ಹೆಣ್ಣು ಮಗುವಿಗೂ ಸಮಾನ ವಿದ್ಯಾಭ್ಯಾಸ ಸಿಗಲಿ: ಶೀಲಾ ಕೆ. ಶೆಟ್ಟಿ
ಉಡುಪಿ, ಜ.24: ಸ್ವಾತಂತ್ರ ಬಂದ ನಂತರ ಎಲ್ಲ ಹೆಣ್ಣು ಮಗುವಿಗೂ ಸಮಾನ ವಿದ್ಯಾಭ್ಯಾಸ ದೊರೆಯಬೇಕೆಂದು ಸರಕಾರಗಳು ಹಲವು ಯೋಜನೆ ಗಳ ಮೂಲಕ ಸಾಕಷ್ಟು ಶ್ರಮ ವಹಿಸಿವೆ ಎಂದು ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.
ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಉಡುಪಿ ಸೈಂಟ್ ಸಿಸಿಲೀಸ್ ಶಾಲಾ ಸಭಾಂಗಣ ದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಹಿಂದಿನಿಂದಲೂ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿದ್ದು, ಅದು ಇಂದಿಗೂ ಸಂಪೂರ್ಣವಾಗಿ ಕೊನೆಯಾಗಿಲ್ಲ. ಇದೆಲ್ಲದರ ನಡುವೆಯೂ ಹೆಣ್ಣು ಇಂದು ಸಾಧನೆಯ ಹಾದಿಯಲ್ಲಿ ಮುಂದಿದ್ದಾಳೆ. ಅದೆಲ್ಲವೂ ಸಾಧ್ಯವಾಗುವುದು ಶಿಕ್ಷಣದ ಮೂಲಕ. ಎಲ್ಲಾ ಹೆಣ್ಣು ಮಕ್ಕಳಿಗೂ ಶಿಕ್ಷಣ ದೊರೆಯುವಂತಾಗಬೇಕು. ಬಾಲ್ಯವಿವಾಹದ ಬಗ್ಗೆ ಮಾತ್ರವಲ್ಲದೆ ಬಾಲ್ಯವಿವಾಹ ನಿಷೇಧದ ಕುರಿತು ಇರುವ ಕಾನೂನಿನ ಅರಿವು ಮೂಡಿಸುವುದು ಮುಖ್ಯ ಕರ್ತವ್ಯ ಎಂದು ಶೀಲಾ ಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ಎನ್. ತೊರವಿ ಪ್ರಾಸ್ತಾವಿಕ ಬಾಷಣ ಮಾಡಿದರು. ಸಂದಿಗ್ಧ ಚಲನಚಿತ್ರದ ನಿರ್ದೇಶಕ ಸುಚೇಂದ್ರ ಪ್ರಸಾದ್, ನಟ ಮಹೇಶ್ ದೇವ್ರ, ಚಿತ್ರದ ಬಾಲನಟರಾದ ಸಂಜನಾ, ಕಿರಣ್, ನಿಶಾಂತ್, ಚಿತ್ರದ ತಾಂತ್ರಿಕ ಸಹ ನಿರ್ದೇಶಕ ಗಿರೀಶ್, ಸಹ ನಿರ್ದೇಶಕ ನಾಗೇಶ್ ಇವರನ್ನು ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ, ಶಿಶು ಅಭಿವೃಧ್ದಿ ಯೋಜನಾಧಿಕಾರಿ ಶೋಭಾ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್, ಸೈಂಟ್ ಸಿಸಿಲೀಸ್ನ ಮೇಝಿ ಉಪಸ್ಥಿತರಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.