‘ಟಿಆರ್ಎಫ್’ನ ಕಾರ್ಯಚಟುವಟಿಕೆಗಳ ‘ಕನ್ನಡಿ’ ಸಾಕ್ಷ್ಯಚಿತ್ರ ಬಿಡುಗಡೆ
ಮಂಗಳೂರು,ಜ.11:ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಕಳೆದ 13 ವರ್ಷದಲ್ಲಿ ಮಾಡಿದ ಸೇವಾ ಕಾರ್ಯ ಚಟುವಟಿಕೆಗಳ ಕುರಿತಾದ ವೀಡಿಯೋ ಸಾಕ್ಷ್ಯಚಿತ್ರ ‘ಕನ್ನಡಿ-ಸೇವೆಗೊಂದು ಮಾರ್ಗದರ್ಶನ’ದ ಬಿಡುಗಡೆ ಮತ್ತು ಮೊಬೈಲ್ ತರಬೇತಿ ಕೋರ್ಸ್ ಪೂರೈಸಿದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಟಿಆರ್ಎಫ್ ಸಭಾಂಗಣದ ಮರ್ಹೂಂ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ವೇದಿಕೆಯಲ್ಲಿ ಶುಕ್ರವಾರ ಜರುಗಿತು.
ವೈಟ್ಸ್ಟೋನ್ ಡೆವಲಪರ್ಸ್ನ ಆಡಳಿತ ನಿರ್ದೇಶಕ ಮುಹಮ್ಮದ್ ಶರೀಫ್ ಜೋಕಟ್ಟೆ ವೀಡಿಯೋ ಸಾಕ್ಷಚಿತ್ರ ‘ಕನ್ನಡಿ-ಸೇವೆಗೊಂದು ಮಾರ್ಗದರ್ನ’ವನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಆರ್ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ ‘ಸಮಾಜದ, ಸಮುದಾಯದ ಬಡತನ ಮತ್ತು ಸಮಸ್ಯೆಗಳ ನಿವಾರಣೆಗೆ ಸಾಮೂಹಿಕ ಪ್ರಯತ್ನ ಅತ್ಯಗತ್ಯವಾಗಿದೆ. ಆದಾಗ್ಯೂ ಸೇವೆ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಇರಬೇಕು. ಅದರೊಂದಿಗೆ ಪ್ರತಿಯೊಂದು ಕುಟುಂಬದ ಸದಸ್ಯರು ತಮ್ಮದೇ ಆದ ‘ಫ್ಯಾಮಿಲಿ ಟ್ರಸ್ಟ್’ ರಚಿಸುವ ಮೂಲಕ ಕುಟುಂಬದೊಳಗಿನ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಫ್ಯಾಮಿಲಿ ಟ್ರಸ್ಟ್ ರಚನೆಗೊಂಡರೆ ಸಮುದಾಯದ ಸಮಸ್ಯೆಗಳಿಗೆ ಸ್ವತಃ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ಎಂಆರ್ ಗ್ರೂಪ್ ಬಿಲ್ಡರ್ಸ್ ಆ್ಯಂಡ್ ಪ್ರಮೋಟರ್ಸ್ನ ಆಡಳಿತ ನಿರ್ದೇಶಕ ಎಸ್.ಎಂ.ಆರ್.ರಶೀದ್ ಹಾಜಿ, ಆಝಾದ್ ಗ್ರೂಪ್ ಆಫ್ ಕಂಪೆನೀಸ್ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್ ಆಝಾದ್, ವೈಟ್ಹೌಸ್ನ ಮಾಲಕ ರಿಯಾಝ್ ಮುಸದ್ದಿಕ್, ಜಮೀಯ್ಯತುಲ್ ಫಲಾಹ್ನ ಮಾಜಿ ಅಧ್ಯಕ್ಷ ಅಝೀಮ್ ಮುಹಮ್ಮದ್, ಉದ್ಯಮಿ ಝಿಯಾವುದ್ದೀನ್ ಅಹ್ಮದ್ ಅವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ವಿಭಿನ್ನ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಟಿಆರ್ಎಫ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ನಕಾಶ್ ಬಾಂಬಿಲ ವಂದಿಸಿದರು. ಟಿಆರ್ಎಫ್ ಗೌರವ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಟಿಆರ್ಎಫ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಮೊಬೈಲ್ ಕೋರ್ಸ್ ಪೂರೈಸಿದವರಿಗೆ ಪ್ರಮಾಣ ಪತ್ರ ವಿತರಣೆಯ ಕಾರ್ಯನಿರ್ವಹಿಸಿದರು.
‘ಟಿಆರ್ಎಫ್’ನ 13 ವರ್ಷದ ಕಾರ್ಯಚಟುವಟಿಕೆಗಳ ಕುರಿತಾದ ವೀಡಿಯೋ ಸಾಕ್ಷ್ಯಚಿತ್ರ ‘ಕನ್ನಡಿ-ಸೇವೆಗೊಂದು ಮಾರ್ಗದರ್ಶನ’ ಬಿಡುಗಡೆಗೊಳಿಸಲಾಯಿತು.
‘ಕನ್ನಡಿ’ಯ ಸಾಕ್ಷಚಿತ್ರದ ನಿರ್ದೇಶಕ ಹನೀಫ್ ಪುತ್ತೂರ್ ಅವರನ್ನು ಸನ್ಮಾನಿಸಲಾಯಿತು.
‘ಟಿಆರ್ಎಫ್’ 12 ವರ್ಷದಿಂದ ನಡೆಸಿಕೊಂಡು ಬರುವ ಮೊಬೈಲ್ ತರಬೇತಿ ಕೋರ್ಸ್ನ 22ನೆ ಬ್ಯಾಚ್ನ 47 ಮಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.