ಲೈಂಗಿಕ ಅಲ್ಪಸಂಖ್ಯಾತರಿಗೆ ಸಮಾಜದ ಮನ್ನಣೆ ದೊರೆಯಲಿ: ಡಾ.ಅಕ್ಕಯಿ ಪದ್ಮಶಾಲಿ

Update: 2018-12-03 12:50 GMT

ಕೊಣಾಜೆ, ಡಿ. 3: ಲೈಂಗಿಕ ಅಲ್ಪಸಂಖ್ಯಾತರಿಗೂ ಮಾನವೀಯ ಮೌಲ್ಯಗಳು, ಹೃದಯವಂತಿಕೆ ಇದೆ. ಆದರೆ ನಮ್ಮ ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಅವರಿಗೂ ಸಮಾಜದಲ್ಲಿ ಸಮಾನ ಗೌರವ, ಶಿಕ್ಷಣ, ಮೀಸಲಾತಿಗಳು, ಸೌಲಭ್ಯಗಳು ದೊರೆಯುವಂತಾಬೇಕು ಎಂದು ಕರ್ನಾಟಕ ರಾಜೋತ್ಸವ ಪುರಸ್ಕøತೆ ಹಾಗೂ ಖ್ಯಾತ ಹೋರಾಟಗಾರ್ತಿ ಬೆಂಗಳೂರಿನ ಡಾ.ಅಕ್ಕಯಿ ಪದ್ಮಶಾಲಿ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸೋಮವಾರ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ 'ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯಾತರು: ಸಮಸ್ಯೆಗಳು ಮತ್ತು ಸವಾಲುಗಳು' ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಲೈಂಗಿಕ ಅಲ್ಪಸಂಖ್ಯಾತರನ್ನು ಅವರ ಕುಟುಂಬವೇ ಪರಿಗಣಿಸುವ ಸ್ಥಿತಿಯಲ್ಲಿಲ್ಲ. ಬಳಿಕ ಸ್ನೇಹಿತರು, ಸಮಾಜ ಅವರನ್ನು ತುಚ್ಚವಾಗಿ ನೋಡುವುದಲ್ಲದೆ ಅವರ ಬದುಕನ್ನೇ ಅತಂತ್ರವಾಗಿಸುತ್ತದೆ. ಇದರಿಂದಾಗಿ ಅನಿವಾರ್ಯವಾಗಿ ಇತ್ತ ಶಿಕ್ಷಣವೂ ಇಲ್ಲದೆ ಬೀದಿಗೆ ತಳ್ಳಲ್ಪಡುತ್ತಾರೆ. ಹೀಗೆ ಏನೂ ತಪ್ಪು ಮಾಡದೆ ಬೀದಿಗೆ ತಳ್ಳಲ್ಪಟ್ಟು ನರಕಸದ್ರಶ್ಯವಾಗಿ ಜೀವನ ನಡೆಸುವ ಇವರ ಸ್ಥಿತಿಯನ್ನು ನಾವು ಮಾನವೀಯ ನೆಲೆಯಲ್ಲಿ ನೋಡುವಂತಾಗಬೇಕು. ಪ್ರಮುಖವಾಗಿ ಕುಟುಂಬದಲ್ಲಿ ಅವರಿಗೆ ಮನ್ನಣೆ ಸಿಕ್ಕಿದರೆ ಮುಂದೆ ಸಮಾಜದಲ್ಲಿಯೂ ಮನ್ನಣೆ ಸಿಗುತ್ತದೆ ಎಂದು ಹೇಳಿದರು.

ಮುಖ್ಯವಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ, ಕೌಶಲ ತರಬೇತಿ, ಉದ್ಯೋಗ ಮೀಸಲಾತಿ  ನೀಡುವಂತಹ ಪ್ರಯತ್ನಗಳು ಇನ್ನಾದರೂ ನಡೆದರೆ ಲೈಂಗಿಕ ಅಲ್ಪಸಂಖ್ಯಾತರು ಬೀದಿ ಬದಿಯಲ್ಲಿ ಬಿಕ್ಷೆ ಬೇಡುವ ಬದಲು ತಮ್ಮ ಸ್ವಂತ ಶಕ್ತಿಯಿಂದಲೇ ಮೇಲೆ ಸದೃಡ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಸ್ತತ ಕಾಲಘಟ್ಟದಲ್ಲಿ ಸರಕಾರ, ವಿಶ್ವವಿದ್ಯಾನಿಲಯಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಮೀಸಲಾತಿ ಒದಗಿಸುವುದು ಬಹಳ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಈಗಾಗಲೇ ಮೀಸಲಾತಿ ಕ್ರಮವನ್ನು ಅನುಸರಿಸುತ್ತಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಸಹಕಾರದೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ.ಅವರು, ಇಂದಿನ 21 ಶತಮಾನದಲ್ಲಿಯೂ ಲೈಂಗಿಕ ಅಲ್ಪಸಂಖ್ಯಾತರು ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇವರ ಮೇಲಾಗುತ್ತಿರು ದೌರ್ಜನ್ಯಗಳನ್ನು ತಡೆಗಟ್ಟಬೇಕಾದರೆ ಶೈಕ್ಷಣಿಕ ಸೌಲಭ್ಯಗಳೊಂದಿಗೆ ಸಮಾಜ ಅವರನ್ನು ಸ್ವೀಕರಿಸಬೇಕಿದೆ. ಇಂತಹ ಸಮಸ್ಯೆಗಳ ನಡುವೆಯೂ ಕೆಲವೊದೆಡೆ ಲೈಂಗಿಕ ಅಲ್ಪಸಂಖ್ಯಾತರು ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಅನಿತಾ ರವಿಶಂಕರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ವಜಿದಾ ಬಾನು ಅವರು ಡಾ.ಅಕ್ಕಯಿ ಪದ್ಮಶಾಲಿಯವರನ್ನು ಪರಿಚಯಿಸಿದರು.

ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಸ್ವಾಗತಿಸಿದರು. ಕಲಾ ವಿಭಾಗದ ಡೀನ್ ಪ್ರೊ.ಕಿಶೋರಿ ನಾಯಕ್ ವಂದಿಸಿದರು. ಅತಿಥಿ ಉಪನ್ಯಾಸಕಿ ಲಿಝ್ಬೆತ್ ಹಾಗೂ ವಿದ್ಯಾರ್ಥಿ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ.ಅಕ್ಕಯಿ ಪದ್ಮಶಾಲಿಯವರೊಂದಿಗೆ ವಿವಿ ಪ್ರಾದ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಸಂವಾದ ನಡೆಸಿದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News