ಮಂಗನಕಾಯಿಲೆ: ಕಾರ್ಕಳದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ
ಉಡುಪಿ, ಜ.17: ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ಇದುವರೆಗೆ ವಿವಿದೆಡೆ ಗಳಲ್ಲಿ ಒಟ್ಟು ಏಳು ಮಂಗಗಳು ಸತ್ತಿದ್ದು, ಇವುಗಳಲ್ಲಿ ಮೂರು ಮಂಗಗಳ ಅಂಗಾಂಗಗಳನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಇವುಗಳಲ್ಲಿ ಒಂದು ಮಂಗನ (ಹಿರ್ಗಾನ) ದೇಹದಲ್ಲಿ ಮಂಗನಕಾಯಿಲೆಯ ವೈರಸ್ ಪತ್ತೆಯಾಗಿದ್ದು, ಇನ್ನೊಂದರಲ್ಲಿ ವೈರಸ್ ಪತ್ತೆಯಾಗಿಲ್ಲ. ಮತ್ತೊಂದರ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಮಂಗನ ಕಾಯಿಲೆ ನಿಯಂತ್ರಣದ ಕುರಿತು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಇಂದು ಕಾರ್ಕಳ ತಾಲೂಕು ತಹಶೀಲ್ದಾರ್ರ ಅಧ್ಯಕ್ಷತೆಯಲ್ಲಿ ಕಾರ್ಕಳದಲ್ಲಿ ಕರೆಯಲಾದ ಅಂತರ್ ಇಲಾಖಾ ಸಮನ್ವಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಸಭೆಯಲ್ಲಿ ಕಾರ್ಕಳ ತಾಪಂನ ಕಾರ್ಯನಿರ್ವಹಣಾ ಧಿಕಾರಿ, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು, ಕಾರ್ಕಳ ವಲಯ ಸಾಮಾಜಿಕ ಅರಣ್ಯ ಹಾಗೂ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈಗಾಗಲೇ ಈ ತಿಂಗಳ ಎರಡನೇ ವಾರದಲ್ಲಿ ಕರೆಯಲಾದ ತಾಲೂಕು ಅಂತರ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಂಗನಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಅವರು ತಾಲೂಕಿನ ವೈದ್ಯಾಧಿಕಾರಿಗಳಿಗೆ, ಅರಣ್ಯ ಇಲಾಖೆ, ಪಶುವೈದ್ಯ ಇಲಾಖೆಯ ಅಧಿಕಾರಿ ಗಳಿಗೆ ಮಂಗನ ಕಾಯಿಲೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದರು.
ಸತ್ತ ಮಂಗಗಳನ್ನು ಶವ ಪರೀಕ್ಷೆಯ ಬಳಿಕ ಅರಣ್ಯ ಇಲಾಖೆಯ ಸಹಕಾರ ದಿಂದ ಸುಟ್ಟು ಹಾಕಲಾಗುತ್ತಿದೆ. ಮಂಗಗಳು ಸತ್ತ 50ಮೀ. ವ್ಯಾಪ್ತಿಯಲ್ಲಿ ಸಿಂಪರ್ಮಿಂಥ್ರಿನ್ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ. ತಾಲೂಕಿನಾದ್ಯಂತ ಜ್ವರದ ಸಮೀಕ್ಷೆ ನಡೆಯುತಿದ್ದು, ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ಈವರೆಗೆ ವರದಿಯಾಗಿಲ್ಲ. ಸಂಶಯವಿರುವವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಬೇಕಾದ ತಯಾರಿ ಮಾಡಿಕೊಳ್ಳಲಾಗಿದೆ.
ತಾಲೂಕಿಗೆ ಒಟ್ಟು 240 ಡಿಎಂಪಿ ತೈಲದ ದ್ರಾವಣ ಸರಬರಾಜಾಗಿದ್ದು, ಅದನ್ನು ಅರಣ್ಯ ಪ್ರದೇಶದಲ್ಲಿರುವವರಿಗೆ ಹಾಗೂ ಗ್ರಾಮಸ್ಥರಿಗೆ (34), ಅರಣ್ಯ ಇಲಾಖೆಗೆ(40), ಆರೋಗ್ಯ ಕೇಂದ್ರಗಳಿಗೆ (146), ಪಶು ಸಂಗೋಪನಾ ಇಲಾಖೆಗೆ (20) ವಿತರಿಸಲಾಗಿದೆ ಎಂದು ವಿವರಿಸಿದರು.
ತಾಲೂಕಿನ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಿಗೆ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿರುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ರೋಗದ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸಲಾಗಿದೆ. ಎಲ್ಲಾ ಗ್ರಾಮ ಮಟ್ಟದಲ್ಲಿ, ಸಂಘಸಂಸ್ಥೆ, ಅಂಗನವಾಡಿ, ಶಾಲೆಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಗುರುವಾರ ತಾಲೂಕು ಕಚೇರಿಯಲ್ಲಿ ಕೊರಗ ಜನಾಂಗದವರಿಗೂ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ತಿಳುವಳಿಕೆ ನೀಡಲಾಗಿದೆ. ಯಾರೂ ಸಹ ಕಾಡು ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳದಂತೆ ಸೂಚಿಸಲಾಗುತ್ತಿದೆ. ಕರಪತ್ರಗಳ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ವಿಶೇಷ ಗ್ರಾಮಸಭೆಗಳು
ಕಾರ್ಕಳ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶುಕ್ರವಾರ ಮಂಗನ ಕಾಯಿಲೆ ಕುರಿತು ವಿಶೇಷ ಗ್ರಾಮಸಭೆಯನ್ನು ಕರೆಯುವಂತೆ ಕಾರ್ಕಳ ತಾಲೂಕು ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ತಾಲೂಕಿನ ಹಿರ್ಗಾನ, ಹೆಬ್ರಿ, ಪುರಸಭೆ, ಮಾಳ, ಕುಕ್ಕುಂದೂರು(2), ಈದು ಗಳಲ್ಲಿ ಸತ್ತ ಮಂಗಗಳು ಪತ್ತೆಯಾಗಿವೆ. ಇವುಗಳಲ್ಲಿ ಹಿರ್ಗಾನದಲ್ಲಿ ಸತ್ತ ಮಂಗನಲ್ಲಿ ಕೆಎಫ್ಡಿ ವೈರಸ್ ಪತ್ತೆಯಾಗಿದೆ.
ಮಣಿಪಾಲದಲ್ಲಿ 27 ಮಂದಿಗೆ ಚಿಕಿತ್ಸೆ
ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಆಸುಪಾಸಿನ 92 ಮಂದಿ ಶಂಕಿತ ಮಂಗನ ಕಾಯಿಲೆ ರೋಗದ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 31 ಮಂದಿ ಮಂಗನ ಕಾಯಿಲೆಗೆ ತುತ್ತಾಗಿರು ವುದು ಪರೀಕ್ಷೆಗಳಿಂದ ಖಚಿತವಾಗಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ 51 ಮಂದಿಗೆ ಫಲಿತಾಂಶ ನೆಗೆಟೀವ್ ಆಗಿ ಬಂದಿದೆ. ಉಳಿದ 10 ಮಂದಿಯ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಕೆಎಂಸಿಯಲ್ಲಿ ಈವರೆಗೆ ಒಟ್ಟು 65 ಮಂದಿ ಚಿಕಿತ್ಸೆ ಪಡೆದು ಗುಣಮುಖ ರಾಗಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 27 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಅಲೆವೂರಿನಲ್ಲಿ ಸತ್ತ ಮಂಗ ಪತ್ತೆ
ಉಡುಪಿ ಸಮೀಪದ ಅಲೆವೂರಿನ ಕೊರಂಗ್ರಪಾಡಿಯಲ್ಲಿ ಮಂಗವೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಬುಧವಾರ ರಾತ್ರಿ ಸತ್ತ ಮಂಗ ಕಂಡು ಬಂದಿದ್ದು ಗುರುವಾರ ಬೆಳಗ್ಗೆ ಶವಪರೀಕ್ಷೆ ನಡೆಸಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಅಲ್ಲದೇ ಇಂದು ಕಾರ್ಕಳದ ಮಾಳದಲ್ಲೂ ಸತ್ತ ಮಂಗ ಪತ್ತೆಯಾಗಿದೆ.
ಜಿಲ್ಲೆಯ ವಿವಿದೆಡೆಯಲ್ಲಿ ಜ. 8ರಿಂದ ಇಲ್ಲಿವರೆಗೆ ಒಟ್ಟು 28 ಮಂಗಗಳ ಮೃತದೇಹ ಸಿಕ್ಕಿದ್ದು, 21 ಮಂಗಗಳ ಶವ ಪರೀಕ್ಷೆ ನಡೆಸಿ ಶಿವಮೊಗ್ಗಕ್ಕೆ ಕಳುಹಿಸ ಲಾಗಿದೆ. ಈ ಪೈಕಿ 8 ಮಂಗಗಳಲ್ಲಿ ಕೆಎ್ಡಿ ವೈರಸ್ ಪತ್ತೆಯಾಗಿವೆ. ಆದರೆ ಮನುಷ್ಯರಲ್ಲಿ ವೈರಸ್ ಕಾಣಿಸಿಕೊಂಡ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.