ಅಕ್ರಮ ಮರದ ದಿಮ್ಮಿ ಸಾಗಾಟ ಆರೋಪ: ಲಾರಿ ಸಹಿತ ಸೊತ್ತು ವಶ
ಬಂಟ್ವಾಳ, ಜ. 26: ಲಾರಿಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬಂಟ್ವಾಳ ಅರಣ್ಯ ಇಲಾಖೆಯು ದಾಳಿ ನಡೆಸಿ ಲಾರಿಯನ್ನು ವಶಪಡಿಸಿಕೊಂಡ ಘಟನೆ ಮೆಲ್ಕಾರ್ ನಲ್ಲಿ ನಡೆದಿದೆ.
ಆರೋಪಿ ಲಾರಿ ಚಾಲಕ ದಾಳಿ ವೇಳೆ ಪರಾರಿಯಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸಕಲೇಶಪುರದಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖಾಯು ಮೆಲ್ಕಾರ್ ಬಳಿ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದೆ.
ಕಾರ್ಯಚರಣೆಯಲ್ಲಿ ಬಂಟ್ವಾಳ ವಲಯಾರಣ್ಯಾಧಿಕಾರಿ ಬಿ.ಸುರೇಶ್, ಉಪವಲಯಾರಣ್ಯಾಧಿಕಾರಿ ಪ್ರೀತಂ, ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್, ವಿನಯ್, ಲಕ್ಮೀನಾರಾಯಣ, ರವಿಕುಮಾರ್ ರೇಖಾ, ದಯಾನಂದ, ಹಾಗೂ ಸಿಬ್ಬಂದಿ ಪ್ರವೀಣ ಕೆಲಿಂಜ ಮತ್ತು ಜಯರಾಮ ಪಾಲ್ಗೊಂಡಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅವರು ಮುಂದಿನ ಕ್ರಮಕೈಗೊಂಡಿದ್ದಾರೆ.