ಬಹಿರಂಗ ಚರ್ಚೆಗೆ ಬನ್ನಿ: ದಿನೇಶ್ ಅಮೀನ್ ಮಟ್ಟುಗೆ ಪೇಜಾವರಶ್ರೀ ಸವಾಲು
ಉಡುಪಿ, ಡಿ.27: ದಿನೇಶ್ ಅಮೀನ್ ಅವರು ನಮ್ಮ ಹಿಂಬದಿಯಲ್ಲಿ ನಮ್ಮ ಬಗ್ಗೆ ತುಂಬಾ ಟೀಕೆ ಮಾಡುತ್ತಾರೆ. ಎದುರಿಗೆ ಬಂದಾಗ ವಿಶೇಷ ಅಭಿಮಾನ ತೋರಿಸುತ್ತಾರೆ. ಏನಿದ್ದರೂ ಅವರು ನನ್ನ ಎದುರಿಗೆ ಬಂದು ಚರ್ಚೆ ನಡೆಸಲಿ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಸವಾಲು ಎಸೆದಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಡುಪಿ ಪೇಜಾವರ ಮಠ ಹಾಗೂ ಶ್ರೀಕೃಷ್ಣ ಮಠಕ್ಕೆ ಬಂದು ಭೇಟಿಯಾಗಿ ತೆರಳಿದ ಬಳಿಕ ಪೇಜಾವರ ಮಠದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಸವಾಲು ಎಸೆದರು.
ಇತ್ತೀಚೆಗೆ ಉಡುಪಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ದಿನೇಶ್ ಅವರು, ಪೇಜಾವರಶ್ರೀಗಳಿಗೆ ತುಂಬಾ ವಯಸ್ಸಾಗಿರುವುದರಿಂದ ಅರಳು- ಮರಳಾಗಿದೆ. ಅವರು ಕ್ಷಣ ಕ್ಷಣ ಏನೇನೊ ಮಾತನಾಡುತಿದ್ದಾರೆ. ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಹೇಳಿರುವುದರತ್ತ ಸುದ್ದಿಗಾರರು ಅವರ ಗಮನ ಸೆಳೆದಾಗ ಈ ಕುರಿತು ಪ್ರತಿಕ್ರಿಯಿಸಿದರು.
ಇತ್ತೀಚೆಗೆ ತಾವು ಅವರನ್ನು ವಿಮಾನ ನಿಲ್ದಾಣದಲ್ಲಿ ಸಿಕ್ಕಿದಾಗ ಅವರು ನನ್ನೊಂದಿಗೆ ಚೆನ್ನಾಗಿಯೇ ಮಾತನಾಡಿದ್ದರು. ಆದರೆ ಹಿಂದಿನಿಂದ ಬೇರೆಯೇ ಹೇಳಿಕೆ ನೀಡುತ್ತಾರೆ ಎಂದರು. ಅಂದು ಉಡುಪಿ ಚಲೋ ನಡೆದ ಮಾರ್ಗ ಹಾಗೂ ಮಠದ ಭಕ್ತರು ಶುದ್ಧಿ ಮಾಡಿದ ಜಾಗವೇ ಬೇರೆ ಬೇರೆ. ಆದರೂ ದಿನೇಶ್ ಈ ವಿಷಯವನ್ನು ಮತ್ತೆ ಮತ್ತೆ ಎತ್ತುತ್ತಾರೆ ಎಂದರು.