ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಗೆ ಬ್ಲಾಕ್ ಕಾಂಗ್ರೆಸ್ ಅಭಿನಂದನೆ

Update: 2018-12-13 16:17 GMT

ಉಡುಪಿ, ಡಿ.13: ಜಿಲ್ಲೆಯ ಹಿರಿಯ ಮುತ್ಸದ್ದಿ, ನಿಷ್ಕಳಂಕ ರಾಜಕಾರಣಿ, ವಿಧಾನ ಪರಿಷತ್ತಿನ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ವಿಧಾನ ಪರಿಷತ್ತಿನ ನೂತನ ಸಭಾಪತಿಯಾಗಿ ಆಯ್ಕೆಗೊಂಡಿರುವುದಕ್ಕೆ ಬುಧವಾರ ನಡೆದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಪ್ರತಾಪಚಂದ್ರ ಶೆಟ್ಟಿ 1983ರಿಂದ ಸುದೀರ್ಘ ರಾಜಕಾರಣದಲ್ಲಿ 4 ಬಾರಿ ವಿಧಾನಸಭೆಯ ಸದಸ್ಯ ರಾಗಿ, ಮೂರು ಬಾರಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಯಾವುದೇ ಹುದ್ದೆಯನ್ನು ಬಯಸದೆ ರಾಜಕಾರಣದಲ್ಲಿ ಅಪಾರ ಅನುಭವವನ್ನು ಹೊಂದಿರುವ ಇವರು ಪ್ರಾಮಾಣಿಕ ರಾಜಕಾರಣಿ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ವಿಧಾನ ಪರಿಷತ್‌ನ ಸಭಾ ನಾಯಕಿಯಾಗಿದ್ದರೆ, ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇದೀಗ ವಿಧಾನ ಪರಿಷತ್ತಿನ ಗೌರವದ ಸ್ಥಾನವಾದ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ಆಯ್ಕೆಯಾಗುವ ಮೂಲಕ ವಿಧಾನ ಪರಿಷತ್ತಿನಲ್ಲಿ ಮೂರು ಅತ್ಯುನ್ನತ ಸ್ಥಾನಗಳನ್ನು ಜಿಲ್ಲೆಯ ಜನಪ್ರತಿನಿಧಿ ಗಳು ಗಳಿಸಿದ್ದು ಹೆಮ್ಮೆ ತಂದಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯ ಮಹತ್ವಾಕಾಂಕ್ಷೆಯ ಶಕ್ತಿ ಪ್ರಾಜೆಕ್ಟ್ ಪ್ರತಿಯೊಬ್ಬ ಕಾರ್ಯಕರ್ತನ ಧ್ವನಿ. ಪ್ರತಿ ಬೂತ್‌ನಿಂದ ಪಕ್ಷದ ಕಾರ್ಯಕರ್ತರು ಶಕ್ತಿ ಸೇರಲು 7045006100 ಈ ನಂಬರ್‌ಗೆ ನಿಮ್ಮ ಮತ ದಾರ ಗುರುತಿನ ಸಂಖ್ಯೆಯನ್ನು ಟೈಪ್ ಮಾಡಿ ಸಂದೇಶ ಕಳುಹಿಸುವ ಮೂಲಕ ಸದಸ್ಯರಾಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮುಖಂಡರಾದ ಬಿ.ನರಸಿಂಹ ಮೂರ್ತಿ, ಯತೀಶ್ ಕರ್ಕೆರಾ, ಸತೀಶ್ ಅಮೀನ್ ಪಡುಕರೆ, ಪ್ರಶಾಂತ್ ಪೂಜಾರಿ, ಗಣೇಶ್ ನೆರ್ಗಿ, ಅನಂತ್ ನಾಯ್ಕ, ಚಂದ್ರಿಕಾ ಶೆಟ್ಟಿ, ಧನಂಜಯ ಕುಂದರ್, ರಫೀಕ್ ದೊಡ್ಡಣಗುಡ್ಡೆ, ನವೀನ್ ಶೆಟ್ಟಿ, ಅದಿತಿ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News