ಎಚ್‌ಎಎಲ್ ಕುರಿತ ಹೇಳಿಕೆಯ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್: ನಿರ್ಮಲಾ ಸೀತಾರಾಮನ್

Update: 2019-01-07 15:00 GMT

ಹೊಸದಿಲ್ಲಿ, ಜ.7: ಎಚ್‌ಎಎಲ್‌ಗೆ ನೀಡಿರುವ ಗುತ್ತಿಗೆ ಕುರಿತ ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಿ ಕಾಂಗ್ರೆಸ್ ದಾರಿ ತಪ್ಪಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಕುರಿತು ಲೋಕಸಭೆಯಲ್ಲಿ ಸಂಕ್ಷಿಪ್ತ ಹೇಳಿಕೆ ನೀಡಿರುವ ಅವರು, ಎಚ್‌ಎಎಲ್‌ಗೆ 26 ಸಾವಿರ ಕೋಟಿ ರೂ. ಮೊತ್ತದ ಗುತ್ತಿಗೆಯನ್ನು ನೀಡಲಾಗಿದ್ದು, 73 ಸಾವಿರ ಕೋಟಿ ರೂ. ಮೊತ್ತದ ಗುತ್ತಿಗೆಯನ್ನು ನೀಡಲು ನಿರ್ಧರಿಸಲಾಗಿದೆ ಎಂಬುದು ತನ್ನ ಹೇಳಿಕೆಯ ಸಾರಾಂಶವಾಗಿದೆ ಎಂದಿದ್ದಾರೆ. ಎಚ್‌ಎಎಲ್‌ಗೆ ಕೇಂದ್ರ ಸರಕಾರ 1 ಲಕ್ಷ ಕೋಟಿ ರೂ. ಮೊತ್ತದ ಗುತ್ತಿಗೆಯನ್ನು ನೀಡಿದೆ ಎಂದು ರಕ್ಷಣಾ ಸಚಿವೆ ಸಂಸತ್ತಿನಲ್ಲಿ ಸುಳ್ಳು ಹೇಳಿಕೆ ನೀಡಿರುವುದಾಗಿ ಕಾಂಗ್ರೆಸ್ ರವಿವಾರ ಆರೋಪಿಸಿತ್ತು. ಅಲ್ಲದೆ, ರಕ್ಷಣಾ ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸುವ ದಾಖಲೆ ಒದಗಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು.

ಇದಕ್ಕೆ ಲೋಕಸಭೆಯಲ್ಲಿ ಸೋಮವಾರ ಉತ್ತರಿಸಿದ ನಿರ್ಮಲಾ ಸೀತಾರಾಮನ್, ತನ್ನ ಹೇಳಿಕೆಯ ಕುರಿತ ಎಲ್ಲಾ ಸಂದೇಹಗಳಿಗೂ ಪೂರ್ಣವಿರಾಮ ನೀಡಲು ಬಯಸುತ್ತೇನೆ. ಈ ಕುರಿತು ಎತ್ತಿರುವ ಸಂದೇಹ ಸರಿಯಲ್ಲ ಮತ್ತು ದಾರಿ ತಪ್ಪಿಸುವ ರೀತಿಯದ್ದಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News