‘ಮರಳು ಸಮಸ್ಯೆಯನ್ನು ಕಾನೂನಾತ್ಮಕವಾಗಿ ಪರಿಹರಿಸಿ’
ಉಡುಪಿ, ಡಿ.26: ತಮ್ಮ ಅಧಿಕಾರವಧಿಯಲ್ಲಿ ಸಾಂಪ್ರದಾಯಿಕ ಮರಳು ಗಾರಿಕೆ ನಡೆಸುತಿದ್ದವರಿಗೆ ಪಾರದರ್ಶಕವಾಗಿ ನೀಡಲಾಗಿರುವ ಎಲ್ಲಾ ಪರವಾನಿಗೆ ದಾರರ ಪರವಾನಿಗೆಗಳನ್ನು ಮುಂದುವರಿಸಬೇಕು ಹಾಗೂ ಹೊಸ ಪರವಾನಿಗೆ ಮಂಜೂರು ಮಾಡಲು ಇತರರನ್ನು ಪರಿಗಣಿಸುವಾಗ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುವ ದಲಿತರನ್ನು ಪರಿಗಣಿಸುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಮಾಡಿದ ಮನವಿ ಮೇರೆಗೆ ಬುಧವಾರ ಮರಳುಗಾರರ ನಿಯೋಗದೊಂದಿಗೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ರನ್ನು ಭೇಟಿಮಾಡಿ ಅವರು ಈ ಮನವಿ ಮಾಡಿದರು.
ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಉಡುಪಿ ಜಿಲ್ಲೆಯ ಮರಳು ಉಡುಪಿ ಜಿಲ್ಲೆಗೆ ಎಂದು ಹೊರಡಿಸಿರುವ ಆದೇಶವನ್ನು ಮುಂದುವರಿಸಿ ಉಡುಪಿ ಜಿಲ್ಲೆಯ ಜನರಿಗೆ ಅತೀ ಕಡಿಮೆ ಬೆಲೆಗೆ ಮರಳು ಸಿಗುವಂತೆ ಮಾಡಬೇಕು ಎಂದವರು ಆಗ್ರಹಿಸಿದರು.
ಜಿಲ್ಲೆಯ ಮರಳು ಸಮಸ್ಯೆಗಳ ಗೊಂದಲಗಳನ್ನು ಮತ್ತು ಸಿಆರ್ಝಡ್ ಸಮಸ್ಯೆಯ ಪರಿಹಾರಕ್ಕೆ ರಾಜ್ಯ ಗಣಿ ಸಚಿವ ರಾಜಶೇಖರ ಪಾಟೀಲರನ್ನು ಭೇಟಿಯಾಗಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವ ಬಗ್ಗೆ ಮತ್ತೊಮ್ಮೆ ಪ್ರಯತ್ನ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅದ್ಯಕ್ಷರು, ಸರ್ವ ಸದಸ್ಯರುಗಳು ಹಾಗು ದಲಿತ ಮುಖಂಡರುಗಳು ಉಪಸ್ಥಿತರಿದ್ದರು.