×
Ad

ಜ.12-13: ಮಂಗಳೂರಿನಲ್ಲಿ ‘ರಿವರ್ ಫೆಸ್ಟಿವಲ್’ ಕಾರ್ಯಕ್ರಮದ ಪೂರ್ವಭಾವಿ ಸಭೆ

Update: 2018-12-28 20:50 IST

ಮಂಗಳೂರು, ಡಿ.28: ದ.ಕ.ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಕರಾವಳಿ ಉತ್ಸವದ ಅಂಗವಾಗಿ ಜನವರಿ 12 ಮತ್ತು 13ರಂದು ಕೂಳೂರು, ಬಂಗ್ರಕೂಳೂರು ಪಡಕೋಡಿ, ಸುಲ್ತಾನ್ ಬತ್ತೇರಿಯಲ್ಲಿ ನಡೆಸಲು ಉದ್ದೇಶಿಸಿರುವ ‘ರಿವರ್ ಫೆಸ್ಟಿವಲ್’ ಎಂಬ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉತ್ಸವದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಕೂಳೂರು ಸೇತುವೆ, ಬಂಗ್ರಕೂಳೂರು ಪಡಕೋಡಿ, ಸುಲ್ತಾನ್ ಬತ್ತೇರಿ ನದಿ ತೀರಗಳಲ್ಲಿ ವಾಟರ್ ಸ್ಪೋಟರ್ಸ್‌, ರಿವರ್ ಕ್ರ್ಯೂಜ್, ಫ್ಲೋಟಿಂಗ್ ಫುಡ್ ಸ್ಟಾಲ್ಸ್, ಆಹಾರ ಮಳಿಗೆಗಳು, ಪ್ರದರ್ಶನ ಮಳಿಗೆಗಳನ್ನು ತೆರೆಯಲು ಸಭೆ ನಿರ್ಧರಿಸಿತು.

ನದಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದ್ದು, ಪರಿಸರ ಸ್ನೇಹಿ, ಪ್ರವಾಸೋದ್ಯಮ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು 2 ದಿನ ನದಿಯಲ್ಲಿ ನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಫೆರ್ರಿಗಳನ್ನು ಸಜ್ಜುಗೊಳಿಸಲಾಗುವುದು. ವಾಹನ ಪ್ರವೇಶಕ್ಕೆ ಅವಕಾಶವಿಲ್ಲ. ಸೈಕಲ್ ಅಥವಾ ಕಾಲುದಾರಿಯಲ್ಲಿ ತೀರ ತಲುಪಬಹುದು. ಬಂಗ್ರಕೂಳೂರು ಪಡಕೋಡಿ, ತಣ್ಣೀರುಬಾವಿ, ಸುಲ್ತಾನ ಬತ್ತೇರಿಯಲ್ಲಿ ಫೆರ್ರಿಗಳು ಸಂಚರಿಸಲಿದೆ. ಇದಕ್ಕಾಗಿ ತೀರಗಳಲ್ಲಿ ತಾತ್ಕಾಲಿಕ ಜಟ್ಟಿಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸ್ಥಳೀಯ ಮೀನುಗಾರರ ನೆರವಿನೊಂದಿಗೆ ಹಾಗೂ ಪರಿಣತರ ತಂಡದ ಸಹಕಾರದಿಂದ ರಕ್ಷಣಾ ವ್ಯವಸ್ಥೆ ಮಾಡಲಾಗುವುದು. ಉತ್ಸವ ಸ್ಥಳಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಗೊಳಿಸಲು ಡಿಸಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಶೆಟ್ಟಿ, ಮುಡಾ ಆಯುಕ್ತ ಶ್ರೀಕಾಂತ್ ರಾವ್ ಅವರನ್ನು ಒಳಗೊಂಡ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಅಧಿಕಾರೇತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News