ಸ್ಕೂಟರ್ - ಬೈಕ್ ಢಿಕ್ಕಿ: ವಿದ್ಯಾರ್ಥಿಗೆ ಗಾಯ
Update: 2019-01-01 15:22 GMT
ಮಂಜೇಶ್ವರ, ಜ. 1: ತಲಪಾಡಿ ಭಾಗದಿಂದ ಆಗಮಿಸುತಿದ್ದ ಸ್ಕೂಟರ್ ಹಾಗೂ ಪಲ್ಸರ್ ಬೈಕ್ ಮಂಗಳವಾರ ಸಂಜೆ ಕಣ್ವತೀರ್ಥ ರಸ್ತೆಯ ದ್ವಾರದ ಬಳಿ ಪರಸ್ಪರ ಢಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.
ಅಪಘಾತದಲ್ಲಿ ಕುಂಜತ್ತೂರು ಸನ್ನಡ್ಕ ಹಮೀದಾಜಿ ಎಂಬವರ ಪುತ್ರ ಹಾಗೂ ಮಂಗಳೂರು ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಸಹೂದ್ (20) ಗಾಯಗೊಂಡಿದ್ದಾರೆ. ಈತನನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರೀತಿ ಸ್ಕೂಟರ್ ಚಲಾಯಿಸುತಿದ್ದ ಕಣ್ವತೀರ್ಥ ಹೊಣ್ಣೆ ನಿವಾಸಿ ಶ್ರೀಧರ ಎಂಬವರ ಪತ್ನಿ ಸವಿತಾ ಎಂಬವರೂ ಗಾಯಗೊಂಡಿದ್ದಾರೆ.
ಸ್ಕೂಟರಿನಲ್ಲಿದ್ದ ಮಹಿಳೆ ಕಣ್ವತೀರ್ಥ ದ್ವಾರದ ಭಾಗಕ್ಕೆ ಸ್ಕೂಟರನ್ನು ತಿರುಗಿಸಿದಾಗ ಅದರ ಹಿಂದಿನಿಂದ ಆಗಮಿಸಿದ ಬೈಕ್ ಸವಾರನ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.