ಪಂಪ್‌ವೆಲ್‌ನಿಂದ ಕಂಕನಾಡಿ ವೃತ್ತವರೆಗೆ ಏಕಮುಖ ವಾಹನ ಪಾರ್ಕಿಂಗ್‌ಗೆ ಪೊಲೀಸ್ ಆಯುಕ್ತ ಸೂಚನೆ

Update: 2018-12-28 12:49 GMT

ಮಂಗಳೂರು, ಡಿ. 28: ವಾಹನ ದಟ್ಟಣೆ ಸುಧಾರಿಸುವ ನಿಟ್ಟಿನಲ್ಲಿ ಪಂಪ್‌ವೆಲ್‌ನಿಂದ ಕಂಕನಾಡಿ ವೃತ್ತವರೆಗೆ ದಿನಬಿಟ್ಟು ದಿನ ರಸ್ತೆಯ ಒಂದೊಂದು ಬದಿಯಲ್ಲಿ ಏಕಮುಖ ವಾಹನ ಪಾರ್ಕಿಂಗ್ ನಡೆಸಲು ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಅವರು ಕಾರ್ಯಕ್ರಮದಲ್ಲೇ ಇದ್ದ ಸಂಚಾರ ಪೊಲೀಸ್ ಸಹಾಯಕ ಆಯುಕ್ತರಿಗೆ ಸೂಚಿಸಿದರು.

ಪಂಪ್‌ವೆಲ್-ಕಂಕನಾಡಿ ರಸ್ತೆಯಲ್ಲಿ ಆಗಾಗ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಸುಗಮ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಒಳಪಡಿಸಬೇಕು ಎಂದು ನಾಗರಿಕರೊಬ್ಬರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಟಿ.ಆರ್.ಸುರೇಶ್, ಈ ಹಿಂದೆ ಏಕಮುಖ ಸಂಚಾರ ಮಾಡಿದಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಏಕಮುಖ ಸಂಚಾರವನ್ನು ಕೈಬಿಡಲಾಯಿತು. ನಂತರ ರಸ್ತೆ ಕಾಮಗಾರಿ ನಡೆಯುತ್ತಿದ್ದುದರಿಂದ ಸಂಚಾರ ಸುಧಾರಣೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಮೊದಲಿನಂತೆ ಏಕಮುಖ ಸಂಚಾರ ಮಾಡಲಾಗುವುದು ಎಂದರು.

ಮಾಲ್‌ಗಳಲ್ಲಿ ಪಾರ್ಕಿಂಗ್ ಶುಲ್ಕ

ನಗರದ ಮಾಲ್‌ಗಳಿಗೆ ಬರುವ ಗ್ರಾಹಕರ ವಾಹನಗಳಿಗೆ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತಿದೆ. ತಮ್ಮದೇ ಗ್ರಾಹಕರ ವಾಹನಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ. ಆದರೂ ನಿಯಮ ಉಲ್ಲಂಘಿಸಿ ಮಾಲ್‌ನ ಮಾಲಕರು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ತಡೆ ಹಾಕುವಂತೆ ನಾಗರಿಕರು ವಿನಂತಿಸಿದರು. ಈ ಬಗ್ಗೆ ನಿಯಮವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

ಹಳೇ ಬಸ್ ಬದಲಿಸಿ

ತೊಕ್ಕೊಟ್ಟಿನಿಂದ ಕುಂಪಲಕ್ಕೆ ಹಳೇ ಬಸ್‌ಗಳು ಸಂಚರಿಸುತ್ತಿವೆ. ಅದರಲ್ಲಿ ಪ್ರಯಾಣಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಹಳೇ ಬಸ್‌ಗಳನ್ನು ಬದಲಿಸಿ ಹೊಸ ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ನರ್ಮ್ ಬಸ್ ಸಂಚಾರ ಒದಗಿಸಬೇಕು ಎಂದು ಹಿರಿಯ ನಾಗರಿಕರೊಬ್ಬರ ಮನವಿಗೆ ಸ್ಪಂದಿಸಿದ ಪೊಲೀಸ್ ಆಯುಕ್ತರು ಈ ವಿಷಯವನ್ನು ಸಾರಿಗೆ ಪ್ರಾಧಿಕಾರದ ಗಮನಕ್ಕೆ ತರಲಾಗುವುದು ಎಂದರು.

ಸ್ಕೈವಾಕ್ ನಿರ್ಮಿಸಿ

ನಗರದ ಪುರಭವನ ಎದುರು ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ದಾಟಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು ಅಥವಾ ಸ್ಕೈವಾಕ್ ನಿರ್ಮಿಸಬೇಕು. ಈ ಬಗ್ಗೆ ಹಿಂದೆಯೇ ಮನವಿ ಮಾಡಿದರೂ ನಗರ ಪಾಲಿಕೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಆಗಾಗ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಹಿರಿಯ ನಾಗರಿಕರೊಬ್ಬರು ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಡಿಸಿಪಿ ಉಮಾ ಪ್ರಶಾಂತ್, ಅಲ್ಲಿ ಮೇಲ್ಸೇತುವೆ ನಿರ್ಮಿಸಲು ಪಾಲಿಕೆ ಈ ಹಿಂದೆಯೇ ರೂಪುರೇಷೆ ಸಿದ್ಧಪಡಿಸಿತ್ತು. ಆದರೆ ಜಾಗದ ಲಭ್ಯತೆ ಇಲ್ಲದ ಕಾರಣ ಸ್ಕೈವಾಕ್ ನಿರ್ಮಾಣಗೊಂಡಿಲ್ಲ. ಹಾಗಾಗಿ ಸದ್ಯ ಝೀಬ್ರಾ ಕ್ರಾಸ್ ಹಾಕಿ, ರಸ್ತೆ ಉಬ್ಬು ಮಾಡಲಾಗಿದೆ ಎಂದರು.

ಬಂದರಿನಲ್ಲಿ ಸಂಜೆ ವೇಳೆಗೆ ಲಾರಿಗಳಿಂದ ಮೀನುಗೊಬ್ಬರ ರಸ್ತೆಗೆ ಚೆಲ್ಲುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಅಲ್ಲಿ ಪೊಲೀಸ್ ಗಸ್ತು ನಡೆಸಲಾಗುವುದು ಎಂದರು.

ಪಬ್‌ಗಳಲ್ಲಿ ಅನೈತಿಕ ಚಟುವಟಿಕೆ ?

ನಗರದ ಪಬ್ ಹಾಗೂ ಮಸಾಜ್ ಸೆಂಟರ್‌ಗಳಲ್ಲಿ ಈಗಲೂ ಅನೈತಿಕ ಚಟುವಟಿಕೆ ನಡೆಯುತ್ತಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ದಿಢೀರ್ ದಾಳಿ ನಡೆಸಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು. ಈ ಕುರಿತು ಗೌಪ್ಯವಾಗಿ ನಿಖರ ಮಾಹಿತಿ ನೀಡುವಂತೆ ಸೂಚಿಸಿದ ಆಯುಕ್ತರು, ಪೊಲೀಸರು ಕೂಡ ಅಂತಹ ಕಡೆಗಳಲ್ಲಿ ನಿಗಾ ಇರಿಸಲಿದ್ದಾರೆ ಎಂದರು.

ರಸ್ತೆಗೆ ಡೀಸೆಲ್

ನಗರದ ಕೆಪಿಟಿ ಬಳಿ ಪೆಟ್ರೋಲ್ ಬಂಕ್ ಸಮೀಪ ಡೀಸೆಲ್ ರಸ್ತೆಗೆ ಚೆಲ್ಲಿ ವಾಹನ ಸಂಚಾರ ಕಷ್ಟವಾಗುತ್ತಿದೆ. ಪ್ರತಿದಿನ ಈ ಸಮಸ್ಯೆ ತಲೆದೋರುತ್ತಿದೆ. ಗುರುವಾರ ಒಂದೇ ದಿನ 12 ಬೈಕ್ ಸವಾರರು ಅಪಘಾತಕ್ಕೆ ಈಡಾಗಿದ್ದಾರೆ. ಆದ್ದರಿಂದ ಡೀಸೆಲ್ ರಸ್ತೆಗೆ ಚೆಲ್ಲುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರೊಬ್ಬರು ಆಗ್ರಹಿಸಿದರು.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಡಿಸಿಪಿ ಹನುಮಂತರಾಯ, ಸಂಚಾರಿ ಎಸಿಪಿ ಮಂಜುನಾಥ ಶೆಟ್ಟಿ, ಎಸ್‌ಐಗಳಾದ ಮಂಜುಳಾ, ರವಿ ಪವಾರ್ ಉಪಸ್ಥಿತರಿದ್ದರು.

► ಕಂಕನಾಡಿಯ ಫುಟ್‌ಪಾತ್‌ನಲ್ಲಿ ಆಟೋರಿಕ್ಷಾ ಪಾರ್ಕ್ ಮಾಡುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದೆ.
► ಕುದ್ರೋಳಿ ಮಾರುಕಟ್ಟೆ ಬಳಿ ರಸ್ತೆಗೆ ಅಡ್ಡಿಯಾಗುವಂತೆ ಗೂಡಂಗಡಿ ಇದೆ. ಅವುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು.
► ಸುರತ್ಕಲ್ ಮುಖ್ಯರಸ್ತೆಯಲ್ಲಿ ದಾರಿದೀಪ ಕೆಟ್ಟುಹೋಗಿದ್ದು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಹೆದ್ದಾರಿ ಇಲಾಖೆಗೆ ಸೂಚನೆ ನೀಡಬೇಕು.
► ಸುರತ್ಕಲ್‌ನಲ್ಲಿ ಗ್ರಾಮಾಂತರ ಸರಹದ್ದು ಹೆಸರಿನಲ್ಲಿ ಆಟೋರಿಕ್ಷಾಗಳು ಮೀಟರ್ ಹಾಕದೆ ಪ್ರಯಾಣಿಕರಿಂದ ಬಾಡಿಗೆ ಮೊತ್ತ ಸುಲಿಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News