ದೇಶದ ರಕ್ಷಣಾ ವ್ಯವಹಾರಗಳಲ್ಲಿ ಮೂಲಭೂತ ಸುಧಾರಣೆ ಅಗತ್ಯ: ಮಾಯಾವತಿ
Update: 2018-12-14 17:16 GMT
ಲಕ್ನೋ.ಡಿ.14: ರಕ್ಷಣಾ ಖರೀದಿಗಳ ಕುರಿತು ಶಂಕೆಗಳನ್ನು ನಿವಾರಿಸಲು ಮತ್ತು ಇಂತಹ ವಿಷಯಗಳಲ್ಲಿ ಸಾಮಾನ್ಯ ದೃಷ್ಟಿಕೋನವನ್ನು ಬದಲಾಯಿಸಲು ಎಲ್ಲ ರಕ್ಷಣಾ ಖರೀದಿಗಳಲ್ಲಿ ಮೂಲಭೂತ ಸುಧಾರಣೆಗಳಾಗಬೇಕು ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಶುಕ್ರವಾರ ಇಲ್ಲಿ ಹೇಳಿದರು.
ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದ ಕುರಿತು ತನಿಖೆಗೆ ನಕಾರ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮಾಯಾವತಿ,ಇದು ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಕೇಂದ್ರ ಸರಕಾರಕ್ಕೆ ಕೊಂಚ ನೆಮ್ಮದಿಯನ್ನು ನೀಡಲಿದೆ ಎಂದರು.
ರಕ್ಷಣಾ ಒಪ್ಪಂದಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡರ ವಿರುದ್ಧವೂ ಆರೋಪಗಳಿವೆ ಮತ್ತು ಇದು ಜನರಲ್ಲಿ ಶಂಕೆಗಳನ್ನು ಉಂಟು ಮಾಡಿದೆ ಎಂದು ಒತ್ತಿ ಹೇಳಿದ ಅವರು,ಕಾಂಗ್ರೆಸ್ ಸರಕಾರವು ಬೊಫೋರ್ಸ್ನಲ್ಲಿ ಮತ್ತು ಬಿಜೆಪಿ ಸರಕಾರವು ರಫೇಲ್ ಒಪ್ಪಂದದಲ್ಲಿ ಆರೋಪಗಳನ್ನು ಎದುರಿಸಿರುವುದರಿಂದ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದು ಟೀಕಿಸಿದರು.