ಭಟ್ಕಳ: ಎತ್ತುಗಳ ಕಾದಾಟದಲ್ಲಿ ಸಿಲುಕಿದ ಸ್ಕೂಟರ್ ಸವಾರ ಗಂಭೀರ

Update: 2018-12-26 12:23 GMT

ಭಟ್ಕಳ, ಡಿ. 26: ಎರಡು ಎತ್ತುಗಳ ನಡುವೆ ನಡೆದ ಕಾದಾಟದಲ್ಲಿ ಸಿಲುಕಿದ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆ ಸೇರಿದ ಘಟನೆ ರಾ.ಹೆ. 66ರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

 ಗಾಯಗೊಂಡಿರುವ ವ್ಯಕ್ತಿಯನ್ನು ಸಯ್ಯದ್ ಅಬ್ದುಲ್ ಕಾದಿರ್ (46) ಎಂದು ಗುರುತಿಸಲಾಗಿದೆ. 

ಶುಕ್ರವಾರ ಮದೀನಾ ಕಾಲನಿ ಶಿಫಾ ಕ್ರಾಸ್ ಬಳಿ ಎರಡು ಎತ್ತುಗಳು  ಪರಸ್ಪರ ಕಾದಾಟ ನಡೆಸುತ್ತ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಎತ್ತುಗಳ  ಬಡಿತಕ್ಕೆ ಸ್ಕೂಟರ್ ನಲ್ಲಿದ್ದ  ಅಬ್ದುಲ್ ಕಾದಿರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು ಇದರಿಂದಾಗಿ ಅವರ ಕೈ ಹಾಗೂ ಕಾಲು ಮುರಿದಿದೆ. ಅವರ ಹೆಗಲ ಮೇಲೂ ಗಂಭೀರ ಗಾಯಗಳಾಗಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನರು ಸಾಕು ಪ್ರಾಣಿಗಳನ್ನು ಬಿಡಾಡಿ ದನಗಳನ್ನಾಗಿ ಮಾಡಿಕೊಂಡಿದ್ದು ಅವುಗಳ ಸರಿಯಾದ ನಿರ್ವಾಹಣೆ ಮಾಡದೆ ರಸ್ತೆ ಮೇಲೆ ಬಿಡುತ್ತಾರೆ. ಇದರಿಂದಾಗಿ ಪ್ರಯಾಣಿಕರಿಗೆ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ತೊಂದರೆಯುಂಟಾಗುತ್ತಿದೆ. ಪುರಸಭೆಯವರು ಈ ಕುರಿತಂತೆ ಯಾವುದೇ ಕ್ರಮ ಜರಗಿಸದೆ ಇರುವುದು ಆಶ್ಚರ್ಯ ತರುವಂತೆ ಮಾಡಿದೆ ಎಂದು ಮದೀನ ಕಾಲನಿಯ ಅಬ್ದುಲ್ ಕಾದಿರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎತ್ತುಗಳ ಹೊಡೆದಾಟಕ್ಕೆ ಸಿಲುಕಿ ಕೈಕಾಲು ಮುರಿದುಕೊಳ್ಳುವವರು ಯಾರ ಬಳಿ ದೂರಬೇಕು ಎಂದೂ ಅವರು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News