×
Ad

ಪಂಜಿಮೊಗರು ಯುವಕನ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ

Update: 2019-01-06 21:44 IST
ಸುನೀಲ್ - ಪ್ರವೀಣ್ - ಪ್ರೀತಂ

ಮಂಗಳೂರು, ಜ.6: ನಗರದ ಹೊರವಲಯ ಪಂಜಿಮೊಗರು ಸಮೀಪ ಮಾಲಾಡಿಯಲ್ಲಿ ರಾಕೇಶ್ ಎಂಬಾತನನ್ನು ಮಾರಕಾಯುಧಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಂಜಿಮೊಗರು ಮಂಜೊಟ್ಟಿ ನಿವಾಸಿ ಸುನೀಲ್‌ ಕುಮಾರ್ ಯಾನೆ ಕೌಟಿ (26), ಕೋಡಿಕಲ್ 6ನೇ ಕ್ರಾಸ್ ನಿವಾಸಿ ಪ್ರವೀಣ್ ಪೂಜಾರಿ ಯಾನೆ ಚೋಟು (23), ಸುಂಕದಕಟ್ಟೆ ಕಲ್ಬಾವಿ ನಿವಾಸಿ ಪ್ರೀತಂ ಯಾನೆ ಅಭಿ (22) ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ: ಜ. 3ರಂದು ರಾತ್ರಿ ಉರುಂದಾಡಿ ನಿವಾಸಿ ಯೋಗೀಶ್ ಎಂಬವರ ಪುತ್ರ ರಾಕೇಶ್ (27)  ಪಂಜಿಮೊಗರು ಸಮೀಪದ ಮಾಲಾಡಿಗೆ ಸ್ಕೂಟರ್‌ನಲ್ಲಿ ತಲುಪಿದಾಗ ಮೂವರು ಆರೋಪಿಗಳು ಅವರನ್ನು ಅಡ್ಡಗಟ್ಟಿ, ಕ್ಷ್ಷುಲಕ ಕಾರಣದ ನೆಪವೊಡ್ಡಿ ತಲವಾರಿನಿಂದ ರಾಕೇಶ್‌ ತಲೆ, ಕೈ, ಹೊಟ್ಟೆ ಮೇಲೆ ಕೊಚ್ಚಿ ಕೊಲೆಗೈಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಯ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಿದರು. ಆರೋಪಿಗಳು ರಾಕೇಶ್ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ಆರೋಪಿಗಳು ಹಾಗೂ ಹತ್ಯೆಯಾದ ರಾಕೇಶ್ ಸ್ನೇಹಿತರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ವಿವಿಧ ಪ್ರಕರಣ ದಾಖಲು: ಕೊಲೆ ಪ್ರಕರಣದ ಆರೋಪಿಗಳ ಪೈಕಿ ಸುನೀಲ್ ಕುಮಾರ್ ವಿರುದ್ಧ ಈ ಹಿಂದೆ ಉರ್ವ ಪೊಲೀಸ್ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣ ಹಾಗೂ 2014ನೇ ಇಸವಿಯಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಲಿ ಯೋಗೀಶನ ಸೂಚನೆಯಂತೆ ಉದ್ಯಮಿಗಳನ್ನು ಹಫ್ತಾ ಹಣಕ್ಕಾಗಿ ಕೊಲೆಗೈಯಲು ಸಂಚು ರೂಪಿಸುತ್ತಿದ್ದ ಪ್ರಕರಣದಲ್ಲಿ ಇತರರೊಂದಿಗೆ ಭಾಗಿಯಾದ ಮಾಹಿತಿಯಂತೆ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೋರ್ವ ಆರೋಪಿ ಪ್ರವೀಣ್ ಪೂಜಾರಿ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ(ಕದ್ರಿ) ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೈಸೂರು ನಗರ ಅಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ.

ಮತ್ತೋರ್ವ ಆರೋಪಿ ಪ್ರೀತಂ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಎರಡು ಹಲ್ಲೆ ಪ್ರಕರಣ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈ ಶ್ಯಾಮ್‌ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News