ಬದಿಯಡ್ಕ ಗ್ರಾಮದ ಇಬ್ರಾಹಿಂ ಖಲೀಲ್ ಗೆ 'ನಾಸಾ'ದಲ್ಲಿ ಬಾಹ್ಯಾಕಾಶ ವಾಹಕದ ಸಂಶೋಧನಾ ಅವಕಾಶ

Update: 2018-12-13 15:44 GMT

ಕಾಸರಗೋಡು, ಡಿ. 13: ಬದಿಯಡ್ಕ ಮೂಲದ ಸಂಶೋಧನಾ ವಿದ್ಯಾರ್ಥಿಯೋರ್ವನಿಗೆ ನಾಸಾ ಸಂಸ್ಥೆಯಲ್ಲಿ ಉನ್ನತ ವೈಜ್ಞಾನಿಕ ಸಂಶೋಧನೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ಸಂಶೋಧನಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ.

ಬದಿಯಡ್ಕ ಗ್ರಾಮದ ಇಬ್ರಾಹಿಂ ಖಲೀಲ್ ನಾಸಾದ ಸಂಶೋಧನೆಯಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿ.

ಮೇರಿ ಕ್ಯೂರಿ ಸಂಸ್ಥೆ ಸಂಶೋಧನೆಗೆ ಆರ್ಥಿಕ ನೆರವನ್ನು ನೀಡಿದ್ದು, ಫುಲ್‍ಕಾಂಪ್ ಯೋಜನೆಯಡಿ ಬಾಹ್ಯಾಕಾಶ ರಾಕೆಟ್ ಉಡಾವಣೆಗೆ ಅತ್ಯವಶ್ಯಕವಾದ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಸಂಶೋಧನೆ ನಡೆಯಲಿದೆ. ನೂತನ ತಂತ್ರಜ್ಞಾನವು ಪ್ರಾಥಮಿಕ ಹಂತದಲ್ಲಿದ್ದು, ಸಂಶೋಧನೆಯಲ್ಲಿ ಇಬ್ರಾಹಿಂ ಮುಖ್ಯ ಪಾತ್ರ ವಹಿಸಲಿದ್ದಾರೆ.

ಪಿ.ಎಚ್‍.ಡಿ ಸಂಶೋಧನಾ ವಿದ್ಯಾರ್ಥಿಯು ಆಗಿರುವ ಇಬ್ರಾಹಿಂ ಪ್ರೊ. ಇರಾಸ್ಮೋ ಕರೇರಾ ಮತ್ತು ಇವಾನ್ ಪಿನೆಡಾ ಮಾರ್ಗದರ್ಶನದಲ್ಲಿ ತಂತ್ರಜ್ಞಾನದ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಣಿಪಾಲ ತಾಂತ್ರಿಕ ಶಿಕ್ಷಣ ಸಂಸ್ಥೆಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಇಬ್ರಾಹಿಂ, ಜರ್ಮನಿಯ ಬೋಕಂನ ರುರ್ ಕಂಪ್ಯೂಟೇಶನಲ್ ವಿ.ವಿ ಯಿಂದ ಉನ್ನತ ಪದವಿ ಶಿಕ್ಷಣ ಪಡೆದಿದ್ದಾರೆ.

ನೂತನ ತಂತ್ರಜ್ಞಾನದ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇಬ್ರಾಹಿಂ ಈ ಹಿಂದೆ ನಾಲ್ಕು ತಿಂಗಳ ಕಾಲ ಅಮೆರಿಕಾದ ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಮತ್ತು ಸಿಯಾಟಲ್ ಮತ್ತು ಪರ್ಡ್ಯೂ ವಿ.ವಿ ಇಂಡಿಯಾನಾ ಸಂದರ್ಶಿಸಿದ್ದರು. ಮುಂದಿನ ಆಗಸ್ಟ್ ತಿಂಗಳಲ್ಲಿ ಸಂಶೋಧನೆಯ ನಿಮಿತ್ತ ಇಂಡಿಯಾನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಬಡಿಯಡ್ಕದ ವ್ಯಾಪಾರಿ ಮಜೀದ್ ಪೈಕಾ ಮತ್ತು ಝುಬೈದಾ ಗೋಳಿಯಾಡಿ ದಂಪತಿ ಪುತ್ರನಾಗಿರುವ ಇಬ್ರಾಹಿಂ ಕೆಳ ಮಧ್ಯಮ ವರ್ಗದವರಾಗಿದ್ದು, ಶಿಕ್ಷಣ ಗಳಿಸಿ ಸಂಶೋಧನೆಯ ಮೂಲಕ ಹೆಸರುಗಳಿಸಿದ್ದಾರೆ. ವಿಶ್ವದ ಪ್ರತಿಷ್ಠೆಯ ವಿದ್ಯಾರ್ಥಿ ವೇತನಕ್ಕೂ ಭಾಜನರಾಗಿರುವ ಇಬ್ರಾಹಿಂ ಒಟ್ಟು 1.30 ಕೋಟಿ ರೂ. ಗಳನ್ನು ವಿದ್ಯಾರ್ಥಿ ವೇತನವಾಗಿ ಪಡೆಯಲಿದ್ದಾರೆ. ಒಟ್ಟು 1600 ಸಂಶೋಧನಾ ಅರ್ಜಿಗಳಲ್ಲಿ ಕೇವಲ 12 ಮಂದಿಗೆ ಸಂಶೋಧನೆಯಲ್ಲಿ ತೊಡಗುವ ಅವಕಾಶ ಪ್ರಾಪ್ತಿಯಾಗಿದ್ದು, ಇಬ್ರಾಹಿಂ ಓರ್ವರಾಗಿದ್ದಾರೆ.

ನಾಸಾ ಸಂಶೋಧನೆಯ ಮಹತ್ವ

ಪ್ರಸ್ತುತ ಚಾಲ್ತಿಯಲ್ಲಿರುವ ಬಾಹ್ಯಾಕಾಶ ಉಡ್ಡಯನ ವಾಹಕಕ್ಕಿಂತ ನೂತನ ಸಂಶೋಧನಾತ್ಮಕ ಉಡ್ಡಯನ ವಾಹಕವು ಎರಡರಿಂದ ಮೂರು ಪಟ್ಟು ಹೆಚ್ಚಿನ ಸಾಮರ್ಥ್ಯ ಹೊಂದಿರಲಿದೆ. ಏರೋಸ್ಪೇಸ್ ಎಂಜಿನಿಯರಿಂಗ್ ಮೂಲಕ ವಾಹಕದ ಬಿಡಿಭಾಗಗಳ ನಿರ್ಮಾಣ ಕಾರ್ಯ ಸಿದ್ಧಗೊಳ್ಳುತ್ತಿದೆ. ನೂತನ ತಂತ್ರಜ್ಞಾನವು ವಾಹಕ ಯಂತ್ರ ನಿರ್ಮಾಣದ ಸಮಯ ಮಿತಿಯನ್ನು ಕಡಿಮೆಗೊಳಿಸಲಿದೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕಾದ ಒಹಿಯೋ ಪ್ರಾಂತ್ಯದಲ್ಲಿರುವ ನಾಸಾದ ಗ್ಲೆನ್ ಸಂಶೋಧನಾ ಕೇಂದ್ರದಲ್ಲಿರುವ ಇಬ್ರಾಹಿಂ, ಎರಡು ವಾರಗಳ ತನಕ ಪ್ರತಿಷ್ಠಿತ ವಿಜ್ಞಾನಿ ಸಂಶೋಧಕರೊಂದಿಗೆ ಚರ್ಚೆ ನಡೆಸಲಿದ್ದು, ಸಂಶೋಧನಾ ವಿಚಾರಗಳನ್ನು ಮಂಡಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News