ಹತ್ಯೆಗೆ ಸಂಚು ಸುದ್ದಿ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ತಯಾರಿ: ಎಸ್‌ಡಿಪಿಐ ಆರೋಪ

Update: 2019-01-11 17:30 GMT

ಮಂಗಳೂರು, ಜ.11: ದ.ಕ.ಜಿಲ್ಲೆಯ ಕೆಲವು ಸಂಘಪರಿವಾರದ ನಾಯಕರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸುಳ್ಳು ಸುದ್ದಿಯನ್ನು ಕೆಲವು ಮಾಧ್ಯಮಗಳ ಮೂಲಕ ಪ್ರಚಾರಪಡಿಸಿದ್ದು, ಮತ್ತೊಮ್ಮೆ ಹಿಂದೂ ಮತಗಳನ್ನು ಕ್ರೋಢೀಕರಿಸಿ ಮುಂದಿನ ಲೋಕಸಭಾ ಚುನಾವಣೆಯನ್ನು ಸುಲಭವಾಗಿ ಗೆಲ್ಲುವ ಒಂದು ಪ್ರಯತ್ನವಾಗಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.

ಈ ರೀತಿಯ ಹತ್ಯೆಯ ಸಂಚು ಎಂಬ ಪ್ರಹಸನವನ್ನು ಸೃಷ್ಟಿಸುವುದರಲ್ಲಿ ಸಂಘಪರಿವಾರ ಮತ್ತು ಬಿಜೆಪಿ ನಿಸ್ಸೀಮ. ಇಂತಹ ಸತ್ಯಕ್ಕೆ ನಿಲುಕದ ಸುಳ್ಳು ಸುದ್ದಿಗಳನ್ನು ಬಿಜೆಪಿ ಪಕ್ಷವು ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಛೂ ಬಿಡುತ್ತದೆ. ಆದರೆ ಈ ಸುದ್ದಿ ಎಲ್ಲಿಂದ ಬಂತು? ಯಾರು ಇದರ ಹಿಂದೆ ಇರುವವರು? ಎಂಬುದರ ಬಗ್ಗೆ ತನಿಖೆ ನಡೆಸಿದಾಗ ನಿಖರವಾದ ಮಾಹಿತಿಗಳು ಪೊಲೀಸ್ ಇಲಾಖೆಗೆ ಸಿಕ್ಕಿರುವುದಿಲ್ಲ. ಈ ಸುದ್ದಿಯು ಕೂಡ ಅದೇ ರೀತಿಯಾಗಿದೆ ಎಂದು ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.

ಗುಪ್ತಚರ ಇಲಾಖೆಯು ಇಂತಹ ಸೂಕ್ಷ್ಮಮತ್ತು ಗಂಭೀರ ಸ್ವರೂಪದ ಸುದ್ದಿಯನ್ನು ಗುಪ್ತವಾಗಿ ಕೇವಲ ಎರಡು ಮಾಧ್ಯಮಗಳಿಗೆ ಮಾತ್ರ ನೀಡಿರುವ ಔಚಿತ್ಯವಾದರೂ ಏನು? ಎಂಬ ಸಂಶಯವು ಸಾಮಾನ್ಯವಾಗಿ ಉದ್ಭವಿಸುತ್ತದೆ. ಸಂಘ ಪರಿವಾರವು ಕರಾವಳಿಯ ಪೊಲೀಸ್ ಇಲಾಖೆಯಲ್ಲಿ ಶೇ.60 ಪೊಲೀಸರು ಸಂಘಪರಿವಾರದವರು ಎಂಬ ಹೇಳಿಕೆ ಈ ಮೊದಲು ನೀಡಿರುವುದರಿಂದ ಈ ಪ್ರಹಸನದಲ್ಲಿ ಪೊಲೀಸರು ಕೂಡ ಶಾಮೀಲಾಗಿದ್ದಾರೆಯೇ ಎಂದು ಎಸ್‌ಡಿಪಿಐ ಪ್ರಶ್ನಿಸಿದೆ.

ಮುಸ್ಲಿಂ ನಾಯಕರಿಗೆ ನೇರವಾಗಿ ಬೆದರಿಕೆ ಬಂದ ಸಂದರ್ಭ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದವರು ಸಂಘಪರಿವಾರದ ಕ್ರಿಮಿನಲ್ ನಾಯಕರಿಗೆ ಸರಕಾರಿ ವೆಚ್ಚದಲ್ಲಿ ರಕ್ಷಣೆಯನ್ನು ನೀಡುತ್ತಿರುವುದು ದುರಂತವಾಗಿದೆ ಹಾಗೂ ಈ ಸುಳ್ಳು ಸುದ್ದಿಯನ್ನು ಆಧರಿಸಿ ಮುಸ್ಲಿಂ ಯುವಕರನ್ನು ಬೇಟೆಯಾಡುತ್ತಿರುವುದನ್ನು ಎಸ್‌ಡಿಪಿಐ ಪಕ್ಷವು ಖಂಡಿಸುತ್ತದೆ. ಪೊಲೀಸ್ ಇಲಾಖೆಯು ಈ ಸುದ್ದಿಯ ನೈಜತೆಯ ಬಗ್ಗೆ ವಿಶೇಷ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರವನ್ನು ಬಹಿರಂಗ ಪಡಿಸುವುದರ ಮೂಲಕ ಸತ್ಯವನ್ನು ಜನರ ಮುಂದೆ ಬಯಲುಗೊಳಿಸಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಕಲು ಮುಂದಾಗಬೇಕು ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News