ನಟ ಸಾರ್ವಭೌಮ: ಕಣ್ಣೋಟ ಮೀರಿಸುವ ಕಾಲ್ಪನಿಕ ಹಿನ್ನೋಟ!

Update: 2023-06-30 06:04 GMT

ಸ್ಟಾರ್ ಸಿನೆಮಾಗಳ ಹೆಸರು ಘೋಷಣೆಯಾದೊಡನೆ ಶೀರ್ಷಿಕೆಯಿಂದಲೇ ಪ್ರೇಕ್ಷಕರ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಚಿತ್ರದ ಎಂಡ್ ಟೈಟಲ್ ತನಕ ಟ್ವಿಸ್ಟ್‌ಗಳೊಂದಿಗೆ ಕಲ್ಪನೆಗೆ ಸಿಗದಂತೆ ಸಾಗುವ ಚಿತ್ರವೇ ನಟಸಾರ್ವಭೌಮ.

ಸಾಮಾನ್ಯವಾಗಿ ಸ್ಟಾರ್ ಸಿನೆಮಾಗಳ ಕತೆ ಗೊತ್ತಿಲ್ಲದಿದ್ದರೂ ಅವುಗಳು ಇದೇ ಜಾಡಿನಲ್ಲಿರುತ್ತವೆ ಎನ್ನುವ ನಿರೀಕ್ಷೆ ಎಲ್ಲರಿಗೂ ಇರುತ್ತವೆ. ಆದರೆ ಇಲ್ಲಿ ಕೊನೆಯ ತನಕವೂ ಪ್ರೇಕ್ಷಕನಿಂದ ಅದನ್ನು ತೀರ್ಮಾನಿಸಲಾಗದಂಥ ತಿರುವುಗಳನ್ನು ನೀಡಿದ್ದಾರೆ ನಿರ್ದೇಶಕ ಪವನ್ ಒಡೆಯರ್. ಚಿತ್ರದ ನಾಯಕ ಗಗನ್ ದೀಕ್ಷಿತ್ ಪತ್ರಕರ್ತ. ಕೋಲ್ಕತಾದಿಂದ ಬೆಂಗಳೂರಿಗೆ ವರ್ಗಾವಣೆ ಪಡೆದು ಬಂದ ಮೇಲೆ ಆತ ಲಾಡ್ಜ್ ಒಂದರಲ್ಲಿ ತನ್ನ ಪರಿಚಿತರೊಬ್ಬರ ವಿಳಾಸ ಕೇಳುತ್ತಾನೆ. ಆದರೆ ಲಾಡ್ಜ್ ಮ್ಯಾನೇಜರ್ ಸಾಕ್ಷಿ ವಿಳಾಸ ನೀಡಲು ನಿರಾಕರಿಸುತ್ತಾಳೆ. ವಿಳಾಸ ತಿಳಿಯುವ ಯತ್ನದಲ್ಲಿ ಸಾಕ್ಷಿ ಮತ್ತು ಗಗನ್ ಆತ್ಮೀಯರಾಗುತ್ತಾರೆ. ಇದೇ ವೇಳೆ ಒಂದೆರಡು ವಿಭಿನ್ನ ಭೇಟಿಯ ಮೂಲಕ ಕೇಂದ್ರ ಮಂತ್ರಿ ಘನಶ್ಯಾಮ್ ಕೂಡ ಗಗನ್‌ಗೆ ಆತ್ಮೀಯರಾಗುತ್ತಾರೆ. ಆದರೆ ಘನಶ್ಯಾಮ್‌ನ ಬರ್ತ್‌ಡೇ ಪಾರ್ಟಿಯಲ್ಲಿ ಎಲ್ಲರ ಮುಂದೆ ಆತನಿಗೆ ಹಲ್ಲೆ ನಡೆಸುವ ಮೂಲಕ ಮೆಂಟಲ್ ಪೇಶೆಂಟ್ ಆಗಿ ಗುರುತಿಸಲ್ಪಡುತ್ತಾನೆ ಗಗನ್. ಆದರೆ ನಿಜವಾಗಿಯೂ ಗಗನ್‌ಗೆ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಇದೆಯೇ? ಅಥವಾ ಆತ ಬಾಡಿಗೆಗೆ ವಾಸವಾಗಿದ್ದ ಮನೆಯಲ್ಲಿನ ದೆವ್ವದ ಕಾಟ ಕಾರಣವೇ? ಎನ್ನುವ ಯೋಚನೆಯಲ್ಲೇ ಕಳೆಯುವ ಪ್ರೇಕ್ಷಕನಿಗೆ ಚಿತ್ರದ ಕೊನೆಯಲ್ಲಿ ಬರುವ ಫ್ಲ್ಯಾಶ್‌ಬ್ಯಾಕ್ ದೃಶ್ಯ ಎಲ್ಲ ಪ್ರಶ್ನೆಗಳಿಗೂ ಸಮಾಧಾನಕರ ಉತ್ತರ ನೀಡುತ್ತದೆ.

ಗಗನ್ ದೀಕ್ಷಿತ್ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ಎಂದಿನಂತೆ ಪವರ್‌ಫುಲ್ ನಟನೆ ನೀಡಿದ್ದಾರೆ. ಆದರೆ ಸಿನೆಮಾ ಸ್ಟಿಲ್‌ಗಳಲ್ಲಿ ಕ್ಯಾಮರಾ ಜೊತೆಗೆ ಕಾಣಿಸಿಕೊಂಡಿದ್ದ ಅವರ ಕ್ಯಾಮರಾ, ಚಿತ್ರದಲ್ಲಿ ಯಾವುದೇ ಕಮಾಲ್ ಮಾಡುವುದಿಲ್ಲ. ಅವರ ಪಾತ್ರ ಪತ್ರಕರ್ತನದ್ದೇ ಆಗಿರಬೇಕಿತ್ತು ಎನ್ನುವ ಅನಿವಾರ್ಯವೂ ಚಿತ್ರದಲ್ಲಿ ಕಾಣಿಸುವುದಿಲ್ಲ. ಆದರೆ ಅದನ್ನು ಕೂಡ ನಿರೀಕ್ಷೆಗಳನ್ನು ದಿಕ್ಕು ತಪ್ಪಿಸುವ ನಿರ್ದೇಶಕರ ಪ್ರಯತ್ನದಲ್ಲಿ ಒಂದಾಗಿ ಒಪ್ಪಲೇಬೇಕು. ಕೇಂದ್ರಮಂತ್ರಿ ಘನಶ್ಯಾಮನಾಗಿ ಪಿ.ರವಿಶಂಕರ್ ಚಿತ್ರದ ಜೀವಾಳವಾಗಿದ್ದಾರೆ. ಸಾಕ್ಷಿಯಾಗಿ ರಚಿತಾರಾಮ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಗಗನ್ ಸ್ನೇಹಿತ ಕೇಶವನಾಗಿ ನಟಿಸಿರುವ ಚಿಕ್ಕಣ್ಣ ದೆವ್ವಕ್ಕೆ ಭಯಪಡುವ ದೃಶ್ಯಗಳು, ಮನೆ ಮಾಲಕನಾಗಿ ಸಾಧುಕೋಕಿಲ ಸಂಭಾಷಣೆಗಳು ಚಿತ್ರಕ್ಕೆ ಹುರುಪು ತುಂಬಿವೆ. ರಚಿತಾ, ರವಿಶಂಕರ್ ಸೇರಿದಂತೆ ಪ್ರಮುಖ ಕಲಾವಿದರು ನಿರ್ವಹಿಸಿರುವ ಎಲ್ಲ ಪಾತ್ರಗಳಿಗೂ ‘ನಂಬಿಕೆ’ಗಳ ಮೇಲಿರುವ ಸೆಂಟಿಮೆಂಟ್ ಅನ್ನು ಮೊದಲೇ ರಿಜಿಸ್ಟರ್ ಮಾಡಿಸುವಲ್ಲಿ ನಿರ್ದೇಶಕರ ಸೂಕ್ಷ್ಮತೆ ಗೆದ್ದಿದೆ. ಆದರೆ ಫ್ಲ್ಯಾಶ್‌ಬ್ಯಾಕ್ ಸ್ಟೋರಿಯಲ್ಲಿ ಬರುವ ಅನುಪಮಾ ಪರಮೇಶ್ವರನ್ ನಿರ್ವಹಿಸಿರುವ ಶ್ರುತಿಯ ಪಾತ್ರ ಮಾತ್ರ ಚಿತ್ರಕ್ಕೆ ಬೇಕಾದಷ್ಟು ಕಿಕ್ ನೀಡಿಲ್ಲ ಎನ್ನಬಹುದು. ಆಕೆಯೊಂದಿಗೆ ಪುನೀತ್‌ಗೆ ಇದ್ದ ಆತ್ಮೀಯತೆ ಮನಸ್ಸಿಗೆ ತಟ್ಟುವುದಿಲ್ಲ. ಆಕೆಯ ಕೊಲೆಯ ಸನ್ನಿವೇಶದಲ್ಲಂತೂ ಕಣ್ಮುಂದೆಯೇ ಬಿದ್ದ ಮೊಬೈಲ್ ಪೋನ್ ಕಾಣದೇ ಹೋಗುವು ದನ್ನು ಕಂಡರೆ ಖಳ ನಾಯಕನಿಗೂ ಅಂಧತ್ವ ಇದೆಯೇನೋ ಅನಿಸದಿರದು. ಆದರೆ ಉಳಿದ ಪಾತ್ರಗಳ ಆಯ್ಕೆ, ಸನ್ನಿವೇಶಗಳಿಗೆ ಸಿಗುವ ಸಮರ್ಥನೆಗಳು ಚಿತ್ರವನ್ನು ಆಸಕ್ತಿಯಿಂದ ವೀಕ್ಷಿಸುವಂತೆ ಮಾಡುತ್ತದೆ. ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ, ಶ್ರೀನಿವಾಸ ಮೂರ್ತಿ, ಅವಿನಾಶ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಿತ್ರದ ಕತೆಗೆ ಸಂಬಂಧಿಸಿದಂತೆ ಕನ್ನಡದ್ದೇ ಚಿತ್ರ ‘ಬಚ್ಚನ್’ ಮತ್ತು ಇತರ ತಮಿಳು, ತೆಲುಗು ಚಿತ್ರಗಳ ಹೋಲಿಕೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹಾಗೆ ಆರೋಪಿಸಲ್ಪಟ್ಟಿರುವ ಯಾವ ಚಿತ್ರವನ್ನೇ ಆಗಲಿ, ಸನ್ನಿವೇಶಗಳನ್ನೇ ಆಗಲಿ ನಿರ್ದೇಶಕರು ಕಾಪಿ ಮಾಡಿಲ್ಲ ಎಂದು ಧೈರ್ಯದಿಂದ ಹೇಳಬಹುದು. ಸ್ಫೂರ್ತಿ ಇರಬಹುದಾದರೂ ಪೂರ್ತಿ ಚಿತ್ರ ಪುನೀತ್ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಅಚ್ಚರಿಯಿಲ್ಲ. ಮೊದಲ ಬಾರಿ ನೋಡಿ ಚಿತ್ರದಲ್ಲಿನ ಟ್ವಿಸ್ಟ್‌ಗಳಿಗೆ ಮೂಕವಿಸ್ಮಿತನಾಗಿ ಹೊರ ಬರುವ ಪ್ರೇಕ್ಷಕ ಮತ್ತೊಮ್ಮೆ ನೋಡಿ ಆಸ್ವಾದಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಪವನ್ ಶೈಲಿಯ ಸಂಭಾಷಣೆಗಳು ಮತ್ತು ಅಪ್ಪುಡ್ಯಾನ್ಸ್ ಕೂಡ ಚಿತ್ರವನ್ನು ಮತ್ತೊಮ್ಮೆ ನೋಡುವಂತೆ ಮಾಡಬಲ್ಲವು. ಕೊನೆಯಲ್ಲಿ ಪುನೀತ್ ಪಾತ್ರಕ್ಕೆ ನಟಸಾರ್ವಭೌಮ ಎನ್ನುವ ಹೆಸರು ಹೇಳಿ ಮಾಡಿಸಿದಂತಿದೆ. ಆದರೆ ಈ ಚಿತ್ರಕ್ಕೂ ಡಾ.ರಾಜ್‌ಕುಮಾರ್ ಅವರಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಗಮನದಲ್ಲಿರಿಸಿಕೊಂಡೇ ಹೋದರೆ ಉತ್ತಮ.

ತಾರಾಗಣ: ಪುನೀತ್ ರಾಜ್‌ಕುಮಾರ್, ರಚಿತಾ ರಾಮ್

ನಿರ್ದೇಶಕ: ಪವನ್ ಒಡೆಯರ್

ನಿರ್ಮಾಪಕ: ರಾಕ್‌ಲೈನ್ ವೆಂಕಟೇಶ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News