ಉಡುಪಿ ನಗರಸಭೆ ಸದಸ್ಯನ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ ಬರಹ: ಆರೋಪಿ ಬಂಧನ

Update: 2019-01-21 17:08 GMT
ಮಧು ಮೋಹನ್ ರಾಜ್

ಉಡುಪಿ, ಜ.21: ನಕಲಿ ಫೇಸ್‌ಬುಕ್ ಖಾತೆಯ ಮೂಲಕ ಉಡುಪಿ ನಗರಸಭೆ ಬಿಜೆಪಿ ಸದಸ್ಯ ಗಿರೀಶ್ ಅಂಚನ್ ವಿರುದ್ಧ ಅಶ್ಲೀಲ ನಿಂದನಾತ್ಮಕ ಮತ್ತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುತ್ತಿದ್ದ ಆರೋಪಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೂಲತಃ ಕಾಸರಗೋಡು ಜಿಲ್ಲೆಯ ಕುತ್ತಿಕೋಲ್ ಹಾಗೂ ಪ್ರಸ್ತುತ ಉಡುಪಿ ಅಂಜಾರು ಗ್ರಾಮದ ಮೂಡು ಅಂಜಾರು ಸರಕಾರಿ ಶಾಲೆ ಬಳಿಯ ನಿವಾಸಿ ಮಧು ಮೋಹನ್ ರಾಜ್(37) ಎಂದು ಗುರುತಿಸಲಾಗಿದೆ.

ಈತ ಜ.16ರಂದು ಗಿರೀಶ್ ಅಂಚನ್ ಅವರ ಫೋಟೋ ಬಳಸಿ, ಅಶ್ಲೀಲ ನಿಂದನಾತ್ಮಕ ಮತ್ತು ಅವಹೇಳನಕಾರಿ ಬರಹಗಳನ್ನು ಫೇಸ್‌ಬುಕ್‌ನಲ್ಲಿ ಸ್ನೇಹ ಸುರೇಶ್ ಎಂಬ ನಕಲಿ ಖಾತೆ ಸೃಷ್ಟಿಸಿ ಪ್ರಸಾರ ಮಾಡುತ್ತಿದ್ದ ಬಗ್ಗೆ ಗಿರೀಶ್ ಅಂಚನ್ ನೀಡಿದ ದೂರಿನಂತೆ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಜ.17ರಂದು ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮಧು ಮೋಹನ್‌ರಾಜ್ ನನ್ನು ಜ.19ರಂದು ಬೆಳಗ್ಗೆ ಆತನ ಮನೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಫೆ. 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News