ಡಾ. ಪೀಟರ್ ಜೆ.ಕ್ಲಾಸ್ ಸಾಹಿತ್ಯದ ಬಗ್ಗೆ ವಿದೇಶಗಳಲ್ಲೂ ಆಸಕ್ತಿ ಮೂಡುವಂತೆ ಮಾಡಿದ ಸಂಶೋಧಕ -ಡಾ.ಬಿ.ಎ.ವಿವೇಕ ರೈ

Update: 2019-01-02 17:30 GMT

ಮಂಗಳೂರು, ಜ. 2: ಡಾ.ಪೀಟರ್ ಜೆ.ಕ್ಲಾಸ್ ತುಳು ನಾಡಿನ ಜಾನಪದ ಸಾಹಿತ್ಯದ ಬಗ್ಗೆ ವಿದೇಶದಲ್ಲೂ ಗಮನ ಸೆಳೆಯುವಂತೆ ಮಾಡಿದ ಮಹಾನ್ ವಿದ್ವಾಂಸ, ಸಂಶೋಧಕ ರಾಗಿದ್ದರು ಎಂದು ಅವರಿಗೆ ನುಡಿ ನಮನ ಸಲ್ಲಿಸಿದ ಡಾ.ಬಿ.ಎ.ವಿವೇಕ್ ರೈ ತಿಳಿಸಿದ್ದಾರೆ.

ನಗರದ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿ ಸಭಾಂಗಣದಲ್ಲಿ ಶುಕ್ರವಾರ ನಿಧನರಾದ ಡಾ.ಪೀಟರ್ ಜೆ ಕ್ಲಾಸ್ ಅವರಿಗೆ ನುಡಿ ನಮನ ಸಲ್ಲಿಸಿ ಅವರು ಇಂದು ಮಾತನಾಡುತ್ತಿದ್ದರು. ಅಮೇರಿಕಾದ ಕ್ಯಾಲಿಪೋರ್ನಿಯಾ ವಿಶ್ವ ವಿದ್ಯಾನಿಲಯದ ಮಾನವ ಶಾಸ್ತ್ರ ಮತ್ತು ಜಾನಪದ ವಿದ್ವಾಂಸ ಡಾ.ಪೀಟರ್ ಜೆ.ಕ್ಲಾಸ್ 1967 ರಲ್ಲಿ ಉಡುಪಿಗೆ ಬಂಧು ಕರಾವಳಿಯ ಬಗ್ಗೆ ಅಧ್ಯಯನ ನಡೆಸಲು ಆಸಕ್ತಿವಹಿಸಿದರು. ಕರಾವಳಿಯ ಬಂಟ ಜನಾಂಗದ ಬಂಧುತ್ವದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾಗ ಸಿರಿ ಪಾಡ್ದನದ ಬಗ್ಗೆ ತಿಳಿದುಕೊಂಡು ಅವುಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯಡ್ಕದ ಕರ್ಗಿ ಮುಂಡಾಲ್ತಿ ಯಿಂದ ಸಿರಿ ಪಾಡ್ದನವನ್ನು ಕೇಳಿ ತಿಳಿದುಕೊಂಡು ಸಂಗ್ರಹಿಸಿದರು. ಅವುಗಳನ್ನು ಹೊರ ಜಗತ್ತಿಗೆ ತಿಳಿಯುವಂತೆ ಮಾಡಿದರು. ಜನಪದ ಅಧ್ಯಯನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ.ಪೀಟರ್ ಜೆ.ಕ್ಲಾಸ್ ತಳ ಮಟ್ಟದ ಜನ ಸಾಮನ್ಯರೊಂದಿಗೆ ಸಾಮಾನ್ಯರಂತೆ ಬದುಕಿ ಅವರಿಂದ ಸಂಧಿ-ಪಾಡ್ದಾನಗಳನ್ನು ಸಂಗ್ರಹಿಸುತ್ತಿದ್ದರು.

ಅತ್ಯಂತ ಸರಳ ವ್ಯಕ್ತಿಯಾಗಿ ಬದುಕಿದ್ದ ಪೀಟರ್ ಜೆ. ಕ್ಲಾಸ್ ತುಳುನಾಡಿನ ಜನಪದ ಮೌಖಿಕ ಸಾಹಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ತುಳು ಭಾಷೆಯನ್ನು ಕಲಿತು ವ್ಯವಹರಿಸುತ್ತಿದ್ದರು. ಅದಕ್ಕೊಂದು ಉದಾಹರಣೆ ಅವರು ಬೆಳ್ಮದ ಬಳಿಯ ಒಂದು ಸಣ್ಣ ಗುಡಿಸಲಿನಲ್ಲಿದ್ದು ಅಲ್ಲಿನ ಜನರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದರು. ಬೈಕ್‌ನಲ್ಲಿ ಓಡಾಡುತ್ತಿದ್ದರು ಎಂದು ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ಯುವ ಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದರು:- ಡಾ.ಪೀಟರ್ ಜೆ ಕ್ಲಾಸ್ ಯುವ ಸಂಶೋಧಕರಿಗೆ ಮಾರ್ಗದರ್ಶಕರಾಗಿದ್ದರು. 1988ರಲ್ಲಿ ಜನಪದ ಸಾಹಿತ್ಯದ ಬಗ್ಗೆ ಕಾರ್ಯಗಾರವನ್ನು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಗಾರದಲ್ಲಿ ನಾನು ಮತ್ತು ಡಾ.ಪೀಟರ್ ಜೆ.ಕ್ಲಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದೆವು ಪರಿಣಾಮವಾಗಿ ಸಾಕಷ್ಟು ಸಂಶೋಧಕರಿಗೆ ಇದರಿಂದ ಮಾರ್ಗದರ್ಶನವಾಯಿತು.

ಕರಾವಳಿಯ ವೌಖಿಕ ಕಾವ್ಯಗಳಾದ ಸಂಧಿ-ಪಾಡ್ದನಗಳ ಬಗ್ಗೆ ವಿಶೇಷವಾಗಿ ಸಿರಿ ಪಾಡ್ದನದ ಬಗ್ಗೆ ಅಧ್ಯಯನ ನಡೆಸಿ ಅವುಗಳ ಬಗ್ಗೆ ಲೇಖನಗಳನ್ನು ಬರೆಯುವ ಮೂಲಕ ಸಂಶೋಧನೆಯ ಮೂಲಕ ಹೊರ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಿದ್ದಾರೆ.ಕರಾವಳಿ ಜನಪದ ಕಥೆಗಳನ್ನು ಎ.ಕೆ.ರಾಮನುಜಂ ಜೊತೆ ಸೇರಿ ಆಂಗ್ಲ ಭಾಷೆಯ ಕೃತಿಯನ್ನು ಹೊರ ತಂದಿದ್ದಾರೆ. ನಾನು ಮತ್ತು ಅವ ರ ಜೊತೆ ಸೇರಿ ಕರ್ನಾಟಕ ಪೋಕ್ ಲೋರ್ ಎನ್ನುವ ವಾರ್ತಾಪತ್ರವನ್ನುಕೆಲವು ಕಾಲ ಹೊರತಂದಿ ದ್ದೇವೆ. ಪೀಟರ್ ಜೆ.ಕ್ಲಾಸ್ ತುಳುವಿನ ಸಂಧಿ,ಪಾಡ್ದನದಂತಹ ವೌಖಿಕ ಕಲೆಗಳ ಬಗ್ಗೆ ಅಧ್ಯಯನ ಮಾಡಿ ಕೃತಿ ರಚನೆ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕರಾವಳಿಯ ಬಗ್ಗೆ ಅಧ್ಯಯನ ಮಾಡಿದ ಸಾಕಷ್ಟು ವರದಿಗಳು, ಸಂಗ್ರಹಗಳು, ಟಿಪ್ಪಣಿಗಳು ಅವರ ಬಳಿ ಇನ್ನೂ ಪ್ರಕಟವಾಗದೆ ಹಾಗೆ ಉಳಿದಿವೆ ಅವುಗಳನ್ನು ಪ್ರಕಟಿಸುವ ಬಗ್ಗೆ ಅಕಾಡೆಮಿಗಳು ಆಸಕ್ತಿವಹಿಸಿದರೆ ಉತ್ತಮ ಎನ್ನುವ ಸಲಹೆಯನ್ನು ಡಾ.ಬಿ.ಎ.ವಿವೇಕ ರೈ ತಿಳಿಸಿದರು.

ಪೀಟರ್ ಜೆ.ಕ್ಲಾಸ್ ಅವರ ಅಪ್ರಕಟಿತ ಕೃತಿಗಳನ್ನು ಹಾಗೂ ಅಧ್ಯಯನದ ದಾಖಲೆಗಳ ಸಂಗ್ರಹಗಳನ್ನು ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಮುದ್ರಿಸಲು ಸಿದ್ಧವಿರುವುದಾಗಿ ಮತ್ತು ಈ ನಿಟ್ಟಿನಲ್ಲಿ ಎಲ್ಲಾ ಸಹಕಾರವನ್ನು ನೀಡುವುದಾಗಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ ಡಾ.ವಾಮನ ನಂದಾವರ, ರಿಜಿಸ್ಟ್ರಾರ್ ಚಂದ್ರಹಾಸ ರೈ, ಬೆನೆಟ್ ಅಮ್ಮಣ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News