ಡಿ.9: ಮಂಗಳೂರಿನಲ್ಲಿ ಸಮಸ್ತ ಶರೀಅತ್ ಸಂರಕ್ಷಣಾ ಸಮ್ಮೇಳನ

Update: 2018-12-07 12:12 GMT

ಮಂಗಳೂರು, ಡಿ.7: ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿಯ ವತಿಯಿಂದ ‘ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಕೈ ಜೋಡಿಸೋಣ’ ಎಂಬ ಘೋಷಣೆಯೊಂದಿಗೆ ಡಿ.9ರಂದು ನಗರದ ನೆಹರೂ ಮೈದಾನದಲ್ಲಿ ಶರೀಅತ್ ಸಂರಕ್ಷಣಾ ರ್ಯಾಲಿ ಮತ್ತು ಸಮ್ಮೇಳನ ಜರುಗಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

ನಗರದ ಖಾಸಗಿ ಹೊಟೇಲಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮೀಯರಿಗೂ ಅವರವರ ಧರ್ಮದ ಪ್ರಕಾರ ಬದುಕು ನಡೆಸುವ ಹಕ್ಕುಗಳನ್ನು ಸಂವಿಧಾನ ನೀಡಿದೆ. ಆದರೆ ಇತ್ತೀಚೆಗೆ ಸಂವಿಧಾನವನ್ನೇ ಬುಡಮೇಲು ಮಾಡಿ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಲಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯವನ್ನು ಉಂಟುಮಾಡುವ ಇಂತಹ ಪ್ರಯತ್ನಗಳು ಆಘಾತಕಾರಿಯಾಗಿದೆ. ತ್ರಿವಳಿ ತಲಾಖ್, ಸಲಿಂಗಕಾಮ ಇತ್ಯಾದಿಯು ಧಾರ್ಮಿಕ ಸ್ವಾತಂತ್ರದ ಹರಣವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಜಾಪ್ರಭುತ್ವ ಮೌಲ್ಯವನ್ನು ಕಾಪಾಡಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.

ತ್ರಿವಳಿ ತಲಾಖ್ ನಿಯಮಕ್ಕೆ ಒಪ್ಪಿಗೆ ಇಲ್ಲ ಎನ್ನುವವರಿಗೆ ಸಿವಿಲ್ ಕಾನೂನಿನ ಮೊರೆ ಹೋಗುವ ಅವಕಾಶ ನೀಡಬೇಕೇ ವಿನಃ ತ್ರಿವಳಿ ತಲಾಖ್ ಕುರಿತು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಧಾರ್ಮಿಕ ಸ್ವಾತಂತ್ರ ಹರಣವು ಪಾಶ್ಚಾತ್ಯ ಸಂಸ್ಕೃತಿಗೆ ರಹದಾರಿ ಮಾಡಿಕೊಡುವ ಅಪಾಯವಿದೆ. ಧಾರ್ಮಿಕ ವಿಷಯದಲ್ಲಿ ಸರಕಾರಗಳು ಮೂಗು ತೂರಿಸಿಕೊಂಡರೆ ಅಶಾಂತಿಗೆ ಎಡೆಮಾಡಿಕೊಡುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಜನಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರ್ಯಾಲಿ: ಡಿ.9ರಂದು ಅಪರಾಹ್ನ 2:30 ನಗರದ ಜ್ಯೋತಿ ಸಮೀಪದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ರ್ಯಾಲಿ ನಡೆಯಲಿದೆ. 3:45ಕ್ಕೆ ನೆಹರೂ ಮೈದಾನದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಮಸ್ತ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್, ಪ್ರಧಾನ ಕಾರ್ಯದರ್ಶಿ ಶೈಖುನಾ ಜಾಮಿಅಃ ಪ್ರೊಫೆಸರ್ ಅಲಿ ಕುಟ್ಟಿ ಮುಸ್ಲಿಯಾರ್, ಶೈಖುನಾ ಎಂ.ಟಿ.ಉಸ್ತಾದ್, ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಸೈಯದ್ ಅಲಿ ತಂಙಳ್ ಕುಂಬೋಳ್, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸೈಯದ್ ಝೈನುಲ್ ಆಬಿದೀನ್ ತಂಙಳ್, ಶೈಖುನಾ ಮಿತ್ತಬೈಲ್ ಉಸ್ತಾದ್, ಶೈಖುನಾ ಖಾಸಿಂ ಉಸ್ತಾದ್, ನ್ಯಾಯವಾದಿ ಓನಂಪಳ್ಳಿ ಮುಹಮ್ಮದ್ ಫೈಝಿ, ಅಬ್ಸುಸ್ಸಮದ್ ಪೂಕೊಟೂರು, ಹಝ್ರತ್ ನಝೀರ್ ಅಝ್‌ಹರಿ ಮತ್ತಿತರರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಬಂದರ್, ಸ್ವಾಗತ ಸಮಿತಿಯ ಕೋಶಾಧಿಕಾರಿ ಹಾಜಿ ಅಬ್ದುರ್ರಝಾಕ್, ಕೇಂದ್ರ ಜುಮಾ ಮಸೀದಿಯ ಖತೀಬ್ ಸದಕತುಲ್ಲಾ ಫೈಝಿ, ಮದ್ರಸ ಮ್ಯಾನೇಜ್‌ಮೆಂಟ್ ದ.ಕ.ಜಿಲ್ಲಾಧ್ಯಕ್ಷ ಹಾಜಿ ಐ.ಮೊಯ್ದಿನಬ್ಬ, ಮಾಜಿ ಮೇಯರ್ ಕೆ.ಅಶ್ರಫ್, ಕೇಂದ್ರ ಜುಮಾ ಮಸೀದಿಯ ಕೋಶಾಧಿಕಾರಿ ಸೈಯದ್ ಅಹ್ಮದ್ ಬಾಷಾ ತಂಙಳ್, ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಹಾಜಿ ಕೆಂಪಿ, ಗುರುಪುರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ದಾರುನ್ನೂರು ಎಜುಕೇಶನ್ ಸೆಂಟರ್‌ನ ಕಾರ್ಯದರ್ಶಿ ರಿಯಾಝುದ್ದೀನ್ ಬಂದರ್, ಕೇಂದ್ರ ವಿದ್ಯಾಭ್ಯಾಸ ಬೋರ್ಡ್‌ನ ಸದಸ್ಯ ರಶೀದ್ ಹಾಜಿ ಪರ್ಲಡ್ಕ, ಮದ್ರಸ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಹಕೀಂ ಪರ್ತಿಪ್ಪಾಡಿ, ಇಕ್ಬಾಲ್ ಮುಲ್ಕಿ, ಇಬ್ರಾಹೀಂ ಕೊಣಾಜೆ ಮತ್ತಿತರರು ಉಪಸ್ಥಿತರಿದ್ದರು.

ರವಿವಾರ ಮದ್ರಸ ತರಗತಿಗೆ ರಜೆ

ರಬೀವುಲ್ ಆಖರಿನ ಪ್ರಥಮ ಆದಿತ್ಯವಾರ ಅಂದರೆ ಡಿ.9ರಂದು ಅಗಲಿದ ಉಲಮಾ-ಉಮರಾಗಳಿಗೆ ಸಮಸ್ತ ಪ್ರಾರ್ಥನಾ ದಿನ ನಡೆಸಲು ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಕರೆ ನೀಡಿದೆ. ಅಲ್ಲದೆ, ಡಿ.9ರಂದು ನಡೆಯುವ ಸಮ್ಮೇಳನದಲ್ಲಿ ಮದ್ರಸದ ಅಧ್ಯಾಪಕರು, ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಸಲುವಾಗಿ ಸಂಜೆಯ ತರಗತಿಗಳಿಗೆ ರಜೆಯನ್ನು ನೀಡಲಾಗಿದೆ ಎಂದು ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News