ತೊಕ್ಕೊಟ್ಟು: ರಸ್ತೆ ಅಪಘಾತಕ್ಕೆ ಕುಂಪಲದ ಯುವಕ ಬಲಿ
Update: 2018-12-24 09:50 IST
ಉಳ್ಳಾಲ, ಡಿ.24: ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ.66ರ ಕಲ್ಲಾಪುವಿನಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಕುಂಪಲ ಆಶ್ರಯ ಕಾಲನಿ ನಿವಾಸಿ ಯತೀಶ್(24) ಮೃತಪಟ್ಟವರು. ಎಂ.ಸಿ.ಎಫ್. ಉದ್ಯೋಗಿಯಾಗಿದ್ದ ಇವರು ಬೈಕಿನಲ್ಲಿ ಮಂಗಳೂರಿನಿಂದ ಕುಂಪಲ ಕಡೆಗೆ ತೆರಳುವ ಸಂದರ್ಭ ಈ ಅಪಘಾತ ಸಂಭವಿಸಿದೆ.
ಯತೀಶ್ ಬೈಕ್ನಲ್ಲಿ ಕಲ್ಲಾಪು ಸಮೀಪ ತಲುಪಿದಾಗ ಬೈಕಿಗೆ ಹಿಂಬದಿಯಿಂದ ಕಂಟೈನರ್ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಯತೀಶ್ ಲಾರಿಯಡಿಗೆ ಸಿಲುಕಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.