‘ನನ್ನ ಜಿಲ್ಲೆ- ನನ್ನ ಕನಸು’ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ

Update: 2019-02-01 11:44 GMT

ಮಂಗಳೂರು, ಫೆ.1: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬ್ರಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ‘ನನ್ನ ಜಿಲ್ಲೆ- ನನ್ನ ಕನಸು’ ಎಂಬ ವಿಷಯದಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬಹುಮಾನಗಳನ್ನು ವಿತರಣೆ ಮಾಡಿದರು.

ಪ್ರಬಂಧ ಸ್ಪರ್ಧೆಯ ಪದವಿ ವಿಭಾಗದಲ್ಲಿ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಾಣಿ ಪ್ರಥಮ, ಮಂಗಳೂರು ಕರಾವಳಿ ಫಾರ್ಮಸಿ ಕಾಲೇಜಿನ ಆಯಿಶತ್ ಸಫ್ವಾನ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಪದವಿ ಪೂರ್ವ ವಿಭಾಗದಲ್ಲಿ ಸಂತ ಆ್ಯಗ್ನೆಸ್ ಪದವಿ ಪೂರ್ವ ಕಾಲೇಜಿನ ಎನ್.ಆರ್. ಅನನ್ಯಾ ರೈ ಪ್ರಥಮ ಹಾಗೂ ಪುತ್ತೂರಿನ ಕುಂಬ್ರ ಮರ್ಕಝುಲ್ ಹುದಾ ಪದವಿ ಪೂರ್ವ ಕಾಲೇಜಿನ ಖದೀಜತ್ ದಿಲ್ಶಾನಾ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಗಣಪತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಚಂದ್ರಕಲಾ ನಂದಾವರ, ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಚಿತ್ರಾಪುರ, ಶ್ರೀನಿವಾಸ್ ಕಾಲೇಜು ಎಜುಕೇಶನ್‌ನ ಉಪನ್ಯಾಸಕಿ ಡಾ.ವಿಜಯಲಕ್ಷ್ಮಿ ನಾಯಕ್ ಮತ್ತು ಪತ್ರಕರ್ತೆ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಬಹುಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಾಣಿ, ಪ್ರಬಂಧ ಸ್ಪರ್ಧೆಯ ಮೂಲಕ ಯುವ ಮನಸ್ಸುಗಳಿಗೆ ತನ್ನ ಜಿಲ್ಲೆಯ ಬಗೆಗಿನ ಕನಸುಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಿರುವುದು ಅಭಿನಂದನೀಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News