ಕರ್ತವ್ಯ ಲೋಪ: ಮಣಿಪಾಲ ಎಎಸ್ಸೈ ಸಹಿತ ಇಬ್ಬರು ಅಮಾನತು
Update: 2019-01-30 21:50 IST
ಉಡುಪಿ, ಜ.30: 80 ಬಡಗಬೆಟ್ಟು ಗ್ರಾಮದ ರಾಜೀವನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಎಎಸ್ಸೈ ಸೇರಿದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದರೂ ಕಾರ್ಯಾಚರಣೆ ನಡೆಸದ ಮಣಿಪಾಲ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೇಖರ್ ಹಾಗೂ ಕಾನ್ಸ್ಟೇಬಲ್ ಸುರೇಶ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅಮಾನತುಗೊಳಿಸಿ ಆದೇಶ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ವೇಶ್ಯಾವಾಟಿಕೆಗೆ ನಡೆಯುತ್ತಿದ್ದ ರಾಜೀವನಗರದ ಮನೆಯೊಂದರ ಮೇಲೆ ಜ.28ರಂದು ಸಂಜೆ ವೇಳೆ ದಾಳಿ ನಡೆಸಿದ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಪಿ. ನೇತೃತ್ವದಲ್ಲಿ ತಂಡ ಒಟ್ಟು 10 ಮಂದಿಯನ್ನು ಬಂಧಿಸಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.