ಬ್ರಹ್ಮಾವರ: ವಿದ್ಯಾರ್ಥಿ ನಿಲಯದ ಓರ್ವ ಆತ್ಮಹತ್ಯೆ, ಇನ್ನೋರ್ವ ನಾಪತ್ತೆ

Update: 2019-02-08 15:40 GMT

ಬ್ರಹ್ಮಾವರ, ಫೆ.8: ಹನೇಹಳ್ಳಿ ಗ್ರಾಮದ ಕೂರಾಡಿ ಎಂಬಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಇಬ್ಬರು ವಿದ್ಯಾರ್ಥಿಗಳು ಫೆ.7ರಂದು ನಾಪತ್ತೆಯಾಗಿದ್ದು, ಅದರಲ್ಲಿ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಡವಿಬಾವಿ ಗ್ರಾಮದ ಮಲ್ಲೇಶ(17) ಎಂದು ಗುರುತಿಸಲಾಗಿದೆ. ಬಿಜಾಪುರ ಮೂಲದ ಮಹೇಶ (17) ಎಂಬಾತ ನಾಪತ್ತೆಯಾಗಿದ್ದಾನೆ. ಇವರಿಬ್ಬರು ಸುಮಾರು 2 ವರ್ಷದಿಂದ ಹಾಸ್ಟೆಲ್‌ನಲ್ಲಿ ನೆಲೆಸಿದ್ದು, ಕೂರಾಡಿ ಬಿಎಂಎಂ ಪ್ರೌಢಶಾಲೆಯ 10ನೆ ತರಗತಿಯ ವಿದ್ಯಾರ್ಥಿಯಾಗಿದ್ದರು.

ಫೆ.7ರಂದು ಶಾಲೆಗೆ ಹೋಗದೆ ನಾಪತ್ತೆಯಾಗಿದ್ದ ಮಲ್ಲೇಶ್‌ ಗಾಗಿ ಹುಡುಕಾಟ ನಡೆಸಿದಾಗ ರಾತ್ರಿ 8.45ರ ಸುಮಾರಿಗೆ ಹಾಸ್ಟೇಲ್ ಸಮೀಪದ ಹಾಡಿಯಲ್ಲಿ  ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು. ಆತ್ಮಹ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಅದೇ ರೀತಿ ಫೆ.7ರಂದು ಬೆಳಗ್ಗೆ ಶಾಲೆಗೆಂದು ಹೋದ ಮಹೇಶ್ ನಾಪತ್ತೆ ಯಾಗಿದ್ದಾನೆ. ಈತ ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದಿದ್ದು, ಅಲ್ಲದೇ ಮುಂಬರುವ ಎಸೆಸೆಲ್ಸಿ ಪರೀಕ್ಷೆಗೆ ಓದುವುದು ಕಷ್ಟಕರವಾಗುತ್ತದೆ ಎಂದು ಭಯದಿಂದ ವಿದ್ಯಾರ್ಥಿ ನಿಲಯದಿಂದ ಹೋಗಿರಬಹುದಾಗಿದೆಂದು ಶಂಕಿಸಲಾಗಿದೆ.

ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಲೀಲಾ ನಾಯ್ಕ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News