ಬೈಕ್-ಲಾರಿ ಅಪಘಾತ: ಚಾಲಕ ಮೃತ್ಯು
Update: 2018-12-06 17:44 GMT
ಮಂಗಳೂರು, ಡಿ. 6: ನಗರದ ಪಾಂಡೇಶ್ವರದ ಬಳಿ ಗುರುವಾರ ಮಧ್ಯಾಹ್ನ ಮೀನಿನ ಲಾರಿಯೊಂದು ಮೋಟಾರ್ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೊಕ್ಕೋಟು ಸಮೀಪದ ಕುತ್ತಾರ್ ಪಿಲಾರ್ ಪ್ರಕಾಶ್ನಗರದ ರವಿ ಆಚಾರ್ಯ (36) ಸಾವನ್ನಪ್ಪಿದ್ದಾರೆ.
ರವಿ ಆಚಾರ್ಯ ಅವರು ನಗರದ ಚಿನ್ನಾಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಮನೆಯಿಂದ ಊಟ ಮಾಡಿ ತನ್ನ ಬೈಕ್ನಲ್ಲಿ ಮಂಗಳಾದೇವಿ- ಪಾಂಡೇಶ್ವರ ಮಾರ್ಗವಾಗಿ ಚಿನ್ನಾಭರಣ ಅಂಗಡಿಗೆ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಮೀನಿನ ಲಾರಿ ಢಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.
ಈ ಕುರಿತು ನಗರ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.