ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಶಿರ್ವ, ಡಿ.5: ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಡಿ. 20ರಂದು ಕುತ್ಯಾರು ಶ್ರೀಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವ ಕಾಪು ತಾಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಮಂಗಳವಾರ ಶಿರ್ವದ ಅಚ್ಚುತ ಸದನದಲ್ಲಿ ಜರಗಿತು.
ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಈ ಸಾಹಿತ್ಯ ಸಮ್ಮೇಳನವು ಕಾಪು ತಾಲೂಕಿನ ಪ್ರಥಮ ಸಮ್ಮೇಳವಾಗಿ ಇತಿಹಾಸದಲ್ಲಿ ದಾಖಲಾಗಲಿರುವು ದರಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ. ಹೊಸ ತಾಲೂಕಿನ ವಿವಿಧ ಆಯಾಮಗಳ ಪರಂಪರೆ ಮತ್ತು ಸಾಧ್ಯತೆಗಳ ಪರಿಕಲ್ಪನೆ ಯನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ಸಮಯ ಪಾಲನೆ ಒತ್ತು ನೀಡುವುದು ಅಗತ್ಯ. ಆದಷ್ಟು ವಿದ್ಯಾರ್ಥಿ ಸಮೂದಾಯವನ್ನು ಒಳಗೊಳ್ಳುವ ಮೂಲಕ ಹೊಸಜನಾಂಗವು ಕನ್ನಡ ನಾಡು ನುಡಿಯತ್ತ ಆಕರ್ಷಿಸುವಂತ ಕೆಲಸ ಮಾಡಬೇಕು ಎಂದರು.
ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕುತ್ಯಾರು ಕೃಷ್ಣಮೂರ್ತಿ ಭಟ್ ಶುಭಕೋರಿದರು. ಉಡುಪಿ ಜಿಲ್ಲಾ ಕಸಪಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕುತ್ಯಾರು ಶ್ರೀಪರಶುರಾಮ ಕ್ಷೇತ್ರದ ಧರ್ಮದರ್ಶಿ ಶಂಭುದಾಸ್ ಗುರೂಜಿ, ಕಾಪು ತಾಲೂಕು ಕಸಪಾ ಘಟಕದ ಕೋಶಾಧಿಕಾರಿ ಎಸ್.ಎಸ್. ಪ್ರಸಾದ್, ಸಮಿತಿಯ ಸದಸ್ಯರಾದ ಕೃಷ್ಣಕುಮಾರ್ ಮಟ್ಟು, ಹರೀಶ್ ಕಟಪಾಡಿ, ದೆಂದೂರು ದಯಾನಂದ ಶೆಟ್ಟಿ, ಶಿವಾನಂದ ಕಾಮತ್, ಗಣೇಶ್ ರಾವ್ ಎಲ್ಲೂರು ಉಪಸ್ಥಿತರಿದ್ದರು.
ಕಾಪು ತಾಲೂಕು ಕಸಪಾ ಘಟಕಾಧ್ಯಕ್ಷ ಪುಂಡಲೀಕ ಮರಾಠೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ಕು್ಯಾರು ಪ್ರಸಾದ್ ಶೆಟ್ಟಿ ವಂದಿಸಿದರು.