'ಖಾಸಗಿ ಆಸ್ಪತ್ರೆಯಲ್ಲಿ ಕಾನೂನುಬಾಹಿರವಾಗಿ ಅವಧಿಪೂರ್ವ ಪ್ರಸವ'

Update: 2018-12-07 15:19 GMT

ಮಂಗಳೂರು, ಡಿ.7: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾನೂನು ಬಾಹಿರವಾಗಿ ಅವಧಿಪೂರ್ವ ಪ್ರಸವ ಮಾಡಲಾಗಿದೆ. ಅಲ್ಲದೆ ಅಲ್ಲಿ ವೈದ್ಯಕೀಯ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಶುಕ್ರವಾರ ನಡೆದ ಮಂಗಳೂರು ನಗರ ಪೊಲೀಸ್ ಆಯುಕ್ತರ ಫೋನ್-ಇನ್ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಯವರು ಮಗುವಿನ ದತ್ತು ಸ್ವೀಕಾರ ಪ್ರಕ್ರಿಯೆ ನಡೆಸುವಂತೆ ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಗೆ ತಿಳಿಸಿದ್ದರು. ಆವಾಗ ಆಸ್ಪತ್ರೆಯವರು ಅವಧಿಪೂರ್ವ ಪ್ರಸವ ಮಾಡಿರುವುದು ಅಂದರೆ 7 ತಿಂಗಳಿಗೇ ಅಕ್ರಮವಾಗಿ ಹೆರಿಗೆ ಮಾಡಿಸುವುದು ಬೆಳಕಿಗೆ ಬಂದಿದೆ. ಗರ್ಭ ಧರಿಸಿದ 7 ತಿಂಗಳಲ್ಲಿ ಎಕ್ಸ್‌ರೇ ಪರೀಕ್ಷೆಯನ್ನೂ ಮಾಡಿಸಿದ್ದಾರೆ. ಇದು ಅಕ್ರಮವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಟಿ.ಆರ್. ಸುರೇಶ್, ಈ ಕುರಿತು ಲಿಖಿತ ದೂರು ನೀಡಿದರೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಆರೋಗ್ಯ ಇಲಾಖೆಗೆ ಸೂಚಿಸಲಾಗುವುದು ಎಂದು ಹೇಳಿದರು.

ಅಪಾಯಕಾರಿ ರಸ್ತೆ ಅಂಚು: ವಾಮಂಜೂರಿನಲ್ಲಿ ರಸ್ತೆ ಅಂಚು ನೆಲದಿಂದ ಮುಕ್ಕಾಲು ಅಡಿ ಎತ್ತರವಾಗಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಅಲ್ಲದೆ ಇಲ್ಲಿ ಬಸ್ಸುಗಳು ಸ್ಪರ್ಧೆಗೆ ಬಿದ್ದು ವೇಗವಾಗಿ ಸಂಚರಿಸುತ್ತದೆ. ಇತ್ತೀಚೆಗೆ ರಸ್ತೆಯ ಅಪಾಯಕಾರಿ ಅಂಚಿನಲ್ಲಿ ಸ್ಕೂಟರ್‌ನಿಂದ ಕುಸಿದು ಬಿದ್ದು ಗಾಯಗೊಂಡಿದ್ದಾಗಿ ಸ್ಥಳೀಯ ನಿವಾಸಿಯೊಬ್ಬರು ಹೇಳಿಕೊಂಡರು. ಈ ಬಗ್ಗೆ ದೂರು ನೀಡಿದರೆ ಸಂಬಂಧಿಸಿದ ಇಲಾಖೆಗೆ ಕ್ರಮಕ್ಕೆ ಸೂಚಿಸುವುದಾಗಿ ಆಯುಕ್ತರು ತಿಳಿಸಿದರು.

ಟಿಕೆಟ್ ನೀಡಲ್ಲ: ರೂಟ್ ನಂಬ್ರ 15ರಲ್ಲಿ ಹೋಗುವ ಬಸ್ಸುಗಳಲ್ಲಿ ಟಿಕೆಟ್ ನೀಡುತ್ತಿಲ್ಲ. ಲಾಲ್‌ಬಾಗ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಬೇರೆ ಬಸ್ಸುಗಳಿಗೆ ಹತ್ತಿಸುತ್ತಾರೆ ಎಂದು ಮಹಿಳೆಯೊಬ್ಬರು ದೂರಿದರು. ಈ ರೂಟ್‌ನಲ್ಲಿ ಪ್ರತಿದಿನವೂ ವಿಶೇಷ ಕಾರ್ಯಾಚರಣೆ ನಡೆಸುವುದಾಗಿ ಟಿ.ಆರ್. ಸುರೇಶ್ ಭರವಸೆ ನೀಡಿದರು.

ಲಗ್ಸುರಿ ಕಾರುಗಳಿಗೆ ಟಿಂಟ್: ನಗರದಲ್ಲಿ ಸಾಮಾನ್ಯ ಕಾರುಗಳ ಗಾಜಿನ ಟಿಂಟ್ ತೆಗೆಯಲಾಗುತ್ತಿದೆ. ಆದರೆ ಐಷಾರಾಮಿ ಕಾರುಗಳ ಟಿಂಟ್ ತೆಗೆಯುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು. ಟಿಂಟ್ ಹಾಕಿದ್ದರೆ ಅದನ್ನೂ ತೆಗೆಯಲಾಗುತ್ತದೆ. ಕೆಲವೊಂದು ಕಾರುಗಳ ಗಾಜಿನಲ್ಲೇ ಟಿಂಟ್ ಇರುತ್ತದೆ ಎಂದು ಆಯುಕ್ತರು ಸಮಜಾಯಿಶಿ ನೀಡಿದರು.

ತೊಕ್ಕೊಟ್ಟಿನಲ್ಲಿ ಬಸ್ ಸ್ಟಾಪ್ ಪ್ರದೇಶ ಬಿಟ್ಟು ರಸ್ತೆಯಲ್ಲೇ ಬಸ್ ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ದೇಳಕಟ್ಟೆ ನಿವಾಸಿ ರಫೀಕ್ ಹೇಳಿದರು. ಬಸ್‌ಬೇಯಲ್ಲೇ ಬಸ್ ನಿಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು.

ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ಮಂಜುನಾಥ್ ಇದ್ದರು.

ಬೆಂಗ್ರೆಯಲ್ಲಿ ಗಾಂಜಾ ಹಾವಳಿ
ಇತ್ತೀಚೆಗೆ ತೋಟಬೆಂಗ್ರೆಯಲ್ಲಿ ಯುವತಿಯ ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಅಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಮಟ್ಟ ಹಾಕಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ ಇನ್ನೂ ಮಾದಕ ವ್ಯಸನ ಜಾಲ ಅಲ್ಲಿ ಸಕ್ರಿಯವಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದರು.

ಸಂಜೆಯಾದರೆ ಬೀಚ್ ಹತ್ತಿರ ಕಾಡು-ಪೊದೆಗಳಲ್ಲಿ ಗಾಂಜಾ ಸೇವನೆ ಮಾಡುತ್ತಾರೆ. ಶಾಲೆ, ಕಾಲೇಜು ಮಕ್ಕಳು ಕೂಡ ಇದರಲ್ಲಿ ಸೇರಿದ್ದಾರೆ. ಪಣಂಬೂರು ಠಾಣೆಗೆ ದೂರು ನೀಡಿದರೆ ಒಮ್ಮೆ ಬರ್ತಾರೆ, ಹೋಗ್ತಾರೆ ಎಂದು ಸ್ಥಳೀಯರೊಬ್ಬರು ದೂರಿದರು. ಈ ಪ್ರದೇಶದಲ್ಲಿ ಗಸ್ತು ಏರ್ಪಾಡು ಮಾಡುವುದಾಗಿ ಟಿ.ಆರ್. ಸುರೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News