ಮೀನುಗಾರರು ಸುರಕ್ಷಿತವಾಗಿದ್ದಾರೆಂಬ ವದಂತಿಗಳು ಸತ್ಯವಾಗಲಿ: ಜಯಮಾಲ
ಉಡುಪಿ, ಫೆ.4: ಸುವರ್ಣ ತ್ರಿಭುಜ ಬೋಟು ಸಹಿತ ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತರಾಗಿದ್ದಾರೆ ಎಂಬ ಹಲವು ವದಂತಿಗಳು ಎಲ್ಲ ಕಡೆ ಗಳಲ್ಲಿ ಹರಡುತ್ತಿವೆ. ನಾಪತ್ತೆಯಾದವರ ಕುಟುಂಬದವರು ಈಗಲೂ ಕೂಡ ನನ್ನ ಮನೆಯವರು ಬರುತ್ತಾರೆಂದು ಕಾಯುತ್ತಿರುವುದರಿಂದ ಈ ವದಂತಿಗಳು ಸತ್ಯ ವಾಗಲಿ ಎಂಬುದು ನಮ್ಮ ಆಸೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ತಿಳಿಸಿದ್ದಾರೆ.
ಉಡುಪಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಎಸ್ಪಿ ಜೊತೆ ಮಾತುಕತೆ ನಡೆಸಿದ್ದೇನೆ. ಸುವರ್ಣ ತ್ರಿಭುಜ ಬೋಟಿಗಾಗಿ ಹುಡುಕಾಟ ನಡೆಸುತ್ತಿರುವ ನೌಕಪಡೆಗೆ ಸಮುದ್ರ ಆಳದಲ್ಲಿ 23 ಮೀಟರ್ ಉದ್ದದ ಬೋಟೊಂದು ಕಂಡುಬಂದಿದ್ದು, ತುಂಬಾ ಆಳದಲ್ಲಿ ಇರುವುದರಿಂದ ಅದು ಉಲ್ಟಾ ಬಿದ್ದಿರುವಂತೆ ಹಾಗೂ ಸರಿಯಾಗಿ ಕಣ್ಣಿಗೆ ಕಾಣಿಸುತ್ತಿಲ್ಲ. ಆದರೆ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟು ಉದ್ದ 24 ಮೀಟರ್ ಇದೆ ಎಂದು ಹೇಳಲಾಗುತ್ತದೆ ಎಂದರು.
ಈ ಸಂಬಂಧ ಪರಿಶೀಲನೆಗಾಗಿ ಮುಳುಗು ತಜ್ಞರು ಸಮುದ್ರದಲ್ಲಿ ಸುಮಾರು 35 ಮೀಟರ್ ಆಳದವರೆಗೆ ತೆರಳಿದ್ದು, ಕತ್ತಲು ಆವರಿಸಿರುವುದರಿಂದ ಅವರು ನೆಲ ಕಾಣದೆ ವಾಪಾಸ್ಸು ಬಂದಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. 35 ಮೀಟರ್ ಆಳಕ್ಕೆ ಹೋದ ನಮಗೆ 60 ಮೀಟರ್ ಆಳಕ್ಕೆ ಹೋಗಲು ಆಗುತ್ತದೆ. ಹೇಗಾದರೂ ಮಾಡಿ ಅಲ್ಲಿರುವ ಬೋಟನ್ನು ಪರಿಶೀಲಿ ಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಬೋಟು ನಾಪತ್ತೆ ಸಂಬಂಧ ನೌಕಪಡೆಯ ಹಡಗಿಗೆ ಢಿಕ್ಕಿ ಹೊಡೆದ ಸಮಯ, ನಾಪತ್ತೆಯಾಗಿರುವುದು, ಟವರ್ನಲ್ಲಿ ಸಂಪರ್ಕ ಕಡಿತ ಆಗಿರುವ ಬಗ್ಗೆ ನಮಗೆ ಸಂಶಯಗಳು ಕಾಡುತ್ತಿವೆ. ಇದೀಗ ಸಮುದ್ರದಲ್ಲಿರುವ ಬೋಟನ್ನು ಪರಿಶೀಲಿಸಿ ದಾಗ ನಮ್ಮ ಈ ಎಲ್ಲ ಸಂಶಯಗಳು ಪರಿಹಾರವಾಗುತ್ತದೆ ಎಂದು ಅವರು ತಿಳಿಸಿದರು.
ಕೋಟ ಜೋಡಿ ಕೊಲೆ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ತನ್ನದೆ ರೀತಿ ಯಲ್ಲಿ ತನಿಖೆ ನಡೆಯುತ್ತಿದೆ. ಕೆಲವು ಕೇಸುಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಈ ಪ್ರಕರಣದಲ್ಲಿ ಖಂಡಿತವಾಗಿಯೂ ಆರೋಪಿಗಳನ್ನು ಬಂಧಿಸಲಾಗುತ್ತದೆ. ಇದರಲ್ಲಿ ಯಾವುದೇ ಆರೋಪಿಗಳನ್ನು ಕೈಬಿಡುವ ಪ್ರಶ್ನೆ ಇಲ್ಲ. ಪೊಲೀಸ್ ತನಿಖೆಯಲ್ಲಿ ಎಲ್ಲ ರೀತಿಯ ಪ್ರತಿಫಲ ಸಿಗಲಿದೆ ಎಂದು ಸಚಿವರು ಹೇಳಿದರು