ಕೆಐಒಸಿಎಲ್‌ನಲ್ಲಿ ಸೋಲಾರ್ ವಿದ್ಯುತ್ ಘಟಕ ಲೋಕಾರ್ಪಣೆ

Update: 2019-01-30 14:05 GMT

ಮಂಗಳೂರು, ಜ.30: ಸರಕಾರಿ ಸ್ವಾಮ್ಯದ ಕರಾವಳಿಯ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆ ಕೆಐಒಸಿಎಲ್‌ನಲ್ಲಿ ಅಳವಡಿಸಲಾದ 1.3 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕದ ಲೋಕಾರ್ಪಣೆ ಹಾಗೂ ಬ್ಲಾಸ್ಟ್ ಫರ್ನೆಸ್ (ಊದು ಕುಲುಮೆ) ಘಟಕದ ಆಧುನೀಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಕೆಐಒಸಿಎಲ್ ಬ್ಲಾಸ್ಟ್ ರ್ನೆಸ್ ಘಟಕದ ಆವರಣದಲ್ಲಿ ಇಂದು ನಡೆಯಿತು.

ಕೇಂದ್ರ ಉಕ್ಕು ಸಚಿವ ಚೌದರಿ ಬೀರೇಂದ್ರ ಸಿಂಗ್ ಸೋಲಾರ್ ಘಟಕ ಉದ್ಘಾಟಿಸಿ, ನೂತನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಅತಿ ಹೆಚ್ಚು ಉಕ್ಕು ಉತ್ಪಾದನೆಯಲ್ಲಿ ಭಾರತಕ್ಕೆ ವಿಶ್ವದಲ್ಲೇ ಎರಡನೇ ಸ್ಥಾನವಿದೆ. ಕೆಐಓಸಿಎಲ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಉಕ್ಕು ಉತ್ಪಾದಿಸುತ್ತಿದ್ದು, ವಿದೇಶಗಳಿಗೂ ರಫ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಲಾಸ್ಟ್ ಫರ್ನೆಸ್ ಘಟಕ ಆಧುನೀಕರಣಗೊಳ್ಳಲಿದ್ದು, ಇನ್ನಷ್ಟು ಹೆಚ್ಚು ಮಂದಿಗೆ ಉದ್ಯೋಗವಕಾಶ ಕಲ್ಪಿಸಲಿದೆ ಎಂದು ಹೇಳಿದರು.

ಪ್ರಸ್ತುತ 1.3 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲಾಗಿದೆ. ಆದರೆ ಕೆಐಓಸಿಎಲ್‌ನಲ್ಲಿ ಸುಮಾರು 30 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗುತ್ತಿದೆ. ಇದಕ್ಕಾಗಿ ಮುಂದೆ ಇನ್ನಷ್ಟು ಸೋಲಾರ್ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಇನ್ನು ಆರು ತಿಂಗಳ ಒಳಗೆ ಇನ್ನೊಂದು ಘಟಕ ಸ್ಥಾಪನೆಯಾಗಲಿದ್ದು, ಆ ಮೂಲಕ ಕೆಐಓಸಿಎಲ್‌ನಲ್ಲಿ 5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸೋಲಾರ್ ಮೂಲಕ ಆಗಲಿದೆ ಎಂದು ಹೇಳಿದರು.

ಇದೇ ಸಂದರ್ಭ ವಿವಿಧ ಯೋಜನೆಗಳಿಗಾಗಿ ಎನ್‌ಐಟಿಕೆ ಸುರತ್ಕಲ್ ಹಾಗೂ ಎಸ್‌ಎಐಎಲ್ ಕಂಪನಿ ಜತೆಯಲ್ಲಿ ಪರಸ್ಪರ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೆಐಓಸಿಎಲ್ ಸಂಸ್ಥೆಗೆ ವಿವಿಧ ರೀತಿಯ ಕಾನೂನು ತೊಡಕುಗಳಿದ್ದವು. ಈಗ ಅವೆಲ್ಲವೂ ಪರಿಹಾರಗೊಂಡು ಪ್ರಗತಿಯ ಹಾದಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಬಳಿಕ ಹಳೆ ಉದ್ಯಮಶೀಲ ಕಂಪನಿಗಳು ಅಭಿವೃದ್ಧಿ ಹೊಂದುತ್ತಿವೆ. ಇದರಲ್ಲಿ ಕೆಐಓಸಿಎಲ್ ಸಂಸ್ಥೆ ಹೆಚ್ಚು ಲಾಭ ಪಡೆದಿದೆ ಎಂದು ಹೇಳಿದರು.

ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಬಿನೋಯ್ ಕುಮಾರ್, ಜಂಟಿ ಕಾರ್ಯದರ್ಶಿ ಟಿ.ಶ್ರೀನಿವಾಸ್, ಮೆಕ್ಕಾನ್ ಕಂಪನಿಯ ಆಡಳಿತ ನಿರ್ದೇಶಕ ಅತುಲ್ ಭಟ್, ಸೇಲ್ ಕಂಪನಿಯ ಚೇರ್‌ಮೆನ್ ಅನಿಲ್ ಕುಮಾರ್ ಚೌದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆಐಓಸಿಎಲ್ ಕಂಪನಿಯ ಆಡಳಿತ ನಿರ್ದೇಶಕ ಸುಬ್ಬಾ ರಾವ್ ಸ್ವಾಗತಿಸಿದರು. ಕೆಐಓಸಿಎಲ್ ಹಣಕಾಸು ವಿಭಾಗದ ನಿರ್ದೇಶಕ ಎಸ್.ಕೆ.ದೊರೈ ವಂದಿಸಿದರು.

ಮಾಚ್ 28ಕ್ಕೆ ಉಕ್ಕು ಸುರಕ್ಷತಾ ದಿನ
ದೇಶದ ಉಕ್ಕು ಕೈಗಾರಿಕೆಗಳಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಾ.28ರಂದು ಉಕ್ಕು ಸುರಕ್ಷತಾ ದಿನವನ್ನು ಆಚರಿಸಲು ಕೇಂದ್ರ ಉಕ್ಕು ಸಚಿವಾಲಯ ನಿರ್ಧರಿಸಿದೆ ಎಂದು ಕೇಂದ್ರ ಉಕ್ಕು ಸಚಿವ ಚೌದರಿ ಬೀರೇಂದ್ರ ಸಿಂಗ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾರ್ಮಿಕರ ಸುರಕ್ಷತೆಗೆ ನಮ್ಮ ಸಚಿವಾಲಯ ಹೆಚ್ಚು ಒತ್ತು ನೀಡುತ್ತಿದೆ. ಈ ಬಾರಿ ವಿಶೇಷವಾಗಿ ಒಂದು ದಿನವನ್ನು ಇದಕ್ಕಾಗಿ ಮೀಸಲಿಡಲು ಚಿಂತನೆ ನಡೆಸಿದ್ದೇವೆ ಎಂದರು.

ಕುದುರೆಮುಖದ ಲಕ್ಯಾ ಡ್ಯಾಂನಲ್ಲಿ ಇರುವ ಹೂಳನ್ನು ಎತ್ತಲು ಚಿಂತನೆ ನಡೆಸಿದ್ದೇವೆ. ಅದರಲ್ಲಿ ಸಾಕಷ್ಟು ಕಬ್ಬಿಣದ ಅಂಶಗಳು ಇರುವುದು ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದೆ. ಇದನ್ನು ಸದ್ಬಳಕೆ ಮಾಡುವುದು ನಮ್ಮ ಉದ್ದೇಶ. ಅಂದಾಜು 300 ಮಿಲಿಯನ್ ಟನ್ ಹೂಳು ಇರಬಹುದು. ದೇಶದಲ್ಲಿ 1500ಕ್ಕೂ ಹೆಚ್ಚು ಸೇತುವೆಗಳು ನಿರ್ಮಾಣವಾಗಲಿದೆ. ಈ ಸೇತುವೆಗಳನ್ನು ಉಕ್ಕಿನಲ್ಲೇ ನಿರ್ಮಾಣ ಮಾಡಿದರೆ ಅದರ ಬಾಳಿಕೆಯೂ ಹೆಚ್ಚಾಗುತ್ತದೆ. ದೇಶದ ಉಕ್ಕಿನ ಕಾರ್ಖಾನೆಗಳಿಗೂ ಪ್ರೋತ್ಸಾಹ ದೊರಕುತ್ತದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News