×
Ad

ಸನಾತನ ಸಂಸ್ಥೆಯೊಂದಿಗೆ ಸಂಪರ್ಕವಿರುವ ಕ್ರಿಮಿನಲ್ ಸಂಘಟನೆಗಳಿಂದ ವಿಚಾರವಾದಿಗಳ ಹತ್ಯೆ

Update: 2018-12-26 22:26 IST

ಬೆಂಗಳೂರು , ಡಿ.26: ಪತ್ರಕರ್ತೆ ಗೌರಿ ಲಂಕೇಶ್‌ರನ್ನು 2017ರ ಸೆಪ್ಟೆಂಬರ್ 5ರಂದು ದುಷ್ಕರ್ಮಿಗಳು ಬೆಂಗಳೂರಿನಲ್ಲಿ ಹತ್ಯೆ ಮಾಡಿದ್ದರು. ಆದರೆ ಹತ್ಯೆ ನಡೆದು ಮೂರು ತಿಂಗಳವರೆಗೆ ಈ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿರಲಿಲ್ಲ. 2013ರಲ್ಲಿ ನಡೆದಿದ್ದ ವಿಚಾರವಾದಿ ಡಾ ನರೇಂದ್ರ ದಾಬೋಲ್ಕರ್ ಹತ್ಯೆ, 2015ರಲ್ಲಿ ನಡೆದಿದ್ದ ಗೋವಿಂದ ಪನ್ಸಾರೆ ಮತ್ತು ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣದಂತೆಯೇ ಈ ಪ್ರಕರಣದ ತನಿಖೆಯೂ ತೆರೆಮರೆಗೆ ಸರಿಯುವ ಸಾಧ್ಯತೆಗಳಿದ್ದವು.  ಆದರೆ ಕಳೆದ ಫೆಬ್ರವರಿಯಲ್ಲಿ ಕೆ.ಟಿ.ನವೀನ್ ಕುಮಾರ್ ಎಂಬಾತನನ್ನು ಬಂಧಿಸುವುದರೊಂದಿಗೆ ಮಹತ್ವದ ಯಶಸ್ಸು ಪಡೆದ ‘ಸಿಟ್’ ತನಿಖಾ ತಂಡ, ನಾಲ್ವರು ವಿಚಾರವಾದಿಗಳು ಹಾಗೂ ಸಾಹಿತಿಗಳ ಸರಣಿ ಹತ್ಯೆಯ ಹಿಂದಿನ ಪಿತೂರಿಯನ್ನು ಭೇದಿಸುವಲ್ಲಿ ಸಫಲವಾಗಿದೆ. ಸನಾತನ ಸಂಸ್ಥೆಯೊಂದಿಗೆ ಸಂಪರ್ಕವಿರುವ ಕ್ರಿಮಿನಲ್ ಸಂಘಟನೆಗಳಿಂದ ವಿಚಾರವಾದಿಗಳ ಹತ್ಯೆಯಾಗಿದೆ ಎನ್ನುವುದನ್ನು ತನಿಖಾ ತಂಡ ಕಂಡುಕೊಂಡಿದೆ ಎಂದು thehindu.com ಕೆ.ವಿ. ಆದಿತ್ಯ ಭಾರಧ್ವಾಜ್ ಬರೆದ ವಿಶೇಷ ವರದಿಯನ್ನು ಪ್ರಕಟಿಸಿದೆ.

ಈ ಹತ್ಯಾ ಸರಣಿಯ ಬಾಹುಗಳು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ವ್ಯಾಪಿಸಿರುವುದು ಬೆಳಕಿಗೆ ಬಂದಿದೆ. ಮದ್ದೂರಿನಲ್ಲಿ ಕೆ.ಟಿ.ನವೀನ್ ಕುಮಾರ್‌ನನ್ನು ಬಂಧಿಸುವುದರೊಂದಿಗೆ ಮಹತ್ವದ ಯಶಸ್ಸು ಪಡೆದ ತನಿಖಾ ತಂಡ, ಈತ ಗೌರಿ ಲಂಕೇಶ್ ಹತ್ಯಾ ಪ್ರಕರಣದಲ್ಲಿ ಬಾಹ್ಯ ಪಾತ್ರ ವಹಿಸಿದ್ದ ಎಂದು ತಿಳಿಸಿತ್ತು. ಆದರೆ ಆತ ಮೈಸೂರು ಮೂಲದ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್‌ ರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಆದರೆ ನವೀನ್‌ನನ್ನು ಈ ಕಾರ್ಯಕ್ಕೆ ನಿಯುಕ್ತಿಗೊಳಿಸಿದ್ದ ಪ್ರವೀಣ್, ಮಾಧ್ಯಮದ ವರದಿಗಳಿಂದ ಎಚ್ಚೆತ್ತುಕೊಂಡು ಭೂಗತನಾಗಿ ಬಿಟ್ಟಿದ್ದ. ಇದರಿಂದ ತನಿಖೆ ಸುಸೂತ್ರವಾಗಿ ಸಾಗಲು ಅಡ್ಡಿಯಾಗಿತ್ತು ಎಂದು ವರದಿ ತಿಳಿಸಿದೆ.

ಪ್ರವೀಣ್‌ನ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದ ‘ಸಿಟ್’ ತಂಡ ದಾವಣಗೆರೆಯಲ್ಲಿ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್ ಮತ್ತು ಮನೋಹರ್ ಎಡವೆಯನ್ನು ಬಂಧಿಸಿತ್ತು. ಕಾಳೆ ಮತ್ತು ದೆಗ್ವೇಕರ್ ವಿಚಾರವಾದಿಗಳ ಹತ್ಯೆ ಸಂಚಿನ ಪ್ರಧಾನ ಸೂತ್ರಗಾರರು ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಮುಂದಿನ ಮೂರು ತಿಂಗಳಲ್ಲಿ ಸರಣಿ ಬಂಧನ ಕಾರ್ಯ ನಡೆಯಿತು. ಮಹಾರಾಷ್ಟ್ರದಲ್ಲಿ ಹಲವು ಬಂಧನಗಳಾದವು ಹಾಗೂ ಪುಣೆಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಬಾಂಬ್ ಸ್ಫೋಟಿಸುವ ಸಂಚನ್ನೂ ವಿಫಲಗೊಳಿಸಲಾಯಿತು.

ಜೊತೆಗೆ, ದಾಬೋಲ್ಕರ್ ಮತ್ತು ಪನ್ಸಾರೆ ಕೊಲೆ ಪ್ರಕರಣದ ತನಿಖೆಯ ಪ್ರಗತಿಗೆ ಅಡ್ಡಿಯಾಗಿದ್ದ ಕೆಲವು ಕೊರತೆಗಳು ನಿವಾರಣೆಯಾದವು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಅಮೋಲ್ ಕಾಳೆ, ಅಮಿತ್ ದೆಗ್ವೇಕರ್ ಹಾಗೂ ರಾಜೇಶ್ ಬಂಗೇರಾ ಎಂಬವರು ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣದಲ್ಲೂ ಆರೋಪಿಗಳಾಗಿದ್ದು ಇವರನ್ನು ಸಿಬಿಐ ಹಾಗೂ ಮಹಾರಾಷ್ಟ್ರ ‘ಸಿಟ್’ ತಂಡ ವಶಕ್ಕೆ ಪಡೆಯಿತು. ಈ ಮಧ್ಯೆ, ಎಂ.ಎಂ.ಕಲಬುರಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಕರ್ನಾಟಕ ಸಿಐಡಿ ತಂಡ ಗಣೇಶ್ ಮಿಸ್ಕಿನ್ ಮತ್ತು ಅಮಿತ್ ಬಡ್ಡಿಯನ್ನು ಬಂಧಿಸಿತು.

ಸನಾತನ ಸಂಸ್ಥೆಯ ಜೊತೆ ಸಂಪರ್ಕ ಇರುವ ವ್ಯಕ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರಿಮಿನಲ್ ಸಂಘಟನೆಯೊಂದನ್ನು 2011ರಲ್ಲಿ ರಚಿಸಲಾಗಿದೆ ಎಂಬ ವಿಚಾರ ಈ ಎಲ್ಲಾ ಬಂಧನಗಳ ಬಳಿಕ ಸ್ಪಷ್ಟವಾಯಿತು ಎಂದು thehindu.com ವರದಿ ತಿಳಿಸಿದೆ.

ಸನಾತನ ಸಂಸ್ಥೆಯ ಪ್ರಕಟಣೆಯಾದ ‘ಕ್ಷಾತ್ರ ಧರ್ಮ ಸಾಧನ’ದಲ್ಲಿ ಪ್ರಕಟವಾಗುವ ಲೇಖನಗಳಿಂದ ಪ್ರೇರಿತರಾಗಿ ‘ದುರ್ಜನರು’ ಅಥವಾ ಹಿಂದೂ ವಿರೋಧಿಗಳಾಗಿರುವ ಹಿಂದುಗಳನ್ನು ಹತ್ಯೆ ಮಾಡುವುದು ಈ ಕೂಟದ ಪ್ರಧಾನ ಉದ್ದೇಶವಾಗಿತ್ತು. ಈ ಕೂಟದ ನೇತೃತ್ವವನ್ನು ಪುಣೆ ಮೂಲದ ಇಎನ್‌ಟಿ ಸರ್ಜನ್ ಡಾ. ವೀರೇಂದ್ರ ತಾವ್ಡೆ ವಹಿಸಿದ್ದ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದಾಬೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿಯ ಹತ್ಯೆ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ತಾವ್ಡೆ ನಡೆಸುತ್ತಿದ್ದ. ಅಮೋಲ್ ಕಾಳೆ ಈತನ ಸಹಾಯಕನಾಗಿದ್ದ ಎನ್ನಲಾಗಿದೆ. ದಾಬೋಲ್ಕರ್ ಹತ್ಯೆಗೆ ಸಂಬಂಧಿಸಿ 2016ರ ಜೂನ್‌ನಲ್ಲಿ ಸಿಬಿಐ ಡಾ ತಾವ್ಡೆಯನ್ನು ಬಂಧಿಸಿತು. ತಾವ್ಡೆ ಬಂಧನದ ಬಳಿಕ ಕ್ರಿಮಿನಲ್ ಕೂಟವನ್ನು ಕಾಳೆ ಮುನ್ನಡೆಸುತ್ತಿದ್ದ ಮತ್ತು ಈತ ಗೌರಿ ಲಂಕೇಶ್ ಹತ್ಯೆ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತು. ಸನಾತನ ಸಂಸ್ಥೆಯ ಮುಖವಾಣಿಯಾಗಿರುವ ಸನಾತನ ಪ್ರಭಾತ ಪತ್ರಿಕೆಯ ಮಾಜಿ ಸಂಪಾದಕ ಈ ಕ್ರಿಮಿನಲ್ ಕೂಟವನ್ನು ಸ್ಥಾಪಿಸಿದ್ದ ಮತ್ತು ಅಮಿತ್ ದೆಗ್ವೇಕರ್ ಸಂಪಾದಕ ಹಾಗೂ ಕ್ರಿಮಿನಲ್ ಕೂಟದ ನಡುವಿನ ಸಂಪರ್ಕ ಸೇತುವಾಗಿದ್ದ ಎಂದು ‘ಸಿಟ್’ ತಿಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಎಂಎಂ ಕಲ್ಬುರ್ಗಿಯವರ ಕುಟುಂಬದ ಅರ್ಜಿಯ ಹಿನ್ನೆಲೆಯಲ್ಲಿ ಡಿಸೆಂಬರ್ ಮೊದಲ ವಾರ ಸುಪ್ರೀಂಕೋರ್ಟ್ ಸಿಬಿಐಗೆ ನೋಟಿಸ್ ಜಾರಿಗೊಳಿಸಿದ್ದು, ನಾಲ್ಕೂ ಹತ್ಯೆಯ ಪ್ರಕರಣಗಳ ವಿಚಾರಣೆಯನ್ನು ಒಂದೇ ಕೇಂದ್ರ ತನಿಖಾ ತಂಡ ಯಾಕೆ ನಿರ್ವಹಿಸಬಾರದು ಎಂದು ಪ್ರಶ್ನಿಸಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಎರಡು ರಾಜ್ಯಗಳಲ್ಲಿ ನಡೆದ ನಾಲ್ವರ ಹತ್ಯೆಯ ಹಿಂದೆ ಏಕೈಕ ಪಿತೂರಿ ಇರುವುದು ಸ್ಪಷ್ಟವಾಗಿದೆ ಎಂದು ಸುಪ್ರೀಂ ತಿಳಿಸಿದೆ. ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಜನವರಿ ಮೊದಲ ವಾರದಿಂದ ಆರಂಭವಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News