ಶರೀಅತ್ ಸಂರಕ್ಷಣೆಗೆ ‘ಸಮಸ್ತ’ ಕಟಿಬದ್ಧ: ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್

Update: 2018-12-09 17:44 GMT

ಮಂಗಳೂರು, ಡಿ.9: ಇಸ್ಲಾಮ್ ಅಲ್ಲಾಹನ ಧರ್ಮವಾಗಿದೆ. ಅದರಂತೆ ಶರೀಅತ್ ಕೂಡಾ ಅಲ್ಲಾಹನಿಂದ ರೂಪಿತವಾದುದಾಗಿದೆ. ಹಾಗಾಗಿ ಈ ಜಗತ್ತು ಅಂತ್ಯಗೊಳ್ಳುವವರೆಗೂ ಶರೀಅತ್ ನೆಲೆಗೊಳ್ಳಲಿದೆ. ಅದಕ್ಕೆ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಮುಸ್ಲಿಮರ ಕರ್ತವ್ಯವಾಗಿದೆ. ‘ಸಮಸ್ತ’ ಕೂಡಾ ಶರೀಅತ್ ಸಂರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಅಲ್‌ಹಾಜ್ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿಯ ವತಿಯಿಂದ ‘ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಕೈ ಜೋಡಿಸೋಣ: ಧಾರ್ಮಿಕತೆಯನ್ನು ಧ್ವಂಸ ಮಾಡುವ ಮೆಟೀರಿಯಲಿಸಂ ಸಿದ್ಧಾಂತವನ್ನು ಹಿಮ್ಮೆಟ್ಟಿಸೋಣ’ ಎಂಬ ಘೋಷಣೆಯೊಂದಿಗೆ ನಗರದ ನೆಹರೂ ಮೈದಾನಿನ ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ವೇದಿಕೆಯಲ್ಲಿ ರವಿವಾರ ನಡೆದ ‘ಶರೀಅತ್ ಸಂರಕ್ಷಣಾ ಸಮ್ಮೇಳನ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಎಲ್ಲಾ ಧರ್ಮೀಯರಿಗೂ ಅವರವರ ಧರ್ಮದ ವಿಧಿವಿಧಾನಗಳನ್ನು ಆಚರಿಸಲು ಅವಕಾಶವಿದೆ. ಅದರಂತೆ ಇಸ್ಲಾಮ್ ಧರ್ಮದಂತೆ ಮುಸ್ಲಿಮರು ಶರೀಅತ್ ನಿಯಮವನ್ನು ಅನುಸರಿಸುತ್ತಿದ್ದಾರೆ. ಇಸ್ಲಾಮ್ ಯಾವತ್ತೂ ಕೂಡಾ ತಲಾಖ್‌ಗೆ ಪ್ರೋತ್ಸಾಹ ನೀಡಲಿಲ್ಲ. ಆದರೆ, ಇಸ್ಲಾಮ್ ಧರ್ಮವನ್ನು ತೇಜೋವಧೆ ಮಾಡುವ ಭರದಲ್ಲಿ ಇಂತಹ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಕೆಲವರು ಸಮಾಜದಲ್ಲಿ ಗೊಂದಲ ಸೃಷ್ಟಿಸಲಾಗುತ್ತದೆ ಎಂದ ಜಿಫ್ರಿ ಮುತ್ತುಕೋಯ ತಂಙಳ್, ಅಲ್ಪಸಂಖ್ಯಾತರ ಸಂರಕ್ಷಣೆಯು ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಅದನ್ನು ನಮ್ಮನ್ನಾಳುವ ಸರಕಾರಗಳು ತಿಳಿದುಕೊಳ್ಳಬೇಕು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಎದುರಾಗುವ ಎಲ್ಲಾ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ‘ಸಮಸ್ತ’ ಸನ್ನದ್ಧವಾಗಿದೆ ಎಂದರು.

ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೈಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನಂಗೈ ದುಆಗೈದರು.

ಶೈಖುನಾ ಎಂಟಿ ಅಬ್ದುಲ್ಲಾ ಮುಸ್ಲಿಯಾರ್ ಮಲಪ್ಪುರಂ, ಅಬ್ದುಸ್ಸಮದ್ ಪೊಕೊಟೂರು, ನ್ಯಾಯವಾದಿಗಳಾದ ಓನಂಪಳ್ಳಿ ಮುಹಮ್ಮದ್ ಫೈಝಿ, ಹನೀಫ್ ಹುದವಿ, ಎಂ.ಎ. ಖಾಸಿಂ ಮುಸ್ಲಿಯಾರ್, ನಝೀರ್ ಅಝ್ಹರಿ ಮುಖ್ಯಭಾಷಣಗೈದರು.

ವೇದಿಕೆಯಲ್ಲಿ ಅತ್ರಾಡಿ ಖಾಝಿ ಅಲ್ಹಾಜ್ ಅಬೂಬಕರ್ ಮುಸ್ಲಿಯಾರ್, ಅಲಿ ತಂಙಳ್ ಕುಂಬೋಳ್, ಎಂ.ಎಸ್. ತಂಙಳ್ ವಾಲೆಮುಂಡೋವು, ಅಮೀರ್ ತಂಙಳ್ ಕಿನ್ಯ, ಹಬೀಬುಲ್ಲಾ ತಂಙಳ್, ಸೈಯದ್ ಕರಾವಳಿ ತಂಙಳ್, ಎಸ್.ಬಿ.ಮುಹಮ್ಮದ್ ದಾರಿಮಿ, ಖಾಸಿಂ ದಾರಿಮಿ, ತಬೂಕ್ ದಾರಿಮಿ, ಅನೀಸ್ ಕೌಸರಿ, ಹಾರೂನ್ ಅಹ್ಸನಿ, ಮಾಹಿನ್ ದಾರಿಮಿ, ಉಸ್ಮಾನ್ ಫೈಝಿ, ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಸ್ವದಖತುಲ್ಲಾ ಫೈಝಿ, ಜಿ.ಎ. ಬಾವಾ, ಎಸ್.ಎಂ. ರಶೀದ್ ಹಾಜಿ, ಮಾಜಿ ಶಾಸಕ ಮೊಯ್ದಿನ್ ಬಾವ, ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಎಸ್. ಮುಹಮ್ಮದ್ ಮಸೂದ್, ಐ. ಮೊಯ್ದಿನಬ್ಬ ಹಾಜಿ, ಹಾಜಿ ಅಬ್ದುರ್ರಝಾಕ್, ಕೆ.ಅಶ್ರಫ್, ನೌಶಾದ್ ಹಾಜಿ ಸೂರಲ್ಪಾಡಿ, ಕೆ.ಕೆ.ಶಾಹುಲ್ ಹಮೀದ್, ಮುಹಮ್ಮದ್ ಮೋನು, ಎಂ.ಎಸ್. ಮುಹಮ್ಮದ್, ಬಿ.ಎಚ್.ಖಾದರ್, ಟಿ.ಎಂ. ಶಹೀದ್ ಸುಳ್ಯ, ಮುಸ್ತಫಾ ಹಾಜಿ ಕೆಂಪಿ, ಹಾಜಿ ಅಬ್ದುಲ್ ರಶೀದ್ ಉಳ್ಳಾಲ, ಹನೀಫ್ ಹಾಜಿ ಬಂದರ್, ಶಾಹುಲ್ ಹಮೀದ್ ಮೆಟ್ರೊ, ಸಲೀಂ ಹಂಡೇಲು, ಅದ್ದು ಹಾಜಿ, ಮಜೀದ್ ಸೂರಲ್ಪಾಡಿ, ಸೈಯದ್ ಅಹ್ಮದ್ ಬಾಷಾ ತಂಙಳ್, ರಿಯಾಝುದ್ದೀನ್ ಬಂದರ್, ರಶೀದ್ ಹಾಜಿ ಪರ್ಲಡ್ಕ, ರಫೀಕ್ ಹಾಜಿ ಕೊಡಾಜೆ, ಹಕೀಂ ಪರ್ತಿಪ್ಪಾಡಿ, ಇಕ್ಬಾಲ್ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು. 

ಹಾಫಿಝ್ ಅಬ್ದುಲ್ಲಾ ಕಿರಾಅತ್ ಪಠಿಸಿದರು. ಅನ್ವರ್ ಸಾದಾತ್ ಮತ್ತು ಕೆ.ಎಂ. ಕೊಡಂಗಾಯಿ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News