×
Ad

ಜ.10ರಂದು ಎಂಆರ್‌ಪಿಎಲ್ ವಿರುದ್ಧ ಕ್ರಮಕ್ಕೆ ಆಗ್ರಹ: ಜಿಲ್ಲಾಧಿಕಾರಿ ಕಚೇರಿಗೆ ಪೊರಕೆ ಮೆರವಣಿಗೆ

Update: 2019-01-07 21:51 IST

ಮಂಗಳೂರು, ಜ.7: ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಉಂಟಾದ ಕೆಮಿಕಲ್ ಮಾಲಿನ್ಯದ ಸಮಸ್ಯೆಗಳ ವಿರುದ್ಧ ಜ.10ರಂದು ಬೆಳಗ್ಗೆ 10:30ಕ್ಕೆ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರಗೆ ಪೊರಕೆ ಮೆರವಣಿಗೆ, ಧರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ನಾಗರಿಕ ಹೋರಾಟ ಸಮಿತಿಯ ಪ್ರಮುಖ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೋಕಟ್ಟೆ, ಕಳವಾರು, ತೋಕೂರು ಗ್ರಾಮಸ್ಥರು ವರ್ಷಗಳ ಕಾಲ ನಡೆಸಿದ ಹೋರಾಟದ ಪರಿಣಾಮವಾಗಿ ಸರಕಾರ ಹೊರಡಿಸಿದ ಆರು ಅಂಶಗಳ ಪರಿಹಾರ ಕ್ರಮದ ಆದೇಶವನ್ನು ಎಂಆರ್‌ಪಿಎಲ್ ಜಾರಿಗೆ ತರದೆ ವಂಚಿಸಿದೆ, ಜಿಲ್ಲಾಡಳಿತವೂ ಕಂಪೆನಿಯ ಜೊತೆ ಶಾಮೀಲಾಗಿ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪರಿಸರ ನಿಯಮಗಳನ್ನು ಉಲ್ಲಂಘಿಸಿ, ಹಸಿರು ವಲಯ ನಿರ್ಮಿಸದೆ ಕಂಪೆನಿಯು ಜನವಸತಿ ಪ್ರದೇಶದಲ್ಲಿ ಅಕ್ರಮವಾಗಿ ಪೆಟ್‌ಕೋಕ್, ಸಲ್ಫರ್ ಘಟಕ ಸ್ಥಾಪಿಸಿದ ಪರಿಣಾಮ ಸಮೀಪದ ಗ್ರಾಮಗಳ ಜನತೆಯ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಿತ್ತು. ಪೆಟ್ ಕೋಕ್, ಸಲ್ಫರ್ ಹಾರುಬೂದಿ, ಶಬ್ದ, ವಾಯು ಮಾಲಿನ್ಯದ ವ್ಯಾಪಕ ಸಮಸ್ಯೆಗಳ ವಿರುದ್ಧ ಜನತೆ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹಸಿರು ವಲಯ ನಿರ್ಮಾಣ ಸಹಿತ ಆರು ಅಂಶಗಳ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕೃತ ಆದೇಶ ಹೊರಡಿಸಿತ್ತು ಎಂದರು.

ಆದೇಶ ಜಾರಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಸದ, ಶಾಸಕರು ಸದಸ್ಯರಾಗಿರುವ ಸಮಿತಿ ರಚಿಸಿತ್ತು. ಆದರೆ ಸರಕಾರದ ಆದೇಶ ಹೊರಟು ವರ್ಷಗಳು ಕಳೆದರೂ ಕಂಪೆನಿಯು ಅದೇಶವನ್ನು ಜಾರಿಗೆ ತರದೆ ಕಾಲಹರಣ ಮಾಡುತ್ತಿದೆ. ಜಿಲ್ಲಾಧಿಕಾರಿ ಕನಿಷ್ಠ ಸಮಿತಿಯ ಸಭೆಯನ್ನೂ ಸೇರಿಸದೆ ಕಂಪೆನಿಯ ಪರ ಮೃದುಧೋರಣೆ ತೋರಿಸುತ್ತಿದ್ದಾರೆ. ಜನಪ್ರತಿನಿಧಿಗಳು ಈ ಕುರಿತು ಮೌನಕ್ಕೆ ಶರಣಾಗಿ ಗ್ರಾಮಸ್ಥರ ಸಮಸ್ಯೆಗಳಿಗೆ ಕುರುಡಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನಲೆಯಲ್ಲಿ ಮಾರಕ ಮಾಲಿನ್ಯದಿಂದ ಕಂಗೆಟ್ಟಿರುವ ಸ್ಥಳೀಯರು ಮತ್ತೊಮ್ಮೆ ತೀವ್ರತರದ ಹೋರಾಟಕ್ಕೆ ಮುಂದಾಗಿದ್ದು, ಕಂಪೆನಿಯ ವಂಚನೆ, ಜಿಲ್ಲಾಡಳಿತದ ಕಂಪೆನಿ ಪರ ನಿಲುವುಗಳನ್ನು ವಿರೋಧಿಸಿ, ಸರಕಾರದ ಆದೇಶ ತಕ್ಷಣ ಜಾರಿಗೆ ತರಬೇಕು. ಮಾಲಿನ್ಯಕಾರಕ, ವಂಚಕ ಕಂಪೆನಿ ಎಂಆರ್‌ಪಿಎಲ್‌ಅನ್ನು ಸಾವಿರ ಎಕರೆ ಕೃಷಿ ಭೂಮಿಯಲ್ಲಿ ವಿಸ್ತರಿಸುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ಪೊರಕೆ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News