ಮಧ್ಯ ಪ್ರದೇಶ: ಕಮಲ್ ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ

Update: 2018-12-11 18:01 GMT

ಹೊಸದಿಲ್ಲಿ,ಡಿ.11: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರಳ ಬಹುಮತ ಗಳಿಸುವುದು ಸ್ಪಷ್ಟವಾಗುತ್ತಿದ್ದಂತೆ ರಾಜ್ಯದ ಇಬ್ಬರು ಪ್ರಭಾವಿ ನಾಯಕರಾದ ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯೇರ್ಪಟ್ಟಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಕಮಲ್ ನಾಥ್ ಕಾಂಗ್ರೆಸ್ ಹಿರಿಯ ಮುಖಂಡ ಆಗಿದ್ದರೆ ಸಿಂಧಿಯಾ ರಾಹುಲ್ ಗಾಂಧಿಯ ಯುವ ಗುಂಪಿನ ಪ್ರಭಾವಿ ನಾಯಕರಾಗಿದ್ದಾರೆ. ಇಬ್ಬರೂ ರಾಜ್ಯದಲ್ಲಿ ಚುನಾವಣಾ ಅಭಿಯಾನದ ಮುಂಚೂಣಿಯಲ್ಲಿದ್ದವರು. ಹಾಗಾಗಿ ಇಬ್ಬರೂ ಮುಖ್ಯಮಂತ್ರಿ ಆಗಬೇಕೆಂಬ ಕನಸು ಕಾಣುತ್ತಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಂಧಿಯಾ, ಆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಈಗಲೇ ಯಾವುದನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಪಕ್ಷದ ಹಿರಿಯ ನಾಯಕರಾಗಿರುವ ಕಮಲ್ ನಾಥ್‌ಗೆ ಶಾಸಕರ ಬೆಂಬಲವಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಮಧ್ಯ ಪ್ರದೇಶದ ಹಲವೆಡೆಗಳಲ್ಲಿ ಕಮಲ್ ನಾಥ್ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಬರಹದ ಪೋಸ್ಟರ್‌ಗಳನ್ನು ಹಾಕಲಾಗಿರುವುದು ಹಿರಿಯ ನಾಯಕನ ಕನಸಿಗೆ ಮತ್ತಷ್ಟು ನೀರೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News