ಐಐಟಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇ.98 .62 ಅಂಕ ಗಳಿಸಿದ ರೈತನ ಪುತ್ರ
ಬೀದರ್,ಜ.22: ಇಲ್ಲಿನ ಬಡರೈತನ ಪುತ್ರ ಐಐಟಿ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇ.98.62 ಅಂಕಗಳನ್ನು ಪಡೆಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಹಲಸಿ ತುಗಾವೊ ಗ್ರಾಮದ ನಿವಾಸಿ ರತ್ನದೀಪ ಸೂರ್ಯಕಾಂತ ತುಳಜಾಪುರೆ ಈ ಸಾಧನೆ ಮಾಡಿದ ವಿದ್ಯಾರ್ಥಿ.
ಬಾಲ್ಕಿ ಹಿರೇಮಠ ಶಿಕ್ಷಣ ಟ್ರಸ್ಟ್ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ರತ್ನದೀಪ ಕರದ್ಯಾಲ್ನ ಡಾ. ಚನ್ನಬಸವೇಶ್ವರ ಗುರುಕುಲ ವಸತಿ ಪಿಯು ಕಾಲೇಜಿಗೆ ಉಚಿತ ದಾಖಲಾತಿ ಪಡೆದಿದ್ದರು.
ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಬಯಸಿರುವ ರತ್ನದೀಪ ಬಡವರಿಗೆ ನೆರವಾಗುವ ಯಂತ್ರಗಳ ಅನ್ವೇಷಕರಾಗುವ ಕನಸನ್ನು ಹೊಂದಿದ್ದಾರೆ. “ನನ್ನ ತಂದೆಯ ಬಳಿ ಜಮೀನಿಲ್ಲ. ಅವರು ಇತರರ ಜಮೀನಿನಲ್ಲಿ ದುಡಿಯುತ್ತಾರೆ. ಆದರೆ ಅವರ ಮೂರು ಮಕ್ಕಳಿಗೆ ಶಿಕ್ಷಣ ನೀಡಲು ಅವರು ಶ್ರಮಿಸುತ್ತಿದ್ದಾರೆ. ನನಗೆ ಜವಾಬ್ದಾರಿಯ ಬಗ್ಗೆ ತಿಳಿದಿದೆ ಮತ್ತು ಪದವಿ ಪರೀಕ್ಷೆಯಲ್ಲಿ ನಾನು ಇನ್ನಷ್ಟು ಹೆಚ್ಚು ಶ್ರಮಪಡಲಿದ್ದೇನೆ” ಎಂದು ರತ್ನದೀಪ ತಿಳಿಸಿದ್ದಾರೆ. ಗುರುಕುಲದ ಇತರ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸಿದ್ದಲಿಂಗ ಅಶೋಕ್ ಕುಮಾರ್ ಬರ್ಮ ಶೇ.97.09 ಅಂಕ ಪಡೆದಿದ್ದರೆ ರಕ್ಷಿತ್ ದಿನಕರ ರಾವ್ ಶೇ.96.57, ರುತಿಕೇಶ್ ಅಶೋಕ್ ಶೇ.96.43, ಶಿವಾನಂದ ರೇವಪ್ಪ ಶೇ.96.28 ಅಂಕಗಳನ್ನು ಪಡೆದಿದ್ದಾರೆ, 124 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮುಂದಿನ ಸುತ್ತಿಗೆ ಅರ್ಹತೆಯನ್ನು ಪಡೆದಿದ್ದಾರೆ.