ಬಂಟ್ವಾಳ ತಾಲೂಕಿನಲ್ಲಿ ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿಲ್ಲ, ಆತಂಕ ಬೇಡ: ದೀಪಾಪ್ರಭು

Update: 2019-01-21 15:04 GMT

ಬಂಟ್ವಾಳ, ಜ. 21: ಬಂಟ್ವಾಳ ತಾಲೂಕಿನಲ್ಲಿ ಮಂಗನಕಾಯಿಲೆ ಬಗ್ಗೆ ಇದುವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ರೋಗದ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಬಂಟ್ವಾಳ ತಾಪಂನ ಎಸ್‍ಜಿಎಸ್‍ವೈ ಸಭಾಂಗದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ತಾಲೂಕು ಪಂಚಾಯತ್‍ನ 2018-2019ನೆ ಸಾಲಿನ ತ್ರೈಮಾಸಿಕ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಪಕ್ಕದ ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಶಂಕಿತ ಮಂಗನಕಾಯಿಲೆ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ದೃಢಪಟ್ಟಿಲ್ಲ. ತಾಲೂಕಿನಲ್ಲಿ ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿಲ್ಲ. ಮುಂಜಾಗೃತಾ ಕ್ರಮವಾಗಿ ಆರೋಗ್ಯ, ಅರಣ್ಯ ಹಾಗೂ ಇತರ ಇಲಾಖೆಯ ಸಹಯೋಗದಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅರಣ್ಯ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜಾಗೃತಿ ಕಾರ್ಯ ನಡೆಸಲಾಗುತ್ತಿದ್ದು, ಕರಪತ್ರಗಳನ್ನು ಹಂಚಲಾಗಿದೆ. ಅದಲ್ಲದೆ, ಕಾಡಿನಂಚಿನ ಪ್ರದೇಶಗಳಿಗೆ ಪ್ರವೇಶ ನಿರ್ಬಂದಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಯಿ, ಒಡಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಯನ್ನು ನೇಮಕ ಮಾಡಲಾಗಿದೆಯೇ? ಎಂದು ಜಿಪಂ ಎಂ.ಎಸ್. ಮುಹಮ್ಮದ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೀಪಾಪ್ರಭು, ಜ. 23ರಂದು ಜಿಲ್ಲೆಯ ವಿವಿಧೆಡೆಗೆ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಖಾಲಿ ಹುದ್ದೆಯನ್ನು ಭರ್ತಿ ಮಾಡಲಾಗುವುದು ಎಂದ ಅವರು, ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಈ ಬಾರಿ 30,960 ಗುರಿಯನ್ನು ಹೊಂದಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಮಕ್ಕಳಿಗೆ ಸಮವಸ್ತ್ರ ವಿತರಣೆಯಾಗಿಲ್ಲ:

ಶೈಕ್ಷಣಿಕ ಅವಧಿ ಮುಗಿಯುತ್ತಾ ಬಂದರೂ ಜಿಲ್ಲೆಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 2ನೆ ಸೆಟ್ ಸಮವಸ್ತ್ರವನ್ನು ವಿತರಣೆ ಮಾಡಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಬಡ ಮಕ್ಕಳಿಗೆ ಶೀಘ್ರ ವಿತರಣೆ ಮಾಡುವಂತೆ ಕ್ರಮ ಕೈಗೊಳ್ಳುವಂತೆ ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಸಭೆಯನ್ನು ಒತ್ತಾಯಿಸಿದರು. 

ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ಸರಕಾರ ಹಾಗೂ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿದೆ. ಕೆಲವೊಂದು ತಾಂತ್ರಿಕ ದೋಷದಿಂದ ಸಮವಸ್ತ್ರ ಸಿಗುವಲ್ಲಿ ತಡವಾಗಿದೆ. ಮತ್ತೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ಶೀಘ್ರ ವಿತರಣೆಗೆ ಕೋರಲಾಗುವುದು ಎಂದರು.

ತಾಲೂಕಿನಲ್ಲಿ ವೃದ್ಧಾಪ್ಯ, ಅಂಗವಿಕಲ ವೇತನವನ್ನು ತಡೆಹಿಡಿಯಲಾಗಿದೆ. ಸಾವಿರಾರು ಫಲಾನುಭವಿಗಳಿಗೆ ವೇತನ ವಿತರಣೆಯಾಗಿಲ್ಲ ಎಂದು ಜಿಪಂ ಸದಸ್ಯ ತುಂಗಪ್ಪ ಬಂಗೇರ ಸಭೆಯ ಗಮನ ಸೆಳೆದರು. ಇದಕ್ಕೆ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪ್ರತಿಕ್ರಿಯಿಸಿ, ಈ ಬಗ್ಗೆ ಫಲಾನುಭವಿಗಳು ಶಾಸಕರಲ್ಲಿಯೂ ದೂರಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಇಒ ರಾಜಣ್ಣ ಸಭೆಗೆ ತಿಳಿಸಿದಾಗ, ಇದಕ್ಕೆ ಎಂ.ಎಸ್ ಮುಹಮ್ಮದ್ ಧ್ವನಿಗೂಡಿಸಿದರು. 

ಮಂಜೂರಾತಿ ನೀಡಿದ ಫಲಾನುಭವಿಗಳಿಗೆ ವೇತನವನ್ನು ವಿತರಣೆ ಮಾಡಲಾಗಿದೆ ಖಜಾನ ಇಲಾಖೆಯು ಸಭೆಗೆ ತಿಳಿಸಿದಾಗ, ಈ ಪೈಕಿ ಶೇ. 75ರಷ್ಟು ವೃದ್ಧಾಪ್ಯ ವೇತನ, ಶೇ. 50ರಷ್ಟು ವಿಧವಾ ವೇತನ ವಿತರಣೆಯಾಗಿಲ್ಲ ಎಂಬುವುದು ಅಂಕಿ ಅಂಶ ಸಹಿತ ಸಭೆ ಮುಂದಿಟ್ಟ ಶಾಸಕರು, ಈ ಬಗ್ಗೆ ಖಜಾನೆ ಹಾಗೂ ಕಂದಾಯ ಅಧಿಕಾರಿಗಳು ತುರ್ತು ಸಭೆ ನಡೆಸಿ, ಶೀಘ್ರ ವಿತರಣೆಗೆ  ಕ್ರಮಗೊಳ್ಳುವಂತೆ ಶಾಸಕರು ತಾಕೀತು ಮಾಡಿದರು.

ಕನ್ಯಾನ, ಒಡಿಯೂರು ಗೋಶಾಲೆಗಳಿಗೆ ಈಗಾಗಲೇ ಸಿಸಿ ಕ್ಯಾಮರವನ್ನು ಅಳವಡಿಸಲಾಗಿದೆ. ಬಿಜಗುರಿ ಗೋವನಿತಾಶ್ರಯದಲ್ಲಿ ಶೀಘ್ರದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗುವುದು. ಅದಲ್ಲದೇ, ಅಮೃತಧಾರ ಮುಳಿಯ ಗೋಶಾಲೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ, ವಿದ್ಯುತ್ ಸಂಪರ್ಕ ಪಡೆದ ಬಳಿಕ ಸಿಸಿ ಕ್ಯಾಮರ ಅಳವಡಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಸಭೆಗೆ ಮಾಹಿತಿ ನೀಡಿತು.

ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ಕೇಳಿದ ಶಾಸಕರು, ಜಮೀನಿನ ಸರ್ವೇ ಕಾರ್ಯ ಪೂರ್ಣಗೊಂಡಿದೆ, ಮೈದಾನ ನಿರ್ಮಾಣಕ್ಕಾಗಿ ಅನುದಾನ ಇನ್ನು ಬಂದಿಲ್ಲ ಎಂದು ಕ್ರೀಡಾಧಿಕಾರಿ ಸಭೆಗೆ ತಿಳಿಸಿದಾಗ, ಸೂಚಿಸಲಾಗಿರುವ ಜಮೀನಿನ ಸರ್ವೇ ಕಾರ್ಯ ನಡೆಸಿ, ಈ ಜಾಗ ಸೂಕ್ತವಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ತಿಳಿಸಿ, ಸರಕಾರದ ಹಣವನ್ನು ದುರುಪಯೋಗ ಮಾಡವುದು ಸರಿಯಲ್ಲ. ಅದನ್ನು ನಾನು ಬಿಡುವುದಿಲ್ಲ ಎಂದರು.

ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ 7 ಸಾವಿರ ಹೆಕ್ಟೇರ್ ಬರಡು ಬಿದ್ದಿರುವ ಜಮೀನಿನ ಸರ್ವೇ ಕಾರ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಡೆಸಿ, ಸರಕಾರದ ಮತ್ತು ಸಂಘಸಂಸ್ಥೆಗಳ ನೆರವಿನಿಂದ ಪುನಶ್ಚೇತನ ಕಾರ್ಯಕ್ಕೆ ಕ್ರಮವಹಿಸಬೇಕು. ತಾಲೂಕಿನಲ್ಲಿ ಬರಡು ಭೂಮಿಯಲ್ಲಿ ಫಲವತ್ತಾದ ಕೃಷಿ ಮಾಡಿ ಇತರ ತಾಲೂಕಿಗೆ ಮಾದರಿಯಾಗಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು.

ಸಭೆಗೆ ಸ್ಥಳಿಯ ಜನಪ್ರತಿನಿಧಿಗಳ ಗೈರು, ಕಿಂಡಿ ಅಣೆಕಟ್ಟುಗಳ ಅವ್ಯವಸ್ಥೆ, ಪೋಡಿ ಮುಕ್ತ ಗ್ರಾಮದ ಬಗ್ಗೆ ಚರ್ಚೆ ನಡೆಯಿತು.  
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News