×
Ad

ಮರಳು ಲಭ್ಯತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ: ದಿನಕರ ಬಾಬು

Update: 2019-01-16 20:37 IST

ಉಡುಪಿ, ಜ.16: ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಮರಳು ದೊರೆಯುವ ಕುರಿತಂತೆ ಸ್ಪಷ್ಟವಾದ ಮಾಹಿತಿ ನೀಡಿ. ಪತ್ರಿಕಾ ಪ್ರಕಟಣೆಯಲ್ಲಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ಮರಳು ಲ್ಯವಿದೆ ಎಂದು ಪ್ರಕಟಣೆ ನೀಡುತ್ತೀರಿ. ಆದರೆ ಅಲ್ಲಿ ವಿಚಾರಿಸಿದಾಗ ಮರಳು ಲ್ಯವಿಲ್ಲ ಎಂಬ ಮಾಹಿತಿ ಸಿಗುತ್ತಿದೆ. ಆದ್ದರಿಂದ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಇಂದಿಲ್ಲಿ ನಿರ್ದೇಶ ನೀಡಿದರು.

ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಜಿಲ್ಲೆಯ ಸಾರ್ವಜನಿಕರು ಜನಪ್ರತಿನಿಧಿಗಳಾದ ನಮಗೆ ಮರಳು ಅಲ್ಯತೆ ಕುರಿತು ದೂರುತ್ತಿದ್ದು, ಈ ಕುರಿತು ವಿಚಾರಿಸಿಲು ನಾನೇ ಖುದ್ದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಸಂಪರ್ಕಿಸಿದಾಗ ಟ್ರಿಪ್‌ಶೀಟ್ ಇಲ್ಲ, ಸ್ಟಾಕ್ ಇಲ್ಲ ಎಂಬ ಉತ್ತರ ನೀಡುತ್ತೀರಿ. ಜನರಿಗೆ ವಿತರಿಸಲು ಲಭ್ಯವಿಲ್ಲವಾದಲ್ಲಿ ಮರಳು ಲಭ್ಯವಿದೆ ಪಡೆಯಿರಿ ಎಂದು ಪತ್ರಿಕಾ ಪ್ರಕಟಣೆ ನೀಡುವ ಉದ್ದೇಶವಾದರೂ ಏನು ಎಂದು ಅವರು ಗಣಿ ಇಲಾಖೆಯ ಹಿರಿಯ ಅಧಿಕಾರಿಯನ್ನು ಪ್ರಶ್ನಿಸಿದರು.

ಈ ಬಗ್ಗೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ, ಜಿಲ್ಲೆಯ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 5 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದ್ದು, ಇದರಲ್ಲಿ 16,000 ಮೆಟ್ರಿಕ್ ಟನ್ ಮಾತ್ರ ಮರಳು ದೊರೆತಿದೆ. 2ನೇ ಹಂತದಲ್ಲಿ 11 ಬ್ಲಾಕ್ ಗಳನ್ನು ಗುರುತಿಸಿ, ಮರಳು ತೆಗೆಯುವ ಕುರಿತಂತೆ ಕರ್ನಾಟಕ ಕೋಸ್ಟಲ್ ರೆನ್ ಮ್ಯಾನೇಜ್‌ಮೆಂಟ್ ಅಥಾರಿಟಿ (ಕೆಸಿಝಡ್‌ಎಂಎ)ಗೆ ಅನುಮತಿ ಕೋರಲಾಗಿದೆ ಎಂದರು.

ಶೀಘ್ರದಲ್ಲೇ ಅಲ್ಲಿಂದ ಅನುಮತಿ ದೊರೆಯುವ ನೀರೀಕ್ಷೆಯಿದೆ. ಈ 11 ಬ್ಲಾಕ್‌ಗಳಲ್ಲಿ 16 ಲಕ್ಷ ಮೆ.ಟನ್ ಮರಳು ದೊರೆಯುವ ನಿರೀಕ್ಷೆ ಇದೆ. ಜಿಲ್ಲೆಯ ಒಟ್ಟು ಮರಳಿನ ಬೇಡಿಕೆ 13 ಲಕ್ಷ ಮೆ.ಟನ್ ಇದ್ದು, ಜಿಲ್ಲೆಯ ಅಗತ್ಯಕ್ಕೆ ಸಾಕಷ್ಟು ಮರಳು ಇದರಲ್ಲಿ ದೊರೆಯಲಿದೆ. ಅಲ್ಲದೇ ಮರಳಿನ ದರ ಸಹ ಕಡಿಮೆ ಯಾಗಲಿದೆ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುದ್ದೀಕರಣ ಮಾಡುವ ಕುರಿತಂತೆ, ಪ.ಜಾತಿಗೆ ಸಂಬಂಧಿಸಿದಂತೆ ಎಲ್ಲಾ 20 ಅರ್ಜಿಗಳು ಬಾಕಿ ಇರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದರು.

ಪಶುಪಾಲನಾ ಇಲಾಖೆ ವತಿಯಿಂದ ಗಿರಿರಾಜ ಕೋಳಿಗಳನ್ನು ವಿತರಿಸ ಲಾಗುವ, ಫಲಾನುವಿಗಳ ಆಯ್ಕೆ ಮಾಡುವಾಗ ಸಂಬಂಧಪಟ್ಟ ಜಿಪಂ ಅಧ್ಯಕ್ಷರ ಮತ್ತು ಸ್ಥಳಿಯ ಜಿಪಂ ಸದಸ್ಯರ ಗಮನಕ್ಕೆ ತಾರದೇ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ. ಇನ್ನು ಮುಂದೆ ಅವರ ಗಮನಕ್ಕೆ ತಂದು ಫಲಾನುವಿ ಗಳನ್ನು ಆಯ್ಕೆ ಮಾಡಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಗಂಗೊಳ್ಳಿ ಬಂದರುಕಟ್ಟೆ ನಿರ್ಮಾಣಕ್ಕೆ ದುಂಡಿಕಲ್ಲು ಹಾಕಿರುವ ಕುರಿತಂತೆ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ ಸಮುದ್ರಕ್ಕೆ ದುಂಡಿಕಲ್ಲು ಸಾಗಾಟವಾಗಿರುವ ಕುರಿತಂತೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪಾವತಿಸಿಕೊಂಡಿರುವ ರಾಜಧನದ ಕುರಿತು ಸಮರ್ಪಕ ಮಾಹಿತಿ ನೀಡುವಂತೆ ಹಾಗೂ ರಾಜಧನದ ಪಾಲನ್ನು ಸ್ಥಳೀಯ ಗ್ರಾಪಂಗಳಿಗೆ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯನ್ನು ಸ್ಥಳೀಯ ಪಂಚಾಯತ್ ವ್ಯಾಪ್ತಿಯಲ್ಲಿ ಬಳಕೆದಾರರ ಸಂಘಗಳನ್ನು ಸ್ಥಾಪಿಸಿ, ಅವುಗಳಿಗೆ ನೀಡುವಂತೆ ಬಾಬು ಶೆಟ್ಟಿ ತಿಳಿಸಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ ಮಾತನಾಡಿ, ಹೆಜಮಾಡಿ ಟೋಲ್ ವಿರುದ್ದ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಯುತ್ತಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ, ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಳ ಗಮನಕ್ಕೆ ತರುವಂತೆ ನಿರ್ಣಯ ಮಾಡುವಂತೆ ತಿಳಿಸಿದರು.

ಎಲ್ಲಾ ಇಲಾಖೆಗಳು ತಮ್ಮ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ.ರೂಪೇಶ್, ಎಸ್‌ಸಿಪಿಟಿಎಸ್‌ಪಿ ಯೋಜನೆಯ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಮುಗಿಸಿ ಗುರಿ ಸಾಧಿಸದಿದ್ದಲ್ಲಿ, ಸಂಬಂದಪಟ್ಟವರ ವಿರುದ್ದ ಕ್ರಮಕ್ಕೆ ಶಿಪಾರಸ್ಸು ಮಾಡುವುದು ಅನಿವಾರ್ಯವಾಗಲಿದೆ. ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮಿತಿಗಳನ್ನು ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ‘ಸ್ವಚ್ಛ ಸುಂದರ ಶೌಚಾಲಯ ಸ್ಪರ್ಧೆ’ ಆಯೋಜಿಸಿದ್ದು, ಆಂದೋಲನ ಅವಧಿಯಲ್ಲಿ ಅತೀ ಹೆಚ್ಚು ಶೌಚಾಲಯಗಳಿಗೆ ಬಣ್ಣ ಬಳಿಯುವ ಶೇಕಡಾವಾರು ಸಾಧನೆಯ ಆಧಾರದ ಮೇಲೆ ಜಿಲ್ಲೆ, ಗ್ರಾಪಂ ಹಾಗೂ ಕ್ರಿಯಾತ್ಮಕವಾಗಿ ಮತ್ತು ವರ್ಣರಂಜಿತವಾಗಿ ಬಣ್ಣ ಬಳಿದ ವೈಯಕ್ತಿಕ ಕುಟುಂಬಗಳಿಗೂ ಸಹ ಕೇಂದ್ರ ಸರಕಾರ ಪುರಸ್ಕಾರವನ್ನು ನೀಡಿ ಗೌರವಿಸಲಿ ಸಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರತಿಯೊಂದು ಕುಟುಂಬದ ಮಾಲಕರು ತಮ್ಮ ಶೌಚಾಲಯಗಳಿಗೆ ಬಣ್ಣ ಬಳಿಯಬೇಕು ಶೌಚಾಲಯ ಬಳಕೆಯ ಕುರಿತು ಸಂದೇಶ, ಸ್ವಚ್ಛ ಭಾರತ್ ಮಿಷನ್ ಘೋಷವಾಕ್ಯಗಳ ಬರಹಗಳನ್ನು ಶೌಚಾಲಯದ ಮೇಲೆ ಬರೆಸಲು ಹಾಗೂ ಸ್ವಚ್ಛತೆ ಸಂಬಂಧಿಸಿದ ಆಂದೋಲನ ಯಶಸ್ವಿಯಾಗಲು ಜಿಲ್ಲೆಯ ಜನತೆ ಸಹಕರಿಸುವಂತೆ ಸಿಇಓ ತಿಳಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News