ಬಿಜೆಪಿಯವರು ಕನಸು ಕಾಣುತ್ತಲೆ ಇರಲಿ: ಆರ್.ವಿ.ದೇಶಪಾಂಡೆ

Update: 2019-01-01 14:33 GMT

ಧಾರವಾಡ, ಜ.1: ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಕನಸು ಕಾಣುತ್ತಲೇ ಇರಲಿ. ರಾಜ್ಯದ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಜನರ ಆಶೀರ್ವಾದದಿಂದ ಐದು ವರ್ಷ ಅಧಿಕಾರ ಪೂರೈಸಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ಬಳಿಕ ಸರಕಾರ ಪತನವಾಗಲಿದೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಉಮೇಶ್ ಕತ್ತಿ ಒಂದು ಕಾಲದಲ್ಲಿ ನನ್ನ ಗರಡಿಯಲ್ಲಿ ಬೆಳೆದ ಹುಡುಗ. ಈಗ ಗರಡಿ ಮನೆ ಬಿಟ್ಟು ಹೋಗಿ, ಹೀಗೆಲ್ಲಾ ಮಾತನಾಡುತ್ತಿದ್ದಾನೆ. ಎಲ್ಲರೂ ಭವಿಷ್ಯ ಹೇಳುತ್ತಾ ಹೋದರೆ ಹೇಗೆ? ಉಮೇಶ್ ಕತ್ತಿ ಒಳ್ಳೆಯ ಮನುಷ್ಯ. ಆದರೆ ತನ್ನ ತಲೆಯಲ್ಲಿ ಏನು ಬರುತ್ತೋ ಅದನ್ನು ಹೇಳುತ್ತಾನೆ ಎಂದು ಅವರು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಮೇಶ್ ಜಾರಕಿಹೊಳಿ ಒಳ್ಳೆಯ ಹುಡುಗ. ಅವರ ಸಂಬಂಧಿ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಗನ ಮದುವೆ ಕಾರ್ಯಕ್ರಮಕ್ಕೆ ಅವರು ಯಾಕೆ ಬಂದಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News