×
Ad

ಸೀರತ್ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

Update: 2019-02-05 22:17 IST

ಮಂಗಳೂರು, ಫೆ. 5: 2018 ನವೆಂಬರ್ ತಿಂಗಳಲ್ಲಿ ರಾಜ್ಯವ್ಯಾಪಿ ನಡೆಸಲಾದ ‘ಪ್ರವಾದಿ ಮುಹಮ್ಮದ್(ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ' ಸೀರತ್ ಅಭಿಯಾನದ ಅಂಗವಾಗಿ ದ.ಕ ಜಿಲ್ಲೆಯ ಶಿಕ್ಷಕ/ ಶಿಕ್ಷಕಿಯರಿಗಾಗಿ ಜಾತಿ-ಮತ-ಲಿಂಗ ಬೇಧ-ಭಾವವಿಲ್ಲದೆ "ಪ್ರವಾದಿ ಮುಹಮ್ಮದ್ ನನ್ನ ದೃಷ್ಟಿಯಲ್ಲಿ" ಎಂಬ ವಿಷಯದಲ್ಲಿ ನಡೆಸಲಾದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು  ಫೆ. 9 ರಂದು  ಬೆಳಿಗ್ಗೆ 10.30ಕ್ಕೆ ಮಂಗಳೂರಿನ ಹಂಪನಕಟ್ಟೆ ಮಿಲಾಗ್ರಿಸ್ ಚರ್ಚ್ ಹಾಗೂ ಮಸ್ಜಿದುನ್ನೂರ್ ಮಸೀದಿ ಬಳಿಯಿರುವ ಐ.ಎಮ್.ಎ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್. ಸುರೇಶ್, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಮುಹಮ್ಮದ್ ನಝೀರ್, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ಡಾ. ಉದಯಕುಮಾರ್  ಇರ್ವತ್ತೂರು, ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಘಟಕದ ಅಧ್ಯಕ್ಷರಾದ ಜ. ಮುಹಮ್ಮದ್ ಅಲಿ ಉಚ್ಚಿಲ್, ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ. ಕೆ ಎಂ. ಅಶ್ರಫ್  ಭಾಗವಹಿಸಲಿದ್ದು, ಸೀರತ್ ಅಭಿಯಾನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಸೀರತ್ ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ಸಿ.ಪಿ ಹಬೀಬ್ ರಹ್ಮಾನ್ ವಹಿಸಲಿದ್ದಾರೆ.

ಪ್ರಥಮ ಬಹುಮಾನ 25,000 ರೂ., ದ್ವಿತೀಯ 15,000, ತೃತೀಯ 10000 ಹಾಗೂ 11 ಸಮಾಧಾನಕರ ಬಹುಮಾನ ತಲಾ ರೂ 2000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ ಎಂದು ಸೀರತ್ ಪ್ರಬಂಧ ಸರ್ಧೆಯ ಸಂಚಾಲಕರಾದ ಅಮಾನುಲ್ಲಾ ಖಾನ್ ತರೀಕೆರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News