ದುಡಿಯುವ ವರ್ಗದ ಮೇಲೆ ನಿರಂತರ ದಾಳಿ : ಎಚ್.ಎಸ್. ಸುನಂದಾ

Update: 2019-01-21 16:07 GMT

ಭಟ್ಕಳ, ಜ. 21: ದುಡಿಯುವ ವರ್ಗದ ಮೇಲೆ ಆಳುವ ಸರಕಾರಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದು, ಇದರ ವಿರುದ್ಧ ಹೋರಾಟ ಅತ್ಯಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಭಟ್ಕಳ ಕಮಲಾವತಿ ರಾಮನಾಥ ಸಭಾಗೃಹದಲ್ಲಿ ಆಯೋಜಿಸಲಾದ ಉತ್ತರಕನ್ನಡ ಜಿಲ್ಲಾ 8ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಐಸಿಡಿಎಸ್ ವ್ಯವಸ್ಥೆ ಶೋಚನೀಯ ಸ್ಥಿತಿಯನ್ನು ತಲುಪಿದೆ. ಶಿಶು ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಕಳೆದ 43 ವರ್ಷಗಳಿಂದ ಜಾರಿಯಲ್ಲಿರುವ ಅಂಗನವಾಡಿಗಳನ್ನು ಕೇಂದ್ರ ಸರಕಾರ ಖಾಸಗೀಕರಣ ಮಾಡಲು ಮುಂದಾಗಿದೆ. ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿಕೊಂಡಿರುವ ರು.15000 ಕನಿಷ್ಠ ಕೂಲಿ ಇನ್ನೂ ಭರವಸೆಯಾಗಿಯೇ ಉಳಿದುಕೊಂಡಿದೆ. 2 ಕೋಟಿ ಉದ್ಯೋಗ ಸೃಷ್ಟಿ, ವಿದೇಶದಿಂದ ಕಪ್ಪು ಹಣ ತರುವ ಮಾತುಗಳೆಲ್ಲವೂ ಸುಳ್ಳಾಗಿದೆ. ಒಂದು ಕಡೆ ಆಹಾರ ಧಾನ್ಯಗಳ ಬೆಲೆ ತೀವೃ ಗತಿಯಲ್ಲಿ ಏರುತ್ತಿದ್ದು, ಗುತ್ತಿಗೆ ಪದ್ಧತಿ ಅಂಗನವಾಡಿಗಳನ್ನು ಆವರಿಸಿಕೊಂಡಿದೆ. ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿರುವ ಕೇಂದ್ರ ಸರಕಾರ ಅಂಗನವಾಡಿಗಳಿಗೆ ನೀಡುತ್ತಿರುವ ಅನುದಾನವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಅಕ್ಷರ ದಾಸೋಹ ಯೋಜನೆಯನ್ನೂ ಕೇಂದ್ರ ನಿರ್ಲಕ್ಷಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಘೋರ ಪ್ರಮಾದವಾಗಿದೆ.  ಹಸಿವಿನ ಸೂಚ್ಯಂಕ ಏರುತ್ತಿದ್ದರೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಫಲಾನುಭವಿಗಳ ಖಾತೆಗೆ ನಗದನ್ನು ನೇರವಾಗಿ ತಲುಪಿಸುವ ಮಾತನ್ನು ಆಡುತ್ತ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮೊರೆ ಹೋಗಿದ್ದಾರೆ. ಪರೋಕ್ಷ ತೆರಿಗೆ ಪದ್ಧತಿಯಿಂದ ಜನ ಸಾಮಾನ್ಯರು ಹೈರಾಣಾಗುತ್ತಿದ್ದರೆ, ಕಾರ್ಪೋರೇಟ್ ಕಂಪನಿಗಳ ರು.275000 ಕೋ. ತೆರಿಗೆ ಮನ್ನಾಮಾಡಿ ಸರಕಾರದ ಒಲವು ನಿಲುವುಗಳನ್ನು ಬಹಿರಂಗಗೊಳಿಸಲಾಗಿದೆ. ರಾಜ್ಯ ಸರಕಾರವೂ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸುವ ಪ್ರಯತ್ನ ನಡೆಸುತ್ತಿದ್ದು, ಅಂಗನವಾಡಿ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಸುಪ್ರೀಮ್ ಕೋರ್ಟ ಹೇಳಿರುವ ಸಮಾನ ಕೆಲಸಕ್ಕೆ ಸಮಾನ ಕೂಲಿ ಜಾರಿಯಾಗದ ಕುರಿತು ಅಂಗನವಾಡಿ ಕಾರ್ಯಕರ್ತ ರೆಲ್ಲರೂ ಹೋರಾಟಕ್ಕಿಳಿಯುವ ಅನಿವಾರ್ಯತೆ ಬಂದಿದೆ ಎಂದರು. ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಯಮುನಾ ಗಾಂವಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ತಿಲಕ ಗೌಡ, ಪ್ರಧಾನ ಕಾರ್ಯದರ್ಶಿ ಸಿ.ಆರ್.ಶ್ಯಾನಭಾಗ, ಉತ್ತರಕನ್ನಡ ಪ್ರಾಂತ ರೈತ ಸಂಘದ ಅಧ್ಯಕ್ಷ ಶಾಂತಾರಾಮ ನಾಯಕ್, ಗಂಗಾ ನಾಯ್ಕ, ಗೀತಾ ನಾಯ್ಕ, ರತ್ನ ದೀಪಾ, ಕವಿತಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಾವತಿ ನಾಯ್ಕ ಸ್ವಾಗತಿಸಿದರು. ಇದಕ್ಕೂ ಪೂರ್ವದಲ್ಲಿ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಸಮ್ಮೇಳನದ ಮೆರವಣಿಗೆ ನಡೆಸಿದರು. ಸವಿತಾ ತನ್ಮಡಗಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News