠವಾಗಲು ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ, ಬದಲಾಗಿ ಎಲ್ಲರೂ ಪಾಲ್ಗೊಳ್ಳಬೇಕು. ದೇಶದ ಪ್ರತಿಯೊಬ್ಬ ಸಾಮಾನ್ಯನೂ ಬಲಿಷ್ಠವಾದ, ಸ್ವಾಭಿಮಾನದ ಬದುಕನ್ನು ಕಂಡಾಗ ದೇಶ ಬಲಿಷ್ಠವಾಗಲು ಸಾಧ್ಯ. ಅದಕ್ಕೆ ಪೂರಕ ಕಾರ್ಯಗಳನ್ನು ಮಲಬಾರ್ ಸಂಸ್ಥೆ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ವಸತಿಗೆ ಸಂಬಂಧಿಸಿದಂತೆ ಸಾಯುವ ಮೊದಲು ಪ್ರತಿಯೊಬ್ಬ ಬಡವನ ತಲೆಯ ಮೇಲೊಂದು ಸೂರು ಇರಬೇಕು ಎನ್ನುವುದು ಕನಸಾಗಿರುತ್ತದೆ. ಅಂತಹ ಬಡವರ ಕನಸನ್ನು ಮಲಬಾರ್ ಸಂಸ್ಥೆ ನನಸು ಮಾಡಿದೆ. ಎಲ್ಲ ಜಾತಿ, ಮತ, ವರ್ಗದವರಿಗೆ ಸಮಾನವಾಗಿ ವಸತಿಯನ್ನು ಹಂಚುವ ಕೆಲಸವನ್ನು ಮಾಡಿರುವುದು ಶ್ಲಾಘನೀಯ. ಇದೊಂದು ಮಹತ್ವಕಾರಿ ಯೋಜನೆಯಾಗಿದ್ದು, ಸಂಸ್ಥೆಯ ನಿರ್ದೇಶಕರು, ಮಾಲಕರು ದೂರದೃಷ್ಟಿ ಇಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸೇವೆ ನೀಡುತ್ತಿದ್ದಾರೆ. ಸಂಸ್ಥೆಗೆ ದೇವರು ಆಶೀರ್ವದಿಸಲಿ ಎಂದು ಶುಭ ಹಾರೈಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 1993ರಲ್ಲಿ ಕ್ಯಾಲಿಕಟ್‌ನಲ್ಲಿ ಜನ್ಮ ತಾಳಿದ ಮಲಬಾರ್ ಸಮೂಹ ಸಂಸ್ಥೆಯು ಕೇವಲ ವ್ಯವಹಾರಿಕ ದೃಷ್ಟಿಯಿಂದ ಮಾತ್ರವಲ್ಲದೆ, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಸಾಮಾಜಿಕ ಸೇವೆ ಮಲಬಾರ್ ಸಮೂಹ ಸಂಸ್ಥೆಯ ತಿರುಳು ಆಗಿದೆ ಎಂದು ತಿಳಿಸಿದರು.

ಕಳೆದ ಎರಡು ದಶಕಗಳಲ್ಲಿ ಸಮೂಹವು ಸಿಎಸ್‌ಆರ್ ಚಟುವಟಿಕೆಗಳಾದ ಮೆಡಿಕಲ್ ಚಾರಿಟಿ ಅಡಿಯಲ್ಲಿ ಜೀವ ಉಳಿಸುವ ಔಷಧಗಳ ಉಚಿತ ಪೂರೈಕೆ, ಹೌಸಿಂಗ್ ಚಾರಿಟಿ ಅಡಿಯಲ್ಲಿ ಮನೆಯಿಲ್ಲದವರಿಗೆ ಮನೆಗಳನ್ನು ನಿರ್ಮಿಸುವ ಹಣಕಾಸಿನ ಸಹಾಯ, ಎಂಪವರ್‌ಮೆಂಟ್ ವುಮನ್‌ವುಡ್ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರನ್ನು ಸಶಕ್ತಗೊಳಿಸುವ ಕಾರ್ಯಕ್ರಮಗಳು, ವಿದ್ಯಾರ್ಥಿ ವೇತನ, ಪರಿಸರ ಸಂರಕ್ಷಣಾ ಚಟುವಟಿಕೆಗಳು ಮುಂತಾದವುಗಳಂತಹ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಿಗೆ ತನ್ನ ಲಾಭಾಂಶದ ಶೇ.5ರಷ್ಟು ವಿನಿಯೋಗಿಸುತ್ತಿರುವುದು ಒಳ್ಳೆಯ ವಿಷಯವಾಗಿದೆ ಎಂದರು.

ಮಲಬಾರ್ ಮೆಡಿಕಲ್ ಚಾರಿಟಿ 1999ರಲ್ಲಿ ಆರಂಭಿಸಿ, ಅದರ ಮೂಲಕ ಆರು ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸುಮಾರು 31 ಕೋಟಿ ರೂ. ಮೊತ್ತದ ಉಚಿತ ಔಷಧಿ ನೀಡಲಾಗಿದೆ. ಮಲಬಾರ್‌ ಹೌಸಿಂಗ್ ಚಾರಿಟಿ 2004ರಲ್ಲಿ ಆರಂಭಗೊಂಡು ಇದುವರೆಗೆ 14,034 ಬಡ ನಿರ್ಗತಿಕರಿಗೆ ಮನೆ ನಿರ್ಮಿಸಲು ಸುಮಾರು 39 ಕೋಟಿ ರೂ.ನ್ನು ವಿನಿಯೋಗಿಸಲಾಗಿದೆ. ಇದರಲ್ಲಿ ಮಂಗಳೂರು ಶಾಖೆಯ ಅಧೀನದಲ್ಲಿ 220 ಫಲಾನುಭವಿಗಳಿಗೆ 1,06,56,793 ರೂ. ಮಲಬಾರ್ ಸಂಸ್ಥೆ ವ್ಯಯಿಸಿದೆ ಎಂದರು.

ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಎಂಪವರಿಂಗ್ ವುಮನ್‌ವುಡ್ ಕಾರ್ಯಕ್ರಮದ ಮೂಲಕ 19,326 ಉತ್ತಮ ಕಲಿಕೆಯ ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗಕ್ಕಾಗಿ 4,03,07,250 ರೂ. ವಿದ್ಯಾರ್ಥಿ ವೇತನ ನೀಡಿದ್ದು, ಇದರಲ್ಲಿ ಕರ್ನಾಟಕದಿಂದ 5,343 ವಿದ್ಯಾರ್ಥಿನಿಯರಿಗೆ 1,00,86,000 ರೂ. ವಿದ್ಯಾರ್ಥಿ ವೇತನವನ್ನು ಸಂಸ್ಥೆ ನೀಡಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣಾ ಚಟುವಟಿಕೆಯ ಭಾಗವಾಗಿ ‘ಕ್ಲೀನ್ ಮಂಗಳೂರು’ ಎಂಬ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಪ್ರಧಾನಮಂತ್ರಿಯ ಸ್ವಚ್ಛ ಭಾರತ ಯೋಜನೆಯಡಿ ನಡೆಸಲಾಗುತ್ತಿದೆ. ಸಿಎಸ್‌ಆರ್ ಚಟುವಟಿಕೆಯಲ್ಲಿ ಈ ದಿನದವರೆಗೆ ಮಲಬಾರ್ ಗ್ರೂಪ್‌ನ 81,22,02,934 ರೂ. ವಿನಿಯೋಗಿಸಿದೆ. ಇದರಲ್ಲಿ ಮಂಗಳೂರು ಶಾಖೆಯು 1,42,99,775 ರೂ.ನ್ನು ವಿನಿಯೋಗಿಸಲಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ‘ಹೋಮ್ ಫಾರ್ ದಿ ಹೋಮ್‌ಲೆಸ್’ ಯೋಜನೆಯಡಿ 45 ವಸತಿ ನಿರಾಶ್ರಿತರಿಗೆ ವಸತಿ ನಿರ್ಮಿಸಲು ಸಹಾಯಧನದ ಚೆಕ್‌ಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ ಚಂದ್ರ ಆಳ್ವ, ಜಿಪಂ ಸದಸ್ಯ ಶಾಹುಲ್ ಹಮೀದ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ನಿರ್ದೇಶಕ ಕರುಣಾಕರನ್, ಮಲಬಾರ್ ಗೋಲ್ಡ್‌ನ ಮಂಗಳೂರು ಸ್ಟೋರ್ ಹೆಡ್ ಶರತ್ ಚಂದ್ರನ್, ಉಡುಪಿ ಮಲಬಾರ್ ಗೋಲ್ಡ್‌ನ ಸ್ಟೋರ್ ಹೆಡ್ ಹಫೀಝ್ ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News