ನಿಗಮಗಳಲ್ಲಿ ಗುರಿ, ಸಾಧನೆ ಹೆಚ್ಚಿಸಿ: ಮೀನಾಕ್ಷಿ ಶಾಂತಿಗೋಡು

Update: 2019-01-17 18:09 GMT

ಮಂಗಳೂರು, ಜ.17:ವಿವಿಧ ನಿಗಮಗಳಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ನೀಡುವ ಸಹಾಯಧನ ಹಾಗೂ ನೆರವಿನ ಗುರಿ ಹಾಗೂ ಸಾಧನೆಯನ್ನು ಹೆಚ್ಚಿಸಿ ಎಂದು ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದ್ದಾರೆ.

ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಗಮದಿಂದ ದೊರಕುವ ಕಿರುಸಾಲ ಯೋಜನೆಗೆ (ಪ್ರೇರಣಾ) ಜಿಲ್ಲೆಯಲ್ಲಿ ಸ್ವಸಹಾಯ ಸಂಸ್ಥೆಗಳಿಂದ ಸಾಕಷ್ಟು ಬೇಡಿಕೆ ಇದ್ದರೂ ಕೂಡ ಮಾಹಿತಿ ಹಾಗೂ ಹೆಚ್ಚಿನ ಗುರಿ ನಿಗದಿಯ ಅಗತ್ಯವಿದೆ ಮೀನಾಕ್ಷಿ ಶಾಂತಿಗೋಡು ಎಂದು ಅಭಿಪ್ರಾಯಪಟ್ಟರು.

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ 63 ಗುರಿ ಇದೆ. ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆಗೆ 173 ಗುರಿಯನ್ನು ಕೇಂದ್ರ ಕಚೇರಿಯಿಂದ ನಿಗದಿಪಡಿಸಲಾಗಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅನಿತಾ ಮಡ್ಲೂರ್ ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ಉದ್ಯಮಶೀಲತೆಗಾಗಿ ಸಮೃದ್ಧಿ ಯೋಜನೆಯನ್ನು ಆರಂಭಿಸಲಾಗಿದ್ದು, ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದೆ. ಈ ಯೋಜನೆಯಡಿ ಪ್ರತಿಷ್ಠಿತ ಕಂಪೆನಿಗಳ ರೀಟೈಲ್ ಮಳಿಗೆ ತೆರೆಯಲು ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲಾಗುವುದು. ಇದರಡಿ ನಿಗಮದಿಂದ 10 ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುವುದು. ಐರಾವತ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗಿದ್ದು, ಈ ಯೋಜನೆಯಡಿ ಟ್ಯಾಕ್ಷಿ ಖರೀದಿಗೆ 5 ಲಕ್ಷ ರೂ.ವರೆಗೆ ಸಹಾಯಧನ ಹಾಗೂ ಓಲಾ, ಉಬರ್, ಮೇರುವಿನಂತಹ ಸಂಸ್ಥೆಗಳ ಮೂಲಕ ಫಲಾನುವಿಭಗಳಿಗೆ ಸಂಪರ್ಕ ಸಾಧಿಸಿ ಉದ್ಯೋಗ ಸೃಷ್ಟ್ಟಿಗೆ ನೆರವು ನೀಡಲಾಗುವುದು ಎಂದು ಅನಿತಾ ಮಡ್ಲೂರ್ ತಿಳಿಸಿದರು.

ಎಲ್ಲ ತಾಲೂಕುಗಳ ಶಾಲೆಗಳಲ್ಲಿ ಕಡ್ಡಾಯವಾಗಿ ಆಟದ ಮೈದಾನ ನಿರ್ಮಾಣ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲಾಗಿದೆ. ನರೇಗಾ ಯೋಜನೆಯಡಿ ಬೆಳ್ತಂಗಡಿಯಲ್ಲಿ 4 ಆಟದ ಮೈದಾನ, 17 ಆವರಣಗೋಡೆ ಸಂಪೂರ್ಣಗೊಂಡಿದೆ. 16 ಆವರಣ ಗೋಡೆ ಪ್ರಗತಿಯಲ್ಲಿರುತ್ತದೆ. ಬಂಟ್ವಾಳ ತಾಲೂಕಿನಲ್ಲಿ 13 ಕಾಮಗಾರಿಗಳು ಪ್ರಗತಿಯಲ್ಲಿದೆ. ಸುಳ್ಯದಲ್ಲಿ 44 ಶಾಲಾ ಆವರಣ ಕಾಮಗಾರಿಗಳಲ್ಲಿ 23 ಸಂಪೂರ್ಣವಾಗಿದೆ. ಆಟದ ಮೈದಾನದಲ್ಲಿ 18 ಕಾಮಗಾರಿ ಆರಂಭವಾಗಿದ್ದು 8 ಸಂಪೂರ್ಣವಾಗಿದೆ. ಪುತ್ತೂರಿನಲ್ಲಿ ಶಾಲಾ ಆವರಣಗೋಡೆಗೆ ಸಂಬಂದಿಸಿದಂತೆ 68 ಕಾಮಗಾರಿಗಳಿಗೆ ಅಂದಾಜುಪಟ್ಟಿ ತಯಾರಿಸಿದ್ದು, 46 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 16 ಪೂರ್ಣಗೊಂಡಿದೆ. 36 ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ರೇಷ್ಮೆ ಗೂಡು ಉತ್ಪಾದನೆಯಲ್ಲಿ 20 ಮಂದಿ ತೊಡಗಿಸಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಹೊಸ 5 ರೇಷ್ಮೆ ಬೆಳೆಗಾರರನ್ನು ಗುರುತಿಸಿ ನೆರವು ನೀಡಲಾಗಿದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ಹೇಳಿದರು. ಚೇಳ್ಯಾರಿನಲ್ಲಿ ಔಷಧಿವನ ನಿರ್ಮಾಣಕ್ಕೆ ಜಾಗವನ್ನು ಪರಿಶೀಲನೆ ನಡೆಸಲು ಉಪಾಧ್ಯಕ್ಷೆ ಕಸ್ತೂರಿ ಪಂಜ ಸಾಮಾಜಿಕ ಅರಣ್ಯ ವಿಭಾಗದ ಉಪಸಂರಕ್ಷಣಾಧಿಕಾರಿಗೆ ಸೂಚಿಸಿದರು.

ಕೆಆರ್‌ಐಡಿಎಲ್‌ನಿಂದ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪಾಧ್ಯಕ್ಷೆ ಕಸ್ತೂರಿ ಪಂಜ, ಪೈಪ್‌ಲೈನ್ ಮತ್ತು ಬೋರ್‌ವೆಲ್ ಇಲ್ಲದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದ್ದು, ನೀರಿನ ಮೂಲಕ್ಕೆ ಏನು ಮಾಡುವಿರಿ ಎಂದು ಪ್ರಶ್ನಿಸಿದರು.

ಈಗಾಗಲೇ ಹೊಸಬೆಟ್ಟು ಗ್ರಾಮದ ಗಾಜಿಗರ ಪಲ್ಕೆ ಕೊರಗ ಕಾಲೊನಿ, ಕಟೀಲಿನ ನರ್ತಿಕಲ್ಲು ಕೊರಗ ಕಾಲನಿ, ಕಿಲ್ಪಾಡಿ ಗ್ರಾಮದ ಕೊರಗ ಕಾಲನಿ, ಕಲ್ಲಮುಂಡ್ಕೂರಿನ ಕುಂಟಾಲ ಪಲ್ಕೆ ಕೊರಗ ಕಾಲನಿ, ಪುತ್ತಿಗೆ ಗ್ರಾಮದ ಕೊರಗ ಕಾಲನಿ, ಮೂಡುಶೆಡ್ಡೆ ಗ್ರಾಮದ ಎದುರುಪದವು ಕೊರಗ ಕಾಲನಿ, ಬೆಳ್ಳಾಯಾರು ಕೆರೆಕಾಡು ಪರಿಶಿಷ್ಟ ಪಂಗಡದ ಕಾಲೊನಿಗಳಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ ಎಂದು ಕೆಆರ್‌ಐಡಿಎಲ್‌ನ ಕಾರ್ಯನಿರ್ವಾಹಕ ಅಭಿಯಂತರರು ಮಾಹಿತಿ ನೀಡಿದರು.

ಬೋರ್‌ವೆಲ್‌ಗೆ ಪಾಯಿಂಟ್ ಗುರುತು ಮಾಡಲಾಗಿದೆ. ಡೆಲಿವರಿ ಲೈನ್‌ಪೈಪ್ ಅಳವಡಿಸಲಾಗಿದ್ದು ಬೋರ್‌ವೆಲ್ ಕೊರೆದ ನಂತರ ಕಾಮಗಾರಿ ಮುಗಿಸಿ ಸಂಬಂಧಿಸಿದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹೀಂ, ಉಪಕಾರ್ಯದರ್ಶಿ ಡಾ.ಕೆ. ಸಂತೋಷ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News