ಪೋಲಾಗುತ್ತಿರುವ ನೀರನ್ನು ಬಳಸಿಕೊಂಡು ಅಣುಕು ಸಂದೇಶ!
ಉಡುಪಿ, ಫೆ.1: ನಗರದ ಚಿತ್ತರಂಜನ್ ಸರ್ಕಲ್ ಬಳಿಯ ಮಾರುತಿ ವಿಥಿಕಾದಲ್ಲಿ ಶುಕ್ರವಾರ ಪೋಲಾಗುತ್ತಿದ್ದ ಅಮೂಲ್ಯ ಜೀವಜಲವನ್ನು ಬಳಕೆ ಮಾಡುವ ಮೂಲಕ ನೀರಿನ ಮಹತ್ವದ ಕುರಿತ ಸಂದೇಶವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಅಣುಕು ಪ್ರದರ್ಶನದೊಂದಿಗೆ ನಗರ ಸಭೆಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು.
ಕಳೆದ ಒಂದು ವಾರದಿಂದ ನಗರದಲ್ಲಿ ವಿತರಣೆಯಾಗುವ ಕುಡಿಯುವ ನೀರಿನ ಪೈಪು ಬಿರುಕು ಬಿಟ್ಟಿದ್ದರಿಂದ ನೀರು ಪೋಲಾಗುತ್ತಿರುವುದು ಕಂಡು ಬಂದಿದ್ದು, ಸ್ಥಳಿಯರು ಸಂಬಂಧ ಪಟ್ಟವರಿಗೆ ದುರಸ್ಥಿಪಡಿಸುವಂತೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಪೋಲಾಗುತ್ತಿರುವ ನೀರನ್ನು ದ್ವಿಚಕ್ರವನ್ನು ತೊಳೆಯಲು ಬಳಸಿ ಕೊಂಡು ಜೀವಜಲ ಅಮೂಲ್ಯ ಎಂಬ ಸಂದೇಶವನ್ನು ಸಾರಿದರು.
ಕಾರ್ಮಿಕರು ಕೆಲಸ ನಿರ್ವಹಿಸುವಾಗ ಭೂಗರ್ಭದೊಳಗಿನ ನೀರಿನ ಕೊಳವೆ ಗಳು ಒಡೆದು ಹೋಗುವ ಪ್ರಕರಣಗಳು ನಡೆಯುತ್ತಿವೆ. ಯಾವುದೇ ಸಾರ್ವ ಜನಿಕ ಸ್ಥಳಗಳಲ್ಲಿ ಹೊಂಡ ಅಗೆಯುವ ಕಾಮಗಾರಿ ನಡೆಸುವಾಗ ನಗಸಭೆ ಯಿಂದ ಭೂಗರ್ಭದೊಳಗೆ ನೀರಿನ ಕೊಳವೆಗಳು ಇರುವಿಕೆ ಸ್ಥಳಗಳ ಮಾಹಿತಿ ಯನ್ನು ನಗರಸಭೆಯ ಅಭಿಯಂತರರಿಂದ ಗುತ್ತಿಗೆದಾರರು ಕಾನೂನಿನ ಪ್ರಕಾರ ಪಡೆಯಬೇಕಾಗಿರುತ್ತದೆ. ಮುಂದಾದರೂ ಈ ಕ್ರಮವನ್ನು ಪಾಲಿಸಬೇಕು. ಇಲ್ಲದಿದ್ದರೆ ಕೊಳವೆ ಒಡೆದು ನೀರು ಪೋಲಾಗುವ ಘಟನೆಗಳು ಮರುಕಳಿಸುತ್ತಿರುತ್ತವೆ ಎಂದು ನಾಗರಿಕ ಸಮಿತಿಯ ಕಾರ್ಯಕರ್ತರು ತಿಳಿಸಿದ್ದಾರೆ.