ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಮಾಧ್ಯಮ ಅಗತ್ಯ: ಟಿ.ಆರ್. ಸುರೇಶ್
ಮಂಗಳೂರು, ಜ.5: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮಾಧ್ಯಮಗಳು ಅತ್ಯಗತ್ಯ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅಭಿಪ್ರಾಯಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಉರ್ವ ಚರ್ಚ್ ಸಭಾಂಗಣದಲ್ಲಿ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕರಿಗೆ ಪ್ರಸ್ತಿ ಪ್ರದಾನ ಮಾಡಿ ಮಾತನಾಡಿದರು.
ದಿನವಿಡೀ ಸಮಾಜದ ಆಗುಹೋಗುಗಳ ಬಗ್ಗೆ ಎಚ್ಚೆತ್ತುಕೊಂಡಿರುವ ಮಾಧ್ಯಮ ಮಿತ್ರರು ತಮ್ಮಲ್ಲಿರುವ ವಿಭಿನ್ನ ರೀತಿಯ ಪ್ರತಿಭೆಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಆಯೋಜಿಸುವ ಈ ಕಾರ್ಯಕ್ರಮ ಅತ್ಯುತ್ತಮ. ಅದಕ್ಕಿಂತಲೂ ಮುಖ್ಯವಾಗಿ ಸಾಮಾನ್ಯ ರೈತನೊಬ್ಬ, ಸರಕಾರದ ನೆರವಿಲ್ಲದೆ, ಯಾವ ರೀತಿಯಲ್ಲಿ ಸಾಧನೆಯನ್ನು ಮಾಡಬಲ್ಲ ಎಂಬುದನ್ನು ಸಮಾಜಕ್ಕೆ ತಿಳಿಸುವುದಲ್ಲದೆ, ಆತನಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ಮಹತ್ವ ಕಾರ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಯಾವುದೇ ಗ್ಯಾರಂಟಿಯೇ ಇಲ್ಲದಿದ್ದರು, ಸಾಧಿಸಬೇಕೆಂಬ ಹಠದೊಂದಿಗೆ ಸ್ವಾಭಿಮಾನವನ್ನು ಬಿಡದೆ ಸಾಧನೆ ಮಾಡಿದ ಮಹಾಲಿಂಗ ನಾಯ್ಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಪ್ರಶಸ್ತಿಗೆ ನೀಡುವ ಗೌರವ ಎಂದು ಶ್ಲಾಘಿಸಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ವಾತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಹಮ್ಮದ್ ಆರಿಫ್ ಪಡುಬಿದ್ರೆ ಪ್ರಶಸ್ತಿ ವಿಜೇತ ಅಮೈ ಮಾಲಿಂಗ ನಾಯ್ಕರ ಪರಿಚಯ ನೀಡಿದರು.
ಪತ್ರಿಕಾ ರಂಗದಲ್ಲಿ ಅನನ್ಯ ಸೇವೆಗಾಗಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ಜಗನ್ನಾಥ ಶೆಟ್ಟಿ ಬಾಳ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿನಕರ ಇಂದಾಜೆ, ಎರಡು ಪಿಎಚ್ಡಿ ಪದವಿ ಪಡೆದ ಮತ್ತು ಶಂಕರ ಪುರಸ್ಕಾರ ಪಡೆದಿರುವ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ, ಜೇಸಿ ಔಟ್ ಸ್ಟಾಂಡಿಂಗ್ ಯಂಗ್ ಪರ್ಸನ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ದಯಾನಂದ ಕುಕ್ಕಾಜೆ, ಜನಪದೋತ್ಸವ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ನಾಗರಾಜ ಜವಳಿ, ತಿರುಮಲ ತಾತಾಚಾರ್ಯ ಶರ್ಮ ಪ್ರಶಸ್ತಿ ವಿಜೇತ ಜಿತೇಂದ್ರ ಕುಂದೇಶ್ವರ, ರಾಜ್ಯ ಮಟ್ಟದ ಸಾಂಘಿಕ ಪ್ರಶಸ್ತಿ ವಿಜೇತ ಮೌನೇಶ್ ವಿಶ್ವಕರ್ಮ, ಛಾಯಾಚಿತ್ರ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಛಾಯಾಗ್ರಾಹಕ ಅಪುಲ್ ಇರಾ, ಅರೆಹೊಳೆ ಪ್ರತಿಷ್ಠಾನದ ಹರಿಕೃಷ್ಣ ಪುನರೂರು ಮಾಧ್ಯಮ ಪ್ರಶಸ್ತಿ ವಿಜೇತ ಲಕ್ಷ್ಮೀ ಮಚ್ಚಿನ, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಗದೀಶ್ಚಂದ್ರ ಅಂಚನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪತ್ರಿಕಾ ಭವನ ಅಧ್ಯಕ್ಷ ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು.
ಇದೇ ವೇಳೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಆರ್. ರಾಮಕೃಷ್ಣ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪತ್ರಕರ್ತ ದಯಾನಂದ ಕುಡುಪು ಮತ್ತು ಬಳಗದಿಂದ ಸ್ಯಾಕ್ಯೋಫೋನ್ ವಾದನ ನಡೆಯಿತು. ಆತ್ಮಭೂಷಣ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರ ಶೆಟ್ಟಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ಪತ್ರಕರ್ತರಿಂದ ಯಕ್ಷಗಾನ ನರಕಾಸುರ ಮೋಕ್ಷ , ಮೈಂದ -ದ್ವಿವಿದ ಕಾಳಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರೆಸ್ಕ್ಲಬ್ ಪ್ರಶಸ್ತಿ ಪಡೆದ ಮಹಾಲಿಂಗ ನಾಯ್ಕ ಅವರ ಸಾಧನೆ ವಿದೇಶದಲ್ಲಾಗಿರುತ್ತಿದ್ದರೆ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರವಾಗುತ್ತಿತ್ತು.
- ಗುರುಕಿರಣ್, ಖ್ಯಾತ ಸಂಗೀತ ನಿರ್ದೇಶಕ.
ನೀರಿಲ್ಲದ ಜಾಗಕ್ಕೆ ಬಂದು ನೀರು ಕುಡಿಯುವಾಗ ಸಮಾಧಾನ: ಪ್ರೆಸ್ಕ್ಲಬ್ ಪ್ರಶಸ್ತಿ ವಿಜೇತ ಅಮೈ ಮಾಲಿಂಗ ನಾಯ್ಕರ ಸಂತೃಪ್ತಿಯ ನುಡಿ
ಪ್ರೆಸ್ಕ್ಲಬ್ 2018ನೆ ಸಾಲಿನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ, ‘‘ಗುಡ್ಡದಲ್ಲಿ ನಾನು ನೀರಿಗಾಗಿ ಸುರಂಗ ಕೊರೆಯುವಾಗ ಮೂದಲಿಸಿದವರೇ ಹೆಚ್ಚು. ಆದರೆ ಇದೀಗ ಆ ನೀರಿಲ್ಲದ ಪ್ರದೇಶಕ್ಕೆ ಬಂದವರು ನೀರು ಕುಡಿದು ಹೋಗುವಾಗ ನಾನು ಪಟ್ಟ ಶ್ರಮ ಸಾರ್ಥಕವೆನೆಸಿ ಸಮಾಧಾನವಾಗುತ್ತದೆ’’ ಎಂದು ಸಂತೃಪ್ತಿಯ ನುಡಿಯನ್ನಾಡಿದರು.
ಕೊಟ್ಟಿಗೆಯಲ್ಲಿ ವಾಸವಾಗಿದ್ದ ನನಗೆ, ನಾನು ವಾಸವಾಗಿದ್ದ ಭೂಮಿಯ ಒಡೆಯ ಮಹಾಬಲ ಭಟ್ ಭೂಮಿ ನೀಡಿದರು. ಆ ಭೂಮಿಯಲ್ಲಿ ಸತತ ಮೂರು ಸುರಂಗ ಕೊರೆದರೂ ನೀರು ಸಿಗದಾಗ ಬಾವಿ ತೋಡಿದೆ. ಅದರಲ್ಲೂ ನೀರು ಸಿಗದಾಗ ಎತ್ತರದ ಗುಡ್ಡ ಜಾಗದಲ್ಲಿ ಸುರಂಗ ಕೊರೆಯಲು ಮುಂದಾದೆ. ಆಗ ಸುತ್ತಮುತ್ತಲಿನವರು ಮೂದಲಿಸಿದರು. ಆದರೆ ನಾನು ಪಟ್ಟು ಬಿಡಲಿಲ್ಲ. ಸುರಂಗ ಕೊರೆಯುವುದನ್ನು ಮುಂದುವರಿಸಿದೆ. ನೀರು ದೊರೆಯಿತು. ಬಳಿಕ ಎರಡು ಬೆಳೆ ಭತ್ತ ಬೆಳೆಯಲಾರಭಿಸಿದೆ. ಬಳಿಕ ತೆಂಗು, ಅಡಿಕೆ, ಕೊಕ್ಕೋ, ಕರಿಮೆಣಸು, ಬಾಳೆ ಮೊದಲಾದ ಮಿಶ್ರ ಬೆಳೆಗಳನ್ನು ಬೆಳೆದೆ. ಸಿಕ್ಕ ಫಲದಲ್ಲಿ ಸಂತೃಪ್ತಿಯ ಜೀವನ ಸಾಗಿಸುತ್ತಿರುವ ತೃಪ್ತಿ ನನಗಿದೆ. ಈ ನನ್ನ ಶ್ರಮವನ್ನು ವಾರಣಾಸಿ ಸುಬ್ರಾಯ ಭಟ್ ಗುರುತಿಸಿ ಬೆಳಕಿಗೆ ತಂದು ಇಂದು ನನ್ನ ಸಾಧನೆ ರಾಜ್ಯ, ದೇಶದವರಿಗೆ ತಿಳಿಯುವಂತಾಗಿದೆ. ಕಷ್ಟ ಪಟ್ಟರೆ ಫಲ ಸಿಕ್ಕೇ ಸಿಗುತ್ತದೆ ಎಂಬುದು ನನ್ನಿಂದ ಸಾಬೀತಾಗಿದೆ. ವಿದ್ಯೆ ಇಲ್ಲದಿದ್ದರೂ ನಾನು ಕೃಷಿಯನ್ನು ಕೈಬಿಡಲಿಲ್ಲ ಎಂದು ಅಮೈ ಮಹಾಲಿಂಗ ನಾಯ್ಕ ತಮ್ಮ ಬದುಕಿನ ಶ್ರಮ, ಸಾರ್ಥಕತೆಯ ಜೀವನದ ಬಗ್ಗೆ ಹಂಚಿಕೊಂಡರು.