ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ: 9ನೇ ಶ್ರಮದಾನ ಕಾರ್ಯಕ್ರಮ
ಮಂಗಳೂರು, ಫೆ.3: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಮುಖ ಅಂಗವಾದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 9ನೇ ಶ್ರಮದಾನ ಕಾರ್ಯಕ್ರಮ ನಾಗುರಿಯಲ್ಲಿ ರವಿವಾರ ಬೆಳಗ್ಗೆ ನಡೆಯಿತು.
ನಾಗುರಿ ಮಾರುಕಟ್ಟೆ ಬದಿಯಲ್ಲಿ ಶ್ರಮದಾನಕ್ಕೆ ಅಯೋಧ್ಯಾ ರಾಮಕೃಷ್ಣ ಮಿಷನ್ನ ಸ್ವಾಮಿ ಭಕ್ತಿಸುಧಾನಂದ ಹಾಗೂ ರಾಮಕೃಷ್ಣ ಮಿಷನ್ ಮುಖ್ಯ ಕೇಂದ್ರದಿಂದ ಆಗಮಿಸಿದ್ದ ಸ್ವಾಮಿ ತ್ರಿಗುಣೇಶಾನಂದ ಜಂಟಿಯಾಗಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಗರೋಡಿ ಬಿಲ್ಲವ ಸಂಘದ ಅಧ್ಯಕ್ಷ ಧರ್ಮಪಾಲ, ಶುಭೋದಯ ಆಳ್ವ, ಮನಪಾ ಆರೋಗ್ಯ ಅಧೀಕ್ಷಕಿ ರಕ್ಷಿತಾ, ಸಂದೀಪ್ ಗರೋಡಿ, ಸುಭಾಷ ಪಡೀಲ್, ಸಂದೀಪ್ ಪಂಪ್ ವೆಲ್, ಪೂಜಾ ರಾಜ್ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಭಕ್ತಿಸುಧಾನಂದ, ದೇವರ ಪ್ರಾಪ್ತಿಗಾಗಿ ಜ್ಞಾನ ಅತ್ಯವಶ್ಯಕವಾಗಿದೆ. ಅಂತಹ ಜ್ಞಾನ ದೊರೆಯಬೇಕಾದರೆ ಚಿತ್ತಶುದ್ಧಿಯಾಗಬೇಕು. ಆ ಚಿತ್ತಶುದ್ಧಿಯ ಮೊದಲು ಬಾಹ್ಯ ಶುಚಿತ್ವ ಅತ್ಯಂತ ಅವಶ್ಯಕ. ಅಂತಹ ಕಾರ್ಯ ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವುದು ಬಹಳ ಹೆಮ್ಮೆಯ ಸಂಗತಿ ಎಂದರು.
ಶ್ರಮದಾನ: ಪಂಪವೆಲ್ನಿಂದ ಆರಂಭಿಸಿ ನಾಗುರಿ ಪಡೀಲ್ವರೆಗಿನ ರಸ್ತೆಯ ಬದಿಯ ಐದು ಸ್ಥಳಗಳಲ್ಲಿ ಕಾರ್ಯಕರ್ತರು ಗುಂಪುಗಳನ್ನು ರಚಿಸಿಕೊಂಡು ಶ್ರಮದಾನ ಮಾಡಿದರು. ಮೊದಲಿಗೆ ನಾಗುರಿ ಮಾರುಕಟ್ಟೆ ಬಳಿಯ ಕಸದ ರಾಶಿಯನ್ನು ತೆರವು ಮಾಡಲಾಯಿತು. ನಂತರ ಮಾರುಕಟ್ಟೆ ಹಿಂಬದಿಯ ಗೋಡೆಯನ್ನು ತೊಳೆದು ಬಣ್ಣ ಹಚ್ಚಲಾಯಿತು. ಬಳಿಕ ಅಲ್ಲಿ ಯಾರೂ ಕಸಹಾಕದಂತೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಸ್ಥಳವನ್ನು ಸುಂದರವಾಗಿರುವಂತೆ ಮಾಡಲು ಹೂಗಿಡಗಳ ಕುಂಡಗಳನ್ನು ಅಲ್ಲಿರಿಸಲಾಯಿತು. ಅಭಿಯಾನದ ಪ್ರಮುಖ ದಿಲ್ರಾಜ್ ಆಳ್ವ, ಉದಯ ಕೆ.ಪಿ. ಹಾಗೂ ಪ್ರಕಾಶ್ ಗರೋಡಿ ನೇತೃತ್ವ ವಹಿಸಿದ್ದರು.
ಇನ್ನೊಂದೆಡೆ ಪಂಪವೆಲ್ ಹೂವಿನ ಮಾರುಕಟ್ಟೆ ಎದುರಿನ ಸ್ಥಳವೊಂದರಲ್ಲಿ ತ್ಯಾಜ್ಯದ ರಾಶಿಯನ್ನು ಪ್ರೊ.ಶೇಷಪ್ಪ ಅಮೀನ್, ಸುಧೀರ್ ವಾಮಂಜೂರು, ಉಮಾಕಾಂತ್ ಸುವರ್ಣ ಮತ್ತಿತರ ಕಾರ್ಯಕರ್ತರು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಮೂರನೇ ತಂಡ ಅರಣ್ಯ ಭವನದ ಬಳಿಯ ಗ್ಯಾಲರಿ ಅಪಾರ್ಟಮೆಂಟ್ ಎದುರಿಗಿದ್ದ ತ್ಯಾಜ್ಯದ ರಾಶಿಯನ್ನು ತೆಗೆದು ಸ್ವಚ್ಛ ಮಾಡಿದರು. ರಾಮಚಂದ್ರ ಶೆಟ್ಟಿ, ಕಮಲಾಕ್ಷ ಪೈ ಮಾರ್ಗದರ್ಶನ ನೀಡಿದರು. ವಿಠಲದಾಸ್ ಪ್ರಭು, ಪ್ರಶಾಂತ ಯಕ್ಕೂರು, ಬಾಲಕೃಷ್ಣ ನಾಕ್ ಹಾಗೂ ಸ್ವಯಂ ಸೇವಕರು ಪಡೀಲ್ ವೃತ್ತ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿದ್ದ ಕಸ ಗುಡಿಸಿ ಸ್ವಚ್ಛಗೊಳಿಸಿದರು.
ಬಸ್ ತಂಗುದಾಣ ಸ್ವಚ್ಛತೆ: ಪಡೀಲ್ ಜಂಕ್ಷನ್ನಲ್ಲಿರುವ ಬಸ್ ತಂಗುದಾಣವನ್ನು ಕಳೆದ ವರ್ಷ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದಡಿ ನೂತನವಾಗಿ ನಿರ್ಮಿಸಲಾಗಿತ್ತು. ಇಂದು ಅದನ್ನು ಶುಚಿಗೊಳಿಸಿ, ಕುಳಿತುಕೊಳ್ಳುವ ಆಸನ ಹಾಗೂ ಕಂಬಗಳಿಗೆ ಸುಂದರವಾಗಿ ಬಣ್ಣಬಳಿದು ಅಂದಗೊಳಿಸಲಾಯಿತು. ಸ್ವಚ್ಛತೆಯ ಜಾಗೃತಿಯನ್ನುಂಟು ಮಾಡುವ ಸಂದೇಶಗಳುಳ್ಳ ಫಲಕ ಹಾಗೂ ಮಡಕೆ ಗೊಬ್ಬರದ ಪ್ರಚಾರಕ್ಕಾಗಿ ಸುಂದರ ಗ್ರಾಫಿಕ್ಸ್ ಇರುವ ಫಲಕ ಅಳವಡಿಸಲಾಗಿದೆ. ಜೊತೆಗೆ ತಂಗುದಾಣದ ಸುತ್ತಮುತ್ತಲಿನ ಕಸವನ್ನು ತೆಗೆದು ಶುಚಿಗೊಳಿಸಲಾಯಿತು.
ಜಾಗೃತಿ ಕಾರ್ಯ: ನಾಗುರಿ ಮಾರುಕಟ್ಟೆಯ ಬಳಿ ಅಪಾರವಾಗಿ ಬೀಳುತ್ತಿದ ಕಸದ ರಾಶಿಯನ್ನು ಇಂದು ಜೆಸಿಬಿ ಹಾಗೂ ಟಿಪ್ಪರ್ಗಳ ಸಹಾಯದಿಂದ ತೆರವು ಮಾಡಲಾಗಿದೆ. ಅಲ್ಲಿದ್ದ ಅಂಗಡಿ ವರ್ತಕರಿಗೆ ಸುತ್ತಮುತ್ತಲಿನ ಸಾರ್ವಜನಿಕರಿಗೆ ಅಲ್ಲಿ ಮತ್ತೆ ಕಸ ಹಾಕದಂತೆ ತಿಳಿಹೇಳಲಾಯಿತು. ಕಸವನ್ನು ಮಹಾನಗರ ಪಾಲಿಕೆಯ ವಾಹನಕ್ಕೆ ಕೊಡಬೇಕಾಗಿ ತಾಕೀತು ಮಾಡಲಾಯಿತು.
ಮನಪಾ ಪರಿಸರ ಅಭಿಯಂತರ ಮಧು ಮನೋಹರ್ ನಿರ್ದೇಶನದಲ್ಲಿ ಆರೋಗ್ಯ ಅಧೀಕ್ಷಕಿ ರಕ್ಷಿತಾ ದುರ್ಗೇಶ್, ಪ್ರವೀಣ ಚಂದ್ರ, ಅಬ್ದುಲ್ ಅರೀಶ್ ಹಾಗೂ ಸ್ವಯಂಸೇವಕರು ಹಲವು ವರ್ತಕರನ್ನು ಭೇಟಿ ಮಾಡಿ ಜಾಗೃತಿ ಮೂಡಿಸಲಾಯಿತು. ಸ್ಥಳೀಯ ಮನಪಾ ಸದಸ್ಯೆ ಆಶಾ ಡಿಸಿಲ್ವಾ ಕಾರ್ಯಕ್ರಮದ ನೇತೃತ್ವ ವಹಿಸಿ ಸೂಕ್ತ ಮಾರ್ಗದರ್ಶನ ನೀಡಿದರು.