ಬೊಂಡಾಲ: ಮಾನಸಿಕ ಆರೋಗ್ಯ ಮಾಹಿತಿ ಶಿಬಿರ-ಪ್ರಬಂಧ ಸ್ಪರ್ಧೆ
ಬಂಟ್ವಾಳ, ಜ. 22: ವ್ಯಕ್ತಿಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅತ್ಯಂತ ಪ್ರಮುಖವಾಗಿದೆ. ಧನಾತ್ಮಕ ಚಿಂತನೆಯಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ಯು.ಕೆ. ಅಭಿಪ್ರಾಯಪಟ್ಟಿದ್ದಾರೆ.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ಜೇಸಿಐ ಜೋಡುಮಾರ್ಗ ನೇತ್ರಾವತಿ ಹಾಗು ಶಾಲಾ ಆರೋಗ್ಯ ಕೂಟದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಮಾನಸಿಕ ಆರೋಗ್ಯ ಮಾಹಿತಿ ಶಿಬಿರದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಮಾತನಾಡುತ್ತಿದ್ದರು.
ಶಾಲಾ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಸ್ಡಿಎಂಸಿ ಸದಸ್ಯ ಪ್ರತಿಭಾ ಸುಬ್ರಹ್ಮಣ್ಯ ಭಟ್, ಕಿರಿಯ ಆರೋಗ್ಯ ಸಹಾಯಕ ವೀರೇಶ್, ಶಿಕ್ಷಕ ಹರಿಪ್ರಸಾದ್ ಕುಲಾಲ್ ಉಪಸ್ಥಿತರಿದ್ದರು.
ಆರೋಗ್ಯ ಕೂಟದ ಉಪಾಧ್ಯಕ್ಷ ಚಿನ್ನಪ್ಪ ಜಾಲ್ಸೂರು ಸ್ವಾಗತಿಸಿ, ಅಧ್ಯಕ್ಷೆ ಭಾರತಿ ಹರೀಶ್ ವಂದಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರತಿಕ್ಷಾ ಪ್ರಥಮ, ಜಯಗೋವಿಂದ ದ್ವಿತೀಯ, ದೀಕ್ಷಿತಾ ತೃತೀಯ ಬಹುಮಾನ ಗಳಿಸಿದರು.