×
Ad

ಬಂಗಾಳದಲ್ಲಿ ಮತುವಾ-ಮುಸ್ಲಿಂ ಮತದಾರರ ಅಳಿಸುವಿಕೆ: ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಸಮರ ಸಾರಿದ ಮಮತಾ ಬ್ಯಾನರ್ಜಿ

Update: 2026-03-07 22:40 IST

ಮಮತಾ ಬ್ಯಾನರ್ಜಿ | Photo Credit ; PTI 

ಚುನಾವಣಾ ಆಯೋಗದ (EC) ವಿಶೇಷ ತೀವ್ರ ಪರಿಷ್ಕರಣೆ (SIR) ನಂತರ ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಯಲ್ಲಿ 63 ಲಕ್ಷಕ್ಕೂ ಹೆಚ್ಚು ಅಥವಾ ಒಟ್ಟು ಮತದಾರರಲ್ಲಿ 9% ರಷ್ಟು ಅಳಿಸುವಿಕೆಗಳು ಕಂಡುಬಂದಿದ್ದು, 60 ಲಕ್ಷಕ್ಕೂ ಹೆಚ್ಚು ಮತದಾರರನ್ನು (8.5%) ‘ವಿಚಾರಣಾ ಹಂತ’ ಎಂಬ ವರ್ಗದಲ್ಲಿ ಇರಿಸಲಾಗಿದೆ. ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ವಿಷಯವು ರಾಜ್ಯದಲ್ಲಿ ಪ್ರಮುಖ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ.

ಮತುವಾ ಮತದಾರರು ಹೆಚ್ಚಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಏತನ್ಮಧ್ಯೆ, ಹೆಚ್ಚಿನ ಮತದಾರರು ಮುಸ್ಲಿಮರಾಗಿರುವ ಪ್ರದೇಶಗಳಲ್ಲಿ ಅವರಿಗೆ ಇನ್ನೂ ಮತ ಚಲಾಯಿಸಲು ಅವಕಾಶವಿದೆಯೇ ಎಂಬುದನ್ನು ನಿರ್ಧರಿಸಲು ನ್ಯಾಯಾಂಗ ಅಧಿಕಾರಿಗಳು ಅನೇಕ ಜನರ ಹೆಸರುಗಳನ್ನು ಪರಿಶೀಲಿಸುತ್ತಿದ್ದಾರೆ.

ಬಂಗಾಳದಲ್ಲಿ ನಡೆದ ಎರಡನೇ ಮತ್ತು ಅಂತಿಮ ಹಂತದ ಎಸ್‌ಐಆರ್ ಪ್ರಕ್ರಿಯೆ ಬಳಿಕ ಫೆಬ್ರವರಿ 28ರಂದು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿತು. ಇದು ಎಸ್‌ಐಆರ್‌ನ ಕರಡು ಪಟ್ಟಿಯಲ್ಲಿ ಮೊದಲ ಹಂತದ ನಂತರ ಕಂಡುಬಂದ ಮತುವಾ ಪ್ರದೇಶಗಳಲ್ಲಿ ಹೆಚ್ಚಿನ ಅಳಿಸುವಿಕೆಗಳ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಅಂತಿಮ ಮತದಾರರ ಪಟ್ಟಿಗಳ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ವಿಶ್ಲೇಷಣೆಯು ದಬ್‌ಗ್ರಾಮ್-ಫುಲ್ಬರಿ, ಬಾಗ್ಡಾ ಮತ್ತು ಕಲ್ಯಾಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಅಳಿಸುವಿಕೆ ಸಂಭವಿಸಿರುವುದನ್ನು ತೋರಿಸುತ್ತದೆ. ಈ ಸ್ಥಾನಗಳಲ್ಲಿ ಮತುವಾಗಳು ಬಹುಸಂಖ್ಯಾತರಾಗಿದ್ದಾರೆ.

ಎರಡನೇ ಹಂತದಲ್ಲಿ ವಿಚಾರಣೆಗೆ ಹಾಜರಾಗದವರ ಹೆಸರುಗಳನ್ನು ಅಳಿಸುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಪ್ರವೃತ್ತಿಯ ಅರ್ಥವೇನೆಂದರೆ, ಈ ಮತದಾರರು ಸರಿಯಾದ ದಾಖಲೆಗಳನ್ನು ಸಲ್ಲಿಸುವಷ್ಟು ವಿಶ್ವಾಸ ಹೊಂದಿರಲಿಲ್ಲ ಮತ್ತು ಅದಕ್ಕಾಗಿಯೇ ಅವರು ವಿಚಾರಣೆಗಳನ್ನು ತಪ್ಪಿಸಿಕೊಂಡರು ಎಂಬುದಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್‌ಐಆರ್‌ಗೂ ಮೊದಲು ಪಶ್ಚಿಮ ಬಂಗಾಳದಲ್ಲಿ 7.66 ಕೋಟಿ ಮತದಾರರಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ 63.67 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ತೋರಿಸಲಾಗಿದೆ. ಇನ್ನೂ 60.07 ಲಕ್ಷ ಹೆಸರುಗಳನ್ನು ‘ವಿಚಾರಣಾ ಹಂತ’ ಎಂಬ ವರ್ಗದಲ್ಲಿ ಇರಿಸಲಾಗಿದೆ. 1.88 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದ್ದರೂ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಈಗ 7.04 ಕೋಟಿಯಾಗಿದೆ.

ಮತುವಾ ಮತದಾರರ ಅಳಿಸುವಿಕೆ

ಮತುವಾ ಸಮುದಾಯವು ಪೂರ್ವ ಬಾಂಗ್ಲಾದೇಶದಲ್ಲಿ ರೈತರಾಗಿ ಕೆಲಸ ಮಾಡುತ್ತಿತ್ತು. 1950ರ ನಂತರ ಅವರು ಪಶ್ಚಿಮ ಬಂಗಾಳಕ್ಕೆ ವಲಸೆ ಹೋಗಲು ಪ್ರಾರಂಭಿಸಿದರು. ಸುಮಾರು ಎರಡು ದಶಕಗಳ ವಲಸೆಯ ಬಳಿಕ ಅವರು ರಾಜ್ಯದ ಎರಡನೇ ಅತಿದೊಡ್ಡ ಪರಿಶಿಷ್ಟ ಜಾತಿ (SC) ಸಮುದಾಯವಾಗಿ ರೂಪುಗೊಂಡರು.

ಮತುವಾ ಸಮುದಾಯವು ಹೆಚ್ಚಾಗಿ ಉತ್ತರ 24 ಪರಗಣ ಜಿಲ್ಲೆಯ ಠಾಕೂರ್ ನಗರದ ಸುತ್ತಮುತ್ತ ವಾಸಿಸುತ್ತಿದೆ. ಅವರ ಪ್ರಧಾನ ಕಚೇರಿ ಠಾಕೂರ್ಬರಿಯಲ್ಲಿದ್ದು, ಹೆಚ್ಚಿನ ರಾಜಕೀಯ ಪ್ರಭಾವ ಹೊಂದಿರುವ ಠಾಕೂರ್ ಕುಟುಂಬದ ನೇತೃತ್ವದಲ್ಲಿದೆ.

ಮತುವಾಗಳು ರಾಜ್ಯದ ಒಟ್ಟು ಮತದಾರರಲ್ಲಿ ಸುಮಾರು 17% ರಷ್ಟಿದ್ದು, 30 ವಿಧಾನಸಭಾ ಸ್ಥಾನಗಳಲ್ಲಿ ಗಮನಾರ್ಹ ಉಪಸ್ಥಿತಿಯನ್ನು ಹೊಂದಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ಸಮುದಾಯದ ಅಂದಾಜಿನ ಪ್ರಕಾರ ಅವರ ಮತ ಬ್ಯಾಂಕ್ ಸುಮಾರು 20% ರಷ್ಟಿದ್ದು, 40–45 ಸ್ಥಾನಗಳಲ್ಲಿ ನೇರ ಪರಿಣಾಮ ಬೀರುತ್ತದೆ.

ಬಾಗ್ಡಾ, ಬಂಗಾಂವ್ ಉತ್ತರ ಮತ್ತು ಬಂಗಾಂವ್ ದಕ್ಷಿಣ ಕ್ಷೇತ್ರಗಳು ಸೇರಿದಂತೆ ಈ ಪ್ರದೇಶಗಳು ಎಸ್‌ಐಆರ್‌ನ ಮೊದಲ ಮತ್ತು ಎರಡನೇ ಹಂತಗಳಲ್ಲಿ ಗಮನಾರ್ಹ ಅಳಿಸುವಿಕೆಗಳನ್ನು ಕಂಡಿವೆ. ಉತ್ತರ ಬಂಗಾಳದ ಮತುವಾ ಪ್ರಾಬಲ್ಯದ ಪ್ರದೇಶಗಳಾದ ಮತಿಗರಾ–ನಕ್ಸಲ್ಬರಿ ಮತ್ತು ದಬ್‌ಗ್ರಾಮ್–ಫುಲ್ಬರಿ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಂಖ್ಯೆಯ ಅಳಿಸುವಿಕೆಗಳು ಕಂಡುಬಂದಿವೆ.

ಮುಸ್ಲಿಂ ಮತದಾರರು ‘ವಿಚಾರಣಾ ಹಂತದಲ್ಲಿ’

ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಉತ್ತರ 24 ಪರಗಣಗಳಂತಹ ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿನ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ 100 ಕ್ಕಿಂತ ಕಡಿಮೆ ಮತದಾರರ ಹೆಸರುಗಳನ್ನು ಮಾತ್ರ ಅಳಿಸಲಾಗಿದೆ.

ಅಲ್ಪಸಂಖ್ಯಾತರ ಪ್ರಾಬಲ್ಯದ ಜಿಲ್ಲೆಗಳಲ್ಲಿ ‘ವಿಚಾರಣಾ ಹಂತ’ದಲ್ಲಿ ಇರಿಸಲಾದ ಮತದಾರರ ಸಂಖ್ಯೆ ದೊಡ್ಡದಾಗಿದೆ. ವಿಚಾರಣಾ ಹಂತದಲ್ಲಿ ಇರಿಸಲಾಗಿದೆ ಎಂದರೆ ಮುಂಬರುವ ವಾರಗಳಲ್ಲಿ ಅವರ ಅರ್ಹತೆಯನ್ನು ಕಾನೂನು ಪರಿಶೀಲನೆಯ ಮೂಲಕ ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಆ ಜಿಲ್ಲೆಗಳಲ್ಲಿ ಅಳಿಸಬೇಕಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಪ್ರಾಬಲ್ಯದ ಮುರ್ಷಿದಾಬಾದ್, ಮಾಲ್ಡಾ, ದಕ್ಷಿಣ 24 ಪರಗಣಗಳು, ಉತ್ತರ 24 ಪರಗಣಗಳು, ಹೌರಾ ಮತ್ತು ಉತ್ತರ ದಿನಾಜ್‌ಪುರ ಜಿಲ್ಲೆಗಳಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈ ವರ್ಗದಲ್ಲಿದ್ದಾರೆ ಎಂದು ಡೇಟಾ ತೋರಿಸುತ್ತದೆ.

ರಾಜಕೀಯ ಪರಿಣಾಮ

ಮತುವಾ ಸಮುದಾಯವನ್ನು ಮುನ್ನಡೆಸುವ ಪ್ರಬಲ ಠಾಕೂರ್ ಕುಟುಂಬವು ಆಡಳಿತಾರೂಢ ಟಿಎಂಸಿ ಮತ್ತು ಪ್ರಮುಖ ವಿರೋಧ ಪಕ್ಷ ಬಿಜೆಪಿ ಎರಡರಲ್ಲೂ ಪ್ರಮುಖ ಸದಸ್ಯರನ್ನು ಹೊಂದಿದೆ. ಮತದಾರರ ಪಟ್ಟಿ ನವೀಕರಣ (SIR) ಸಮಯದಲ್ಲಿ ಎರಡೂ ಪಕ್ಷಗಳು ಮತುವಾ ಮತದಾರರಿಗೆ ಸಹಾಯ ಮಾಡಲು ಶಿಬಿರಗಳನ್ನು ನಡೆಸಿದ್ದವು. ಆದರೆ ಪಶ್ಚಿಮ ಬಂಗಾಳದಾದ್ಯಂತ ಹಿಂದೂ ಮತದಾರರನ್ನು ಒಗ್ಗೂಡಿಸುವ ಯೋಜನೆಯ ಕೇಂದ್ರ ಭಾಗವಾಗಿ ಬಿಜೆಪಿ ನಿರ್ದಿಷ್ಟವಾಗಿ ಮತುವಾ ಸಮುದಾಯವನ್ನು ನೋಡುತ್ತಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಂಗಾಳದ 42 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲಲು ಬಿಜೆಪಿಗೆ ಸಹಾಯ ಮಾಡುವಲ್ಲಿ ಮತುವಾ ಸಮುದಾಯವು ಪ್ರಮುಖ ಪಾತ್ರ ವಹಿಸಿತು. ಆದರೆ ಹೊಸ ಮತದಾರರ ಪಟ್ಟಿಗಳ ಮೊದಲ ಕರಡು ಬಿಡುಗಡೆಯಾದಾಗಿನಿಂದ ಪಕ್ಷವು ಸಮುದಾಯದಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದೆ.

ಮತುವಾಗಳಲ್ಲಿ ತನ್ನ ಬೆಂಬಲಿಗರನ್ನು ಬಲಪಡಿಸಲು ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನ್ನು ಎತ್ತಿ ತೋರಿಸುತ್ತಿದೆ. ಬಿಜೆಪಿ ಮತ ಬ್ಯಾಂಕ್ ರಾಜಕೀಯವನ್ನು ಬಯಸುವುದಿಲ್ಲ; ದೇಶಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ಎಸ್‌ಐಆರ್ ಪರವಾಗಿ ನಿಂತಿದೆ ಎಂದು ಪಕ್ಷ ಹೇಳಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉದ್ದೇಶಪೂರ್ವಕವಾಗಿ ಮತುವಾ ಸಮುದಾಯದಲ್ಲಿ ಭಯ ಹುಟ್ಟಿಸಿ ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸದಂತೆ ಮಾಡಿದ್ದಾರೆ. ಅವರು ಸಿಎಎಗೆ ಅರ್ಜಿ ಸಲ್ಲಿಸಿದ್ದರೆ ಅವರಿಗೆ ಈಗಾಗಲೇ ಭಾರತದ ಪೌರತ್ವ ಸಿಗುತ್ತಿತ್ತು ಎಂದು ಬಿಜೆಪಿ ಹೇಳಿದೆ.

ಟಿಎಂಸಿ ಪಕ್ಷವು ಮತದಾರರ ಪಟ್ಟಿ ನವೀಕರಣವನ್ನು ಟೀಕಿಸಿದ್ದು, ಬಿಜೆಪಿ ಮತ್ತು ಚುನಾವಣಾ ಆಯೋಗ ಮುಸ್ಲಿಂ ಮತದಾರರಲ್ಲಿ ಟಿಎಂಸಿಯ ಬೆಂಬಲವನ್ನು ಹಾಳು ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದೆ.

ಆರಂಭದಿಂದಲೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚು ತೊಂದರೆ ಅನುಭವಿಸುತ್ತಿವೆ. ಚುನಾವಣಾ ಆಯೋಗವು ಅನೇಕ ಮುಸ್ಲಿಂ ಮತದಾರರನ್ನು ಅಳಿಸಲು ಯೋಜಿಸಿತ್ತು. ಆದರೆ ಮಮತಾ ಬ್ಯಾನರ್ಜಿ ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದ ನಂತರ ಅದನ್ನು ನಿಲ್ಲಿಸಲಾಯಿತು. ಈಗ ಆ ಪ್ರಕರಣಗಳನ್ನು ನ್ಯಾಯಾಂಗ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದು ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಲು ಬಿಜೆಪಿ ಮತ್ತು ಚುನಾವಣಾ ಆಯೋಗ ಕೈಗೊಂಡ ಉದ್ದೇಶಪೂರ್ವಕ ನಡೆ ಎಂದು ಟಿಎಂಸಿ ವಕ್ತಾರ ಅರೂಪ್ ಚಕ್ರವರ್ತಿ ಹೇಳಿದ್ದಾರೆ.

ಮಮತಾ ಧರಣಿ

ಎಸ್‌ಐಆರ್ ವಿರುದ್ಧ ಕೋಲ್ಕತ್ತಾದಲ್ಲಿ ಶುಕ್ರವಾರ ಧರಣಿ ನಡೆಸುವ ಒಂದು ದಿನ ಮೊದಲು ಮತುವಾ ಪ್ರಾಬಲ್ಯದ ಪ್ರದೇಶಗಳಲ್ಲಿ “ಹೆಚ್ಚಿನ ಮತದಾರರ ಅಳಿಸುವಿಕೆ” ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಮೇಲೆ ದಾಳಿ ನಡೆಸಿದ್ದಾರೆ. ಗುರುವಾರ ಮತುವಾ ನಾಯಕಿ ಬಿನಾಪಾಣಿ ದೇವಿ ಅವರ ಪುಣ್ಯತಿಥಿಯಂದು ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಕೇಂದ್ರ ಸರ್ಕಾರದ ಕ್ರಮಗಳು ಮತುವಾ ಸಮುದಾಯವನ್ನು ಗೊಂದಲಮಯ ಹಾಗೂ ಅಸ್ಥಿರ ಸ್ಥಿತಿಗೆ ತಳ್ಳಿವೆ ಎಂದು ಹೇಳಿದ್ದಾರೆ.

ಬಿಜೆಪಿ ಪೌರತ್ವದೊಂದಿಗೆ ರಾಜಕೀಯ ಮಾಡುತ್ತಿದೆ. ಇದು ಈಗಾಗಲೇ ಭಾರತದ ದೀರ್ಘಕಾಲೀನ ನಾಗರಿಕರಾಗಿರುವ ಜನರ ಗುರುತನ್ನು ಪ್ರಶ್ನಿಸುತ್ತಿದೆ. ಮತದಾರರ ಪಟ್ಟಿ ನವೀಕರಣದ ಮೂಲಕ ಉದ್ದೇಶಪೂರ್ವಕವಾಗಿ ಮತುವಾ ಸಮುದಾಯವನ್ನು ಪಟ್ಟಿಯಿಂದ ಹೊರಹಾಕಲಾಗುತ್ತಿದೆ. ಇದು ಸರ್ಕಾರವನ್ನು ಆಯ್ಕೆ ಮಾಡುವ ಜನರಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ “ಅನ್ಯಾಯದ” ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ ಮಮತಾ, ಬಂಗಾಳದ ಜನರು ಹಾಗೂ ಅವರ ಮತುವಾ ಸಹೋದರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಶುಕ್ರವಾರ ಕೋಲ್ಕತ್ತಾದ ಎಸ್‌ಪ್ಲೇನೇಡ್ ಮೆಟ್ರೋ ಚಾನೆಲ್‌ನಲ್ಲಿ ಧರಣಿ ಆರಂಭಿಸಿದ ಮಮತಾ ಬ್ಯಾನರ್ಜಿ, ಮತದಾರರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿ ಮತ್ತು ಚುನಾವಣಾ ಆಯೋಗ ಪಿತೂರಿ ನಡೆಸುತ್ತಿವೆ. ಇವರ ಮುಖವಾಡ ಕಳಚುತ್ತೇನೆ. ಹಲವು ಮತದಾರರು ಮೃತಪಟ್ಟಿದ್ದಾರೆ ಎಂದು ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಅಂತಹ ಮತದಾರರನ್ನು ಮಾಧ್ಯಮ ಮತ್ತು ಚುನಾವಣಾ ಆಯೋಗದ ಮುಂದೆ ಹಾಜರುಪಡಿಸಲು ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News