ಪೆರುವಾಯಿ: ಬಂಧುತ್ವ- ಕ್ರಿಸ್ಮಸ್ ಸೌಹಾರ್ದ ಕ್ರಿಕೆಟ್ ಪಂದ್ಯಾಟ
ಬಂಟ್ವಾಳ, ಡಿ. 31: ಪ್ರಕೃತಿ ದೇವರ ಸೃಷ್ಟಿ. ಅದಕ್ಕೆ ಜಾತಿ, ಧರ್ಮ ಪಂಥ ಯಾವುದೇ ಬೇಧವಿಲ್ಲ. ಆದರೆ, ಮನುಷ್ಯರು ಮಾತ್ರ ಅಜ್ಞಾನಿಯಂತೆ ವರ್ತಿಸುತ್ತಿದ್ದಾರೆ ಎಂದು ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.
ಅವರು ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ರವಿವಾರ ನಡೆದ ಬಂಧುತ್ವ ಹಾಗೂ ಕ್ರಿಸ್ಮಸ್ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಅವರು ಮಾತನಾಡಿದರು.
ಪೆರುವಾಯಿ ಹಾಗೂ ಮಾಣಿಲ ಗ್ರಾಮ ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಪ್ರೀತಿ ವಿಶ್ವಾಸ ಯುವಕರಲ್ಲಿ ಬಂದಾಗ ರಾಮರಾಜ್ಯ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶಾಂತಿ ಸೌಹಾರ್ದತೆ ಎಲ್ಲರಲ್ಲಿಯೂ ಬೆಳಗಲಿ ಎಂದು ಶುಭ ಹಾರೈಸಿದರು.
ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಡಾ. ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಮಾತನಾಡಿ, ಬಣ್ಣ, ಭಾಷೆ, ಧರ್ಮದ ವಿಷಯದಲ್ಲಿ ನಾವು ಬೇರೆ ಬೇರೆ ಆಗುವುದು ಬೇಡ. ಎಲ್ಲರೂ ಒಂದಾಗಿ ಮುನ್ನಡೆಯಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು.
ಕುಕ್ಕಾಜೆ ಕಾಳಿಕಾಂಬಾ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಖತೀಬು ಮುಹಮ್ಮದ್ ಶರೀಫ್ ಮದನಿ, ಪೆರುವಾಯಿ ಮುಹಿಯುದ್ದೀನ್ ಜುಮಾ ಮಸೀದಿಯ ಅಬ್ದುಲ್ ಗಫೂರ್ ಹನೀಫಿ, ಮಾಣಿಲ ಗ್ರಾಪಂ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಚರ್ಚ್ ಪಾಲನ ಉಪಾಧ್ಯಕ್ಷ ಜೋನ್ಸನ್ ಮೊಂತೇರೊ, ಕಾರ್ಯದರ್ಶಿ ವಿಲಿಯಂ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಪೆರುವಾಯಿ ಗ್ರಾಪಂ ಅಧ್ಯಕ್ಷ ರಾಲ್ಫ್ ಡಿಸೋಜ ಸ್ವಾಗತಿಸಿದರು. ರಾಕೇಶ್ ವಂದಿಸಿ, ದೀಕ್ಷಿತಾ ನಿರೂಪಿಸಿದರು.