ಪುತ್ತೂರು: ಕೆರೆಗೆ ಬಿದ್ದು ಇಬ್ಬರು ಬಾಲಕಿಯರು ಮೃತ್ಯು

Update: 2018-12-15 17:37 GMT

ಪುತ್ತೂರು, ಡಿ.15: ಬೆಳ್ಳಾರೆ ಠಾಣೆ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಮೂಲ್ಯತ್ತಡ್ಕ ಎಂಬಲ್ಲಿ ಇಬ್ಬರು ಶಾಲಾ ಬಾಲಕಿಯರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

ಇಲ್ಲಿನ ಮುತ್ತಪ್ಪ ಗೌಡ ಎಂಬವರ ಪುತ್ರಿ ಸಂಜನಾ (11) ಅವರ ಸಹೋದರನ ಪುತ್ರಿ ಪ್ರಜ್ಞಾ (12) ಮೃತಪಟ್ಟವರಾಗಿದ್ದಾರೆ.

ಇವರಿಬ್ಬರು ಕೊಳ್ತಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದು, ಸಂಜನಾ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದರೆ, ಪ್ರಜ್ಞಾ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

ಎಂದಿನಂತೆ ಜೊತೆಯಾಗಿ ಶಾಲೆಗೆ ತೆರಳಿದ್ದ ಇವರಿಬ್ಬರು ಸಂಜೆ ಶಾಲೆಯಿಂದ ಮನೆಗೆ ಆಗಮಿಸಿದ ಬಳಿಕ ಅಲ್ಲೇ ಸಮೀಪದ ಕೆರೆಯ ಬಳಿಗೆ ತೆರಳಿದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ದುರಂತಕ್ಕೆ ಕಾರಣವಾದ ಕೆರೆಯನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿತ್ತೆನ್ನಲಾಗಿದೆ. ಬಳಿಕ ಬಾಲಕಿಯ ಮೃತದೇಹವನ್ನು ಮೇಲೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. 

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News